ವಡ್ಡರ್ಸೆ ರಘುರಾಮ ಶೆಟ್ಟಿ ಸಂಸ್ಮರಣೆ, ಪ್ರತಿಭಾ ಪುರಸ್ಕಾರ

Spread the love

ಕೋಟ: ವಡ್ಡರ್ಸೆ ರಘುರಾಮ ಶೆಟ್ಟರು ನಿರ್ಭಿತ ಪತ್ರಕೋಧ್ಯಮದ ಮೂಲಕ ಸಮಾಜದಲ್ಲಿ ಸಂಚಲನ ಉಂಟು ಮಾಡಿದ ಪತ್ರಕರ್ತ. ನಿಷ್ಪಕ್ಷಪಾತವಾದ್ ವರದಿಗಳ ಮೂಲಕ ಹಲವು ಬದಲಾವಣೆಗಳಿಗೆ ಕಾರಣರಾದ ಧೀಮಂತ ಪತ್ರಕರ್ತ ವಡ್ಡರ್ಸೆಯವರ ಆದರ್ಶ, ಧ್ಯೇಯ ಧೋರಣೆಗಳನ್ನು ಇಂದಿನ ಪತ್ರಕರ್ತರು ಮನಗಾಣಬೇಕು ಎಂದು ಸಾಮಾಜಿಕ ಹೋರಾಟಗಾರ ಜ್ಞಾನವಸಂತ ಶೆಟ್ಟಿ ಬ್ರಹ್ಮಾವರ ತಿಳಿಸಿದರು.
ಅವರು ವಡ್ಡರ್ಸೆ ಮಹಾಲಿಂಗೇಶ್ವರ ಸಭಾಭವನದಲ್ಲಿ ನಿಮ್ಮ ಅಭಿಮತ ಪಾಕ್ಷಿಕ ಪತ್ರಿಕೆ ಹಾಗೂ ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ವಡ್ಡರ್ಸೆಯವರ ಬದುಕು, ಬರಹದ ಕುರಿತು ಅವರು ಮಾತನಾಡಿದರು. ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ ವಡ್ಡರ್ಸೆಯವರು, ಮುಂದೆ ಮುಂಗಾರು ಪತ್ರಿಕೆ ಆರಂಭಿಸುವ ಮೂಲಕ ಹಲವಾರು ಪತ್ರಕರ್ತರಿಗೆ ಅವಕಾಶ ಒದಗಿಸಿದ್ದಾರೆ. ಪತ್ರಿಕೋಧ್ಯಮದ ಜವಾಬ್ದಾರಿ, ಕರ್ತವ್ಯ, ಪತ್ರಕರ್ತನ ಜವಾಬ್ದಾರಿ ಇತ್ಯಾದಿಗಳನ್ನು ಅವರ ವರದಿ, ಬರಹಗಳ ಮೂಲಕ ಮನಗಾಣಬಹುದು ಎಂದರು.

vaddarse-raghuram-shetty

ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಡ್ಡರ್ಸೆಯವರ ಸಹೋದರ ಸದಾಶಿವ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಉದಯಕುಮಾರ್ ಶೆಟ್ಟಿ ಕೊತ್ತಾಡಿ, ಸಹಕಾರಿ ಧುರೀಣ ಭೋಜರಾಜ ಹೆಗ್ಡೆ, ಮುಖ್ಯ ಶಿಕ್ಷಕ ಆನಂದ ಶೆಟ್ಟಿ, ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಅಶ್ವಥ ಆಚಾರ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 611 ಅಂಕ ಪಡೆದ ಸ್ಥಳೀಯ ಪ್ರೌಢಶಾಲಾ ವಿದ್ಯಾರ್ಥಿನಿ ನಾಗಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪತ್ರಕರ್ತ ರಾಜೇಶ ಗಾಣಿಗ ಅಚ್ಲಾಡಿ ಸ್ವಾಗತಿಸಿ, ವಸಂತ ಗಿಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ಶರತ್ ವಂದಿಸಿದರು.


Spread the love