ಯುಜಿಡಿ ದುರಸ್ತಿಗೆ ಸಾರ್ವಜನಿಕ ಸಹಕಾರ ನೀಡಲು ಮನಪಾ ಮನವಿ

Spread the love

ಯುಜಿಡಿ ದುರಸ್ತಿಗೆ ಸಾರ್ವಜನಿಕ ಸಹಕಾರ ನೀಡಲು ಮನಪಾ ಮನವಿ

ಮ0ಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿರುವ ಒಳಚರಂಡಿ ವ್ಯವಸ್ಥೆಯು 1970ರ ದಶಕದಲ್ಲಿ ಅನುಷ್ಠಾನಗೊಂಡಿರುತ್ತದೆ. (ಹಳೆಯ ಮುನ್ಸಿಪಲ್ ಪ್ರದೇಶ) ಮೂಲ ಒಳಚರಂಡಿ ಯೋಜನೆಯ ಧಾರಣಾ ಸಾಮಥ್ರ್ಯವು ಈಗಿನ ಜನಸಂಖ್ಯೆಯ ಜಲತ್ಯಾಜ್ಯದ ಒತ್ತಡವನ್ನು ನಿಭಾಯಿಸುವ ಸ್ಥಿತಿಯಲ್ಲಿರುವುದಿಲ್ಲ. ನಗರದ ಜನಸಂಖ್ಯೆ ಮತ್ತು ತೀವ್ರಗತಿಯ ಬೆಳವಣಿಗೆಯಿಂದಾಗಿ ಮೂಲ ಯೋಜನೆಯಡಿ ಹಾಕಲಾದ ಒಳಚರಂಡಿ ಜಾಲದ ಸ್ಟೋನ್‍ವೇರ್ ಪೈಪ್, ಆರ್.ಸಿ.ಸಿ ಪೈಪ್‍ಗಳ ಸಂಧುಗಳ ಮುಖಾಂತರ ಮರದ ಬೇರುಗಳು ನುಗ್ಗಿರುವುದಲ್ಲದೇ ಕೊಳವೆಗಳು ಅಲ್ಲಲ್ಲಿ ಸವೆದಿರುವುದು ಸಾಮಾನ್ಯವಾಗಿರುತ್ತದೆ.

ಕಲ್ಲು, ಇಟ್ಟಿಗೆಗಳಿಂದ ಕಟ್ಟಲಾದ ಆಳುಗುಂಡಿ(ಮ್ಯಾನ್‍ಹೋಲ್)ಯ ವಯಸ್ಸು ಮತ್ತು ಸೀವೇಜ್ ನೀರಿನಿಂದ ಕರಗಿ ಹೆಚ್ಚಿನ ಮ್ಯಾನ್‍ಹೋಲ್‍ಗಳು ಕುಸಿದು ಬಿದ್ದು, ಒಳಚರಂಡಿ ನೀರು ಹರಿಯುವಿಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿಯುತ್ತಿರುವ ಬಗ್ಗೆ ಪಾಲಿಕೆಗೆ ನಿರಂತರವಾಗಿ ದೂರುಗಳು ಬರುತ್ತಿರುತ್ತದೆ. ಈ ರೀತಿ ಕುಸಿದ ಆಳುಗುಂಡಿ ಮತ್ತು ಕೊಳವೆ ಮಾರ್ಗಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಆದ್ಯತೆ ಮೇರೆಗೆ ದುರಸ್ತಿ ಕೆಲಸಗಳನ್ನು ಪಾಲಿಕೆಯು ಸಕಾಲಿಕವಾಗಿ ಕೈಗೆತ್ತಿಕೊಳ್ಳುತ್ತಿದೆ. ಹಲವಾರು ಸನ್ನಿವೇಶಗಳಲ್ಲಿ ತತ್ಕ್ಷಣ ಕಾಮಗಾರಿಯನ್ನು ಮಾಡಬೇಕಾದ ಸಂದರ್ಭಗಳು ಬಂದು ರಸ್ತೆ, ವೃತ್ತ ಮತ್ತು ಜಂಕ್ಷನ್‍ಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಯಾ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚರಿಸುವಂತೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿರುತ್ತದೆ.

ಈ ಕಾರಣದಿಂದಾಗಿ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ವ್ಯತ್ಯಯ/ ಅನಾನುಕೂಲವಾಗಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಈ ಮಧ್ಯೆ ದುರಸ್ತಿ ಕಾಮಗಾರಿಗಾಗಿ ಕಡಿದ ಎಲ್ಲಾ ವಿಧದ ರಸ್ತೆಯನ್ನು ತಕ್ಷಣಾ ಪುನರ್ ಸ್ಥಿತಿಗೆ ತರಲು ಪಾಲಿಕೆಯಿಂದ ಅಗತ್ಯ ಕ್ರಮವಹಿಸಲಾಗುತ್ತಿದೆ. ಆದಾಗ್ಯೂ ಕೆಲವೊಂದು ಕಡೆ ಅನಾನುಕೂಲವಾಗಿರುವುದು ಕೂಡಾ ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಲು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.


Spread the love