ಮ0ಗಳೂರು : ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ಟ್ರಕ್ ಟರ್ಮಿನಲ್: ಉಸ್ತುವಾರಿ ಕಾರ್ಯದರ್ಶಿಗಳ ಸೂಚನೆ

Spread the love

ಮ0ಗಳೂರು : ಮಂಗಳೂರು ಎಪಿಎಂಸಿಯ ಬೈಕಂಪಾಡಿ ಪ್ರಾಂಗಣದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸುವ ಸಂಬಂಧ ಪರಿಶೀಲಿಸಲಾಗುವುದು ಎಂದು ರಾಜ್ಯ ಸರಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್‍ಲಾಲ್ ಮೀನಾ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡುತ್ತಿದ್ದರು. ವಿಷಯ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ಸುಮಾರು 100 ಎಕರೆಯಷ್ಟು ಜಾಗವಿದೆ. ಆದರೆ ಅಲ್ಲಿ, ಯಾವುದೇ ಮಹತ್ವದ ಕೃಷಿ ಉತ್ಪನ್ನಗಳ ಚಟುವಟಿಕೆಗಳು ನಡೆಯದೇ, ಭೂಮಿ ಖಾಲಿ ಬಿದ್ದಿವೆ. ಪ್ರಸ್ತುತ ಬೈಕಂಪಾಡಿ, ನವಮಂಗಳೂರು, ಕೈಗಾರಿಕಾ ಪ್ರದೇಶ ಸುತ್ತಮುತ್ತ ತೀವ್ರ ಸಂಚಾರ ಸಮಸ್ಯೆಯಿದೆ. ಹೆದ್ದಾರಿಯಲ್ಲಿ ಭಾರೀ ಸಂಖ್ಯೆಯಲ್ಲಿ ಟ್ರಕ್‍ಗಳ ಪಾರ್ಕಿಂಗ್‍ನಿಂದ ಕೂಳೂರಿನಿಂದ ಸುರತ್ಕಲ್‍ವರೆಗೆ ಸಾರ್ವಜನಿಕ ಸಂಚಾರಕ್ಕೆ ಕಳೆದ ಹಲವು ವರ್ಷಗಳಿಂದ ತೀವ್ರ ತೊಂದರೆಯಾಗುತ್ತಿದೆ. ಬೈಕಂಪಾಡಿ ಎಪಿಎಂಸಿ ಪ್ರಾಂಗಣವನ್ನು ಟ್ರಕ್ ಟರ್ಮಿನಲ್ ಆಗಿ ಪರಿವರ್ತಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗುತ್ತದೆ ಎಂದು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು. ಇದೇ ಸಂದರ್ಭದಲ್ಲಿ ಮಂಗಳೂರು ಮಹಾನಗರಪಲಿಕೆ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಬೈಕಂಪಾಡಿ, ಪಣಂಬೂರು ವ್ಯಾಪ್ತಿಯಲ್ಲಿ ಹೆಚ್ಚಿನ ಕೈಗಾರಿಕೆಗಳು ಇರುವುದರಿಂದ ಬೈಕಂಪಾಡಿ ಎಪಿಎಂಸಿಯಲ್ಲಿ ಟ್ರಕ್ ಟರ್ಮಿನಲ್ ಸೂಕ್ತವಾಗಿದೆ ಎಂದರು.
ಇದಕ್ಕೆ ಸ್ಪಂದಿಸಿದ ಉಸ್ತುವಾರಿ ಕಾರ್ಯದರ್ಶಿ ಭರತ್‍ಲಾಲ್ ಮೀನಾ, ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿ, ಈ ಕುರಿತು ವಿವರ ನೀಡಲು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಬಾಕಿ ಇರುವ ಮಿತವೇತನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಲಭ್ಯ ಇರುವ ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಿ ಬಾಕಿ ಪಾವತಿಸಲು ಕ್ರಮಕೈಗೊಳ್ಳಲು ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು ಹಾಗೂ ಪುತ್ತೂರು ಉಪನೋಂದಣಾಧಿಕಾರಿಗಳ ಕಚೇರಿಯನ್ನು ತಾಲೂಕಿನ ಮಿನಿವಿಧಾನಸೌಧಕ್ಕೆ ಇನ್ನೂ ಸ್ಥಳಾಂತರಿಸದೇ ಇರುವುದಕ್ಕೆ ಅಸಮಧಾನ ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿಗಳು, ಸಾರ್ವಜನಿಕರಿಗೆ ಒಂದೇ ಕಡೆ ಕಂದಾಯ ಇಲಾಖೆಯ ಎಲ್ಲ ಸೌಲಭ್ಯಗಳು ಸಿಗಬೇಕೆಂದು ಮಿನಿವಿಧಾನಸೌಧ ನಿರ್ಮಿಸಲಾಗಿದೆ. ಇದರಲ್ಲಿ ವಿಳಂಭ ಸಲ್ಲದು. ಕೂಡಲೇ ಮಿನಿವಿಧಾನಸೌಧಕ್ಕೆ ಸಬ್‍ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರಿಸಲು ಅವರು ಕಟ್ಟುನಿಟಿನ ಸೂಚನೆ ನೀಡಿದರು.
ಶಿಕ್ಷಣ ಹಕ್ಕು ಕಾಯಿದೆ(ಆರ್‍ಟಿಇ) ಅಡಿ ಬಡವರ ಮಕ್ಕಳು, ದುರ್ಬಲ ವರ್ಗಗಳ ಮಕ್ಕಳಿಗೆ ಆದ್ಯತೆಯಲ್ಲಿ ಶಾಲಾ ಪ್ರವೇಶ ಸಿಗುವುದನ್ನು ಖಾತರಿಪಡಿಸಬೇಕು ಎಂದು ಅವರು ಶಿಕ್ಷಣ ಇಲಾಖೆಗೆ ತಿಳಿಸಿದರು.
ಮಂಗಳೂರು ಮಹಾನಗರಪಾಲಿಕೆಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್‍ಡ್ಯಾಂ ಎತ್ತರ ಹೆಚ್ಚಳದಿಂದ ಮುಳುಗಡೆಯಾಗುವ ಪ್ರದೇಶದ ಗುರುತು ಮಾಡಿ, ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕಂದಾಯ ಇಲಾಖೆ ಮತ್ತು ಮಹಾನಗರಪಾಲಿಕೆ ಸಮನ್ವಯದಿಂದ ತ್ವರಿತಗತಿಯಲ್ಲಿ ಕ್ರಮ ಜರುಗಿಸಲು ಭರತ್‍ಲಾಲ್ ಮೀನಾ ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸಭೆಯಲ್ಲಿ ಮಾತನಾಡಿ, ಮಂಗಳೂರು ವಿಮಾನನಿಲ್ದಾಣ ರನ್‍ವೇಯನ್ನು 11000 ಅಡಿ ವಿಸ್ತರಿಸಲು 68 ಎಕರೆ ಭೂಮಿ ಅಗತ್ಯವಾಗಿದ್ದು, ಈ ಬಗ್ಗೆ 45 ಕೋಟಿ ಮೊತ್ತ ಬೇಕಾಗಿದೆ. ಈ ಸಂಬಂಧ ಪರಿಷ್ಕøತ ಯೋಜನಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಸಿಬ್ಬಂಧಿಗಳ ಕೊರತೆಯನ್ನು ನೀಗಿಸಲು ಗ್ರಾಮಲೆಕ್ಕಿಗರಿಗೆ ದ್ವಿತೀಯ ದರ್ಜೆ ಸಹಾಯಕರ ವೃಂದ ಬದಲಾವಣೆಗೆ ಅನುಮತಿ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಲ್ಲಿ ಕೋರಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love