ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಂಕರನಾರಾಯಣ ಮುಖ್ಯ ಶಿಕ್ಷಕನ ಬಂಧನ

Spread the love

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಂಕರನಾರಾಯಣ ಮುಖ್ಯ ಶಿಕ್ಷಕನ ಬಂಧನ

ಕುಂದಾಪುರ: ಶಂಕರನಾರಾಯಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕನನ್ನು ಶಂಕರನಾರಾಯಣ ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಶಿಕ್ಷಕನನ್ನು ಸಿದ್ದಾಪುರ ಐರ್ ಬೈಲು ನಿವಾಸಿ ಶ್ರೀನಿವಾಸ ಜೋಶಿ (59) ಎಂದು ಗುರುತಿಸಲಾಗಿದೆ.

ಶ್ರೀನಿವಾಸ ಜೋಶಿ ಕಳೆದ ನಾಲ್ಕೈದು ವರ್ಷಗಳಿಂದ ಮುಖ್ಯ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲವು ಸಮಯದಿಂದ ಶಾಲೆಯ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಕ್ಕಳು ತಮ್ಮ ಪೋಷಕರಲ್ಲಿ ವಿಚಾರ ತಿಳಿಸಿದ್ದರು. ಪೋಷಕರು ಈ ಕುರಿತು ಶಿಕ್ಷಣ ಇಲಾಖೆಗೆ ದೂರು ನೀಡಿದ್ದು, ಅದರಂತೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಅವರು ಕಳೆದ ಶನಿವಾರ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದಾಗ ಆರೋಪಿ ಮುಖ್ಯ ಶಿಕ್ಷಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪೋಷಕರು ಶಂಕರನಾರಾಯಣ ಪೋಲಿಸ್ ಠಾಣೆಯಲ್ಲಿ ಜೋಶಿ ವಿರುದ್ದ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಿಕೊಂಡು ಮುಖ್ಯ ಶಿಕ್ಷಕನ್ನು ಪೋಲಿಸರು ಬಂಧಿಸಿದ್ದಾರೆ.


Spread the love