ಮಾರ್ಚ್ ಅಂತ್ಯದೊಳಗೆ ರಾಷ್ಟ್ರೀಯ ಹೆದ್ದಾರಿ  ಚತುಷ್ಪತ ಕಾಮಗಾರಿ ಪೂರ್ಣ ಆಗುತ್ತಂತೆ!

Spread the love

ಮಾರ್ಚ್ ಅಂತ್ಯದೊಳಗೆ ರಾಷ್ಟ್ರೀಯ ಹೆದ್ದಾರಿ  ಚತುಷ್ಪತ ಕಾಮಗಾರಿ ಪೂರ್ಣ ಆಗುತ್ತಂತೆ!

ಉಡುಪಿ: ಮಾರ್ಚ್ 2018 ರ ಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯಲ್ಲಿ ಸುರತ್ಕಲ್‍ನಿಂದ ಕುಂದಾಪುರದವರೆಗೆ ಹಾದು ಹೋಗಿರುವ ಚತುಷ್ಪತ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದರು.

ಶುಕ್ರವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆದ  ಜಿಲ್ಲಾ ಅಭಿವೃದ್ದಿ, ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸುರತ್ಕಲ್‍ನಿಂದ ಕುಂದಾಪುರದವರೆಗೆ  ಹಾದು ಹೋಗಿರುವ 90 ಕಿ.ಮೀ ಚತುಷ್ಪತ ಹೆದ್ದಾರಿಯಲ್ಲಿ ಈಗಾಗಲೇ 82 ಕಿಮೀ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ಉಳಿದ 8 ಕಿಮೀ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು, ಹೆದ್ದಾರಿಯ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ, ಕೆಲವು ಕಡೆಗಳಲ್ಲಿ ಸಾರ್ವಜನಿಕರಿಂದ ಬಂದ ಕೋರಿಕೆಗಳನ್ನು ಪರಿಗಣಿಸಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ, ಕಾಮಗಾರಿ ನಡೆಯುತ್ತಿರುವ ಎಲ್ಲಾ ಫ್ಲೈ ಓವರ್ ಗಳನ್ನು ಸಹ ಇದೇ ಅವಧಿಯಲ್ಲಿ ಮುಕ್ತಾಯಗೊಳಿಸಲಗುವುದು ಎಂದು ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕ ವಿಜಯ್ ಕುಮಾರ್ ಸ್ಯಾಮ್ಸನ್ ತಿಳಿಸಿದರು.

ರಸ್ತೆ ಕಾಮಗಾರಿ ನಡೆಸುವ ಕೆಲವು ಕಡೆ  ಸ್ಥಳದಲ್ಲಿ ಪೊಲೀಸ್ ರಕ್ಷಣೆ ನೀಡುವಂತೆ ಕೋರಿದ ಹೆದ್ದಾರಿ ಅಧಿಕಾರಿಗಳ ಕೋರಿಕೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ,  ಯಾವ  ನಿರ್ದಿಷ್ಟ ದಿನಾಂಕ ಮತ್ತು ಸ್ಥಳದದಲ್ಲಿ ರಕ್ಷಣೆ ಅಗತ್ಯವಿದೆ ಎಂದು  ಬಗ್ಗೆ ಪತ್ರ ಬರೆದಲ್ಲಿ, ಪೊಲೀಸ್ ರಕ್ಷಣೆ ನೀಡಲಾಗುವುದು ಹಾಗೂ ಹೆದ್ದಾರಿಯ ಡಿವೈಡರ್ ಗಳ ಮೇಲೆ ಬೆಳೆದಿರುವ ಗಿಡಗಳನ್ನು ಸೂಕ್ತ  ರೀತಿಯಲ್ಲಿ ಕತ್ತರಿಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ರಸ್ತೆ ಕಾಮಗಾರಿಯಲ್ಲಿ,    ತೀರ್ಥಹಳ್ಳಿ – ಕಮರಳ್ಳಿ ರಸ್ತೆ ಕಾಮಗಾರಿಗೆ 110 ಕೋಟಿ ಮೊತ್ತದ ಡಿಪಿಆರ್ ಅಗಿದ್ದು, ಮಲ್ಪೆ- ಪರ್ಕಳ ರಸ್ತೆ ಕಾಮಗಾರಿಗೆ 110 ಕೋಟಿ ಮೊತ್ತದ ಡಿಪಿಆರ್ ಅಗಿದೆ  ಎಂದು ರಾಷ್ಟ್ರೀಯ  ಹೆದ್ದಾರಿ ಪಾಧಿಕಾರದ ಇಂಜಿನಿಯರ್ ಮಾಹಿತಿ ನೀಡಿದರು, ಕೇಂದ್ರ ರಸ್ತೆ ಕಾಮಗಾರಿ ನಿರ್ಮಿಸುವ ಸ್ಥಳದಲ್ಲಿ ಕಾಮಗಾರಿ ಕುರಿತು ಸೂಕ್ತ ವಿವರಣಾ ಫಲಕ ಅಳವಡಿಸುವಂತೆ ಸಂಸದರು ಸೂಚಿಸಿದರು.

ಜಿಲ್ಲೆಯಲ್ಲಿ ನಗದು ರಹಿತ ವಹಿವಾಟನ್ನು ಉತ್ತೇಜಿಸುವ ಕುರಿತಂತೆ , ಜಿಲ್ಲೆಯ 9 ಬ್ಯಾಂಕ್ ಗಳು ತಲಾ 10 ಗ್ರಾಮಗಳನ್ನು ದತ್ತು ಪಡೆದಿದ್ದು, ಈ ಗ್ರಾಮಗಳಲ್ಲಿ ಇದುವರೆವಿಗೂ ನಗದು ರಹಿತ ವ್ಯವಹಾರ ಆರಂಭಗೊಳ್ಳದ ಕುರಿತು , ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಅವರನ್ನು ಸಂಸದರು ಪ್ರಶ್ನಿಸಿದರು, ನಗದು ರಹಿತ ವ್ಯವಹಾರ ಮಾಡಲು ಹೊಸ ಅಪ್ಲೆಕೇಷನ್ ಸಿದ್ದಪಡಿಸಿದ್ದು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದ ಲೀಡ್ ಬ್ಯಾಂಕ್ ಮೆನೇಜರ್ ಫ್ರಾನ್ಸಿಸ್  ಬೋರ್ಗಿಯಾ  ತಿಳಿಸಿದರು, ಡಿಸೆಂಬರ್ 20 ರ ಒಳಗೆ ಈ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಸಂಸದರು, ದತ್ತು ಪಡೆದ ಗ್ರಾಮಗಳಲ್ಲಿ ಡಿಜಿಟಲ್   ವ್ಯವಹಾರ ನಿರ್ವಹಿಸಲು ಅಸಕ್ತಿ ವಹಿಸದ ಬ್ಯಾಂಕ್‍ಗಳಿಗೆ ನೀಡಿರುವ ಗ್ರಾಮಗಳನ್ನು,  ಸಿಂಡಿಕೇಟ್ ಬ್ಯಾಂಕ್ ದತ್ತುಸ್ವೀಕರಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ, 13626 ಮಂದಿ ನಿವೇಶನ ರಹಿತರು ಇದ್ದು, 8872 ಮಂದಿ ಮನೆ ರಹಿತರು ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.  ವಸತಿ ಯೋಜನೆಗಳ ಗುರಿಯನ್ನು ಪೂರ್ಣಗೊಳಿಸುವಂತೆ ಸಂಸದರು ತಿಳಿಸಿದರು.

 ಹೊಸ ರೇಷನ್ ಕಾರ್ಡ್ ಗಾಗಿ 8112 ಅರ್ಜಿ ಸ್ವೀಕರಿಸಿದ್ದು, 6932 ಕಾರ್ಡ್ ಗಳು ಈಗಾಗಲೇ ಪ್ರಿಂಟ್ ಆಗಿ ಅಂಚೆ ಮೂಲಕ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ, ಉಳಿದ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇ ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಗೆ 7500 ಗರ್ಭಿಣಿಯರು ಮತ್ತು 7500 ಬಾಣಂತಿಯರು ಸೇರಿದಂತೆ ಒಟ್ಟು 15000 ಮಂದಿಯನ್ನು ಗುರುತಿಸಲಾಗಿದ್ದು, ಅಕ್ಟೋಬರ್-17 ರಲ್ಲಿ 890 ಗರ್ಭಿಣಿಯರು ಮತ್ತು 658 ಬಾಣಂತಿಯರು ಯೋಜನೆಯ ಪ್ರಯೋಜನ ಪಡೆದಿದ್ದು, ನವೆಂಬರ್ ನಲ್ಲಿ  1642 ಗರ್ಭಿಣಿಯರು ಮತ್ತು 1393 ಬಾಣಂತಿಯರು  ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಮಾಹಿತಿ ನೀಡಿದರು, ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನ ವಿಫಲವಾಗಿದ್ದು, ಜಿಲ್ಲೆಯ ಭೌಗೋಳಿಕ ವ್ಯವಸ್ಥೆ  ಹಾಗೂ ನಾಗರೀಕರ ಮನೋಭಾವ ಅರಿಯದೇ ಯೋಜನೆ ರೂಪಿಸಲಾಗಿದೆ ಎಂದು ಸಂಸದರು ಹೇಳಿದರು.

 ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಸಿಇಓ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.


Spread the love