ಶೃಂಗೇರಿ ವಿದ್ಯಾರ್ಥಿ ಆತ್ಮಹತ್ಯೆ: ದೇಶಭಕ್ತಿ ಕಾರ್ಯಕ್ರಮ ವಿರೋಧಿಸುವ ಸಂಘಟನೆಗಳ ನಿಗ್ರಹಿಸಿ: ಕಾರ್ಣಿಕ್

Spread the love

ಶೃಂಗೇರಿ ವಿದ್ಯಾರ್ಥಿ ಆತ್ಮಹತ್ಯೆ: ದೇಶಭಕ್ತಿ ಕಾರ್ಯಕ್ರಮ ವಿರೋಧಿಸುವ ಸಂಘಟನೆಗಳ ನಿಗ್ರಹಿಸಿ: ಕಾರ್ಣಿಕ್
ಮಂಗಳೂರು: ರಾಷ್ಟ್ರದ ಏಕತೆ ಹಾಗೂ ರಕ್ಷಣೆಗಾಗಿ ಸರ್ವೋಚ್ಛ ಬಲಿದಾನಗಳಿಗೆ ಸದಾ ಸಿದ್ಧರಿರುವ ಯೋಧರನ್ನು ಸ್ಮರಿಸುವ ಕಾರ್ಯಕ್ರಮವನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಿ ಯುವಕರಲ್ಲಿ ದೇಶಪ್ರೇಮವನ್ನು ಜಾಗ್ರತೆಗೊಳಿಸುವ ಜವಾಬ್ದಾರಿ ನಮ್ಮ ಶೈಕ್ಷಣಿಕ ಸಂಸ್ಥೆಗಳಿಗಿರುವ ಪ್ರಮುಖವಾದ ಕರ್ತವ್ಯ. ಈ ರೀತಿ “ಯೋಧರಿಗೆ ನಮನ” ಗಳನ್ನು ಸಲ್ಲಿಸುವ ಕಾರ್ಯಕ್ರಮವನ್ನೂ ಪ್ರತಿಭಟಿಸುವ ಎನ್ ಎಸ್ ಐ ಯು ನಂತಹ ಸಂಘಟನೆಗಳ ಮೂರ್ಖ ನಿರ್ಣಯದಿಂದ ಉಂಟಾದ ಬಿಗುವಿನ ವಾತಾವರಣ ಹಾಗೂ ಅಧಿಕಾರದಲ್ಲಿರುವ ಪಕ್ಷದ ಅಡಿಯಾಳಾಗಿ ವರ್ತಿಸುವ ಪೊಲೀಸ್ ಬೇಜವಾಬ್ದಾರಿ ವರ್ತನೆ ಓರ್ವ ಸಾಮಾಜಿಕ ಕಾಳಜಿಯುಳ್ಳ ದೇಶ ಭಕ್ತ ಯುವಕನ ಆತ್ಮಹತ್ಯೆಯಲ್ಲಿ ಕೊನೆಗೊಂಡಿರುವುದು ಒಂದು ಅಕ್ಷಮ್ಯ ದುರಂತ ಹಾಗೂ ಅಧಿಕಾರಶಾಹಿಯ ಸಂವೇದನಾ ರಹಿತ ವರ್ತನೆಗೆ ನಿದರ್ಶನ.

ನಮ್ಮನ್ನು ಅಗಲಿದ ಶ್ರೀಂಗೇರಿಯ ಕಾಲೇಜು ವಿದ್ಯಾರ್ಥಿ ಅಭಿಷೇಕನ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಆ ವಿದ್ಯಾರ್ಥಿಯ ಕುಟುಂಬದವರಿಗೂ ಹಾಗೂ ಅವನ ಸ್ನೇಹಿತರಿಗೂ ಅವನ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಪರಮಾತ್ಮ ಭರಿಸಲಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾರ್ಥಿಸಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಶಾಲಾ ಕಾಲೇಜುಗಳಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವಂತೆ ಹಾಗೂ ದೇಶಭಕ್ತಿಯ ಕಾರ್ಯಕ್ರಗಳನ್ನು ವಿರೋಧಿಸಿ ಅಡಚಣೆ ಉಂಟು ಮಾಡುವ ಅರಾಷ್ಟ್ರೀಯ ಸಂಘಟನೆಗಳನ್ನು ನಿಗ್ರಹಿಸುವಂತೆ ಆಗ್ರಹಿಸಿದ್ದಾರೆ.


Spread the love