ರಾಜ್ಯದಲ್ಲಿ ಬರದ ಛಾಯೆ: ಸರಳ ದಸರಾಗೆ ಚಿಂತನೆ

Spread the love

ಬೆಂಗಳೂರು: ರಾಜ್ಯಾದ್ಯಂತ ಬರ ತಲೆದೋರಿರುವ ಹಿನ್ನೆಲೆಯಲ್ಲಿ ಈ ಸಲ ನಾಡಹಬ್ಬ ದಸರಾವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸುವುದಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ.

ದಸರಾ ಆಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ರೈತ ಸಂಘಟನೆಗಳ ಜತೆ ಸಭೆ ನಡೆಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.

dasara

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಕ್ಟೋಬರ್ 22ಕ್ಕೆ ದಸರಾ ಆಚರಣೆ ಆಗಬೇಕು. ಆದರೆ ಬರದ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡುವಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಡಂಬರ ಬೇಡ ಎಂಬ ಸಲಹೆ ವ್ಯಕ್ತವಾಗಿದೆ. ಈ ಹಿನ್ನೆಲೆ ಯಲ್ಲಿ ನಾವು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಈ ಬಗ್ಗೆ ಇನ್ನಷ್ಟು ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮೂರು ಕಂದಾಯ ವಿಭಾಗದಲ್ಲಿ ಸಭೆ ನಡೆಸಿದ್ದಾರೆ. 1972ರ ನಂತರ ಇದೇ ಮೊದಲ ಬಾರಿಗೆ ರಾಜ್ಯ ಭೀಕರ ಬರ ಎದುರಿಸುತ್ತಿದೆ. ಜುಲೈ, ಆಗಸ್ಟ್ ನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಬಿತ್ತನೆ ಮತ್ತು ಬೆಳೆ ಗುರಿಯಲ್ಲಿ ವ್ಯತ್ಯಾಸವಿದೆ. ಇದೆಲ್ಲದರ ಹಿನ್ನೆಲೆ ಯಲ್ಲಿ ಅದ್ಧೂರಿಯಾಗಿ ದಸರಾ ಆಚರಿಸ ಬೇಕೇ? ಬೇಡವೇ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದರು. ದೇಶದ 476 ನಗರಗಳ ಪೈಕಿ ಮೈಸೂರು ಅತ್ಯಂತ ಸ್ವಚ್ಛ ನಗರ ಎಂದು ಕೇಂದ್ರ ಸರ್ಕಾರವೇ ಒಪ್ಪಿದೆ. ದಸರಾ ಮಹೋತ್ಸವ ವಿಶ್ವವಿಖ್ಯಾತ. ಹೀಗಾಗಿ ಇದನ್ನು ಆಚರಿಸದೇ ಇದ್ದರೆ ಆಗುವ ಪರಿಣಾಮ ಏನೆಂಬ ಬಗ್ಗೆಯೂ ಚರ್ಚೆ ನಡೆಸಬೇಕಾಗುತ್ತದೆ ಎಂದರು.

ಯಾರು ಉದ್ಘಾಟಕರು?:  ದಸರಾ ಯಾರು ಉದ್ಘಾಟಿಸಬೇಕೆಂಬ ಕುರಿತು ಚರ್ಚೆಯಾಗಿದೆ.  ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಅವರು ಸರಸ್ವತಿ ಸಮ್ಮಾನ್ ಪುರಸ್ಕೃತ

ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರನ್ನು ಉದ್ಘಾಟನೆಗೆ ಕರೆಯುವಂತೆ ಸಭೆಯಲ್ಲಿ ಆಗ್ರಹಿಸಿದ್ದಾರೆ. ಮೈಸೂರು ಸಂಸದ ಪ್ರತಾಪ್ ಸಿಂಹ ಅವರೂ ಭೈರಪ್ಪ ಅವರನ್ನು ಆಹ್ವಾನಿ

ಸುವಂತೆ ಸಿಎಂ ಅವರಿಗೆ ಪತ್ರ ಬರೆದಿದ್ದಾರೆ.

ಎಲ್ಲಪ್ಪ, ಅವರು ಬಂದೇ ಇಲ್ಲ !

ಎಲ್ಲಪ್ಪ ಅವರು ಮೀಟಿಂಗ್‍ಗೇ ಬಂದೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಎಸ್.ಎಲ್. ಭೈರಪ್ಪ ಅವರನ್ನು ಆಹ್ವಾನಿಸುವಂತೆ ಪ್ರತಾಪ್ ಸಿಂಹ ಪತ್ರ ಬರೆದಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ದಸರಾ ಹೇಗೆ ಆಚರಿಸಬೇಕೆಂಬ ಬಗ್ಗೆ ಇನ್ನೂ ಚರ್ಚೆಯಾಗುತ್ತಿದೆ. ಪತ್ರ ಬರೆದಿದ್ದಾರೆ, ಆದರೆ ಸಭೆಗೆ ಬಂದಿಲ್ಲ ಎಂದರು.


Spread the love