ವಿದೇಶಗಳಿಗೆ ಕೆಲಸಕ್ಕೆಂದು ತೆರಳುವಾಗ ಏಜೆಂಟರ ಪೂರ್ವಾಪರ ಪರಿಶೀಲಿಸಿ ; ರವೀಂದ್ರನಾಥ ಶ್ಯಾನುಬೋಗ್

Spread the love

ವಿದೇಶಗಳಿಗೆ ಕೆಲಸಕ್ಕೆಂದು ತೆರಳುವಾಗ ಏಜೆಂಟರ ಪೂರ್ವಾಪರ ಪರಿಶೀಲಿಸಿ ; ರವೀಂದ್ರನಾಥ ಶ್ಯಾನುಬೋಗ್

ಉಡುಪಿ: ವಿದೇಶಗಳಿಗೆ ಕೆಲಸಕ್ಕೆಂದು ತೆರಳುವಾಗ ಕೆಲಸ ಒದಗಿಸುವ ಭರವಸೆ ನೀಡಿದ ಏಜೆಂಟ್ನ ಪೂರ್ವಾಪರ ಪರಿಶೀಲಿಸಿ ಮುಂದುವರಿಯುವುದು ಉತ್ತಮ. ಏಕೆಂದರೆ ವಿದೇಶಕ್ಕೆ ಹೋಗುವುದು ಸುಲಭ ಮತ್ತೇ ವಾಪಾಸು ಬರುವುದು ಬಹಳ ಕಷ್ಟ’ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ ಶ್ಯಾನುಬೋಗ್ ತಿಳಿಸಿದರು.

ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ವಿದೇಶಗಳಿಗೆ ತೆರಳಿದ ಸಮುದಾಯದ ಜನರು ಎದುರಿಸುವ ಸಮಸ್ಯೆಗಳು ಮತ್ತು ಪರಿಹಾರ ನೆರವು’ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿದೇಶಗಳಿಗೆ ಕೆಲಸಕ್ಕೆಂದು ತೆರಳಿದ 100ರಲ್ಲಿ 92 ಮಂದಿ ಮಾನವ ಕಳ್ಳ ಸಾಗಣೆಗೆ ಒಳಗಾಗುತ್ತಾರೆ. ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುವವರು ಅಥವಾ ಸಂಬಂಧಿಕರು ಕರೆಯಿಸಿಕೊಂಡವರು ಸಮಸ್ಯೆಗೊಳಗಾಗುವುದು ಬಹಳ ಕಡಿಮೆ. ಏಜೆಂಟ್ಗಳ ಮೂಲಕ ತೆರಳುವವರು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಎಲ್ಲಾ ಸಮಯದಲ್ಲೂ ಪತ್ರಿಯೊಬ್ಬರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಮುದಾಯದ ಮಂದಿ ಅವರ ನೆರವಿಗೆ ನಿಲ್ಲಬೇಕಾಗುತ್ತದೆ. 4–5 ವರ್ಷಗಳಲ್ಲಿ 900 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಅತಿಹೆಚ್ಚು ಪ್ರಕರಣಗಳು ಕೆಥೋಲಿಕ್ ಸಮುದಾಯಕ್ಕೆ ಸಂಬಂಧಿಸಿದ್ದಾಗಿವೆ. ಸಮುದಾಯದ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

‘ಭಾರತದಿಂದ ಪ್ರತಿ ವರ್ಷ 2.5 ಲಕ್ಷ ಜನರು ವಿದೇಶಗಳಿಗೆ ಹೋಗುತ್ತಿದ್ದು, ಮಂಗಳೂರಿನಿಂದಲೇ ಸುಮಾರು 12 ಸಾವಿರ ಜನರು ತೆರಳುತ್ತಾರೆ. ಆದರೆ, ಇಲ್ಲಿ ಏಜೆಂಟರ ಮೂಲಕ ವಿದೇಶಕ್ಕೆ ಹೋಗುತ್ತಿರುವುದರಿಂದ ಅವರ ಔದ್ಯೋಗಿಕ ಮಾಹಿತಿ ಪಡೆಯುವುದು ಕಷ್ಟಸಾಧ್ಯ. ಮುಂಬೈ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಕಪ್ಪುಪಟ್ಟಿಗೆ ಸೇರಿದ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಕರಾವಳಿ ಭಾಗದಿಂದ ಪ್ರತಿವರ್ಷ ಸಾವಿರಾರು ಜನರು ಉದ್ಯೋಗ ನಿಮಿತ್ತ ಮಧ್ಯಪ್ರಾಚ್ಯ ದೇಶಗಳಿಗೆ ತೆರಳುತ್ತಾರೆ. ಆದರೆ, ಇಲ್ಲಿ ಸರ್ಕಾರದಿಂದ ನೋಂದಾಯಿತಗೊಂಡ ಏಜೆನ್ಸಿಗಳೇ ಇಲ್ಲ. ಮಂಗಳೂರಿನ ಏಜೆಂಟರ ಮೂಲಕ ಉದ್ಯೋಗದ ಆಮಿಷವೊಡ್ಡಿ ನಿರುದ್ಯೋಗಿಗಳನ್ನು ಶ್ರೀಮಂತರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಶಿರ್ವದ ಜೆಸಿಂತಾ ಪ್ರಕರಣ ಕೂಡ ಇದೇ ರೀತಿಯದ್ದು. ಕಳ್ಳಹಾದಿಯಲ್ಲಿ ತೆರಳಿದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕೂಡ ಅವರ ಸಹಾಯಕ್ಕೆ ಬರಲಿಲ್ಲ. ಬಳಿಕ ಅವರನ್ನು ಖರೀದಿಸಿದ ವ್ಯಕ್ತಿಗೆ ಐದು ಲಕ್ಷವನ್ನು ಕೊಟ್ಟು ಬಿಡಿಸಿಕೊಂಡು ಬರಬೇಕಾಯಿತು’ ಎಂದು ಹೇಳಿದರು.

ಮಾನವ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಮುಂಬೈನ ಶಾಬಾಸ್ಖಾನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆಯಲಾಗಿತ್ತು. ಅವರು ಈ ಕುರಿತು ಮುಂಬೈ ಐಜಿಪಿಗೆ ಸೂಚನೆಯನ್ನು ನೀಡಿರುವ ಪ್ರತಿಯನ್ನು ನನಗೆ ಕಳುಹಿಸಿದ್ದರು. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದರ ಬಗ್ಗೆ ಮತ್ತೆ ಪತ್ರವನ್ನು ಬರೆದಾಗ, ‘ಸಚಿವೆಯ ಪತ್ರವೇ ಸಿಕ್ಕಿಲ್ಲ’ ಎನ್ನುವ ಉತ್ತರ ಬಂತು. ಇದು ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಒಂದು ಉದಾಹರಣೆ’ ಎಂದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಆರ್.ಫರ್ನಾಂಡಿಸ್, ನಿಯೋಜಿತ ಅಧ್ಯಕ್ಷ ಮೇರಿ ಡಿಸೋಜ, ಖಜಾಂಚಿ ಜೆರಾಲ್ಡ್ ರೊಡ್ರಿಗಸ್, ಆಧ್ಯಾತ್ಮಿಕ ನಿರ್ದೇಶಕ ಫರ್ಡಿನಾಂಡ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.


Spread the love