ಸರಕಾರಿ ಮತ್ತು ಸಮಾಜದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿ : ಸಂಸದ ಹೆಗಡೆ

Spread the love

ಸರಕಾರಿ ಮತ್ತು ಸಮಾಜದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿ : ಸಂಸದ ಹೆಗಡೆ

ಉಡುಪಿ: ರಾಜಕೀಯ ಎನ್ನುವುದು ಒಂದು ವಿಶಿಷ್ಟವಾದ ಕ್ಷೇತ್ರ. ಶ್ರಮ, ಸಾಮಥ್ರ್ಯ ಮತ್ತು ಕಾರ್ಯಕ್ರಮಗಳ ಮೇಲೆ ರಾಜಕೀಯ ಪಕ್ಷದ ಯಶಸ್ಸು ನಿಂತಿದೆ. ವಾಸ್ತವಕ್ಕೂ ಮತ್ತು ವ್ಯವಹಾರಕ್ಕೂ ವ್ಯತ್ಯಾಸ ಮಾಡಿದಾಗ ರಾಜಕೀಯ ಮುಖಂಡರನ್ನು ಜನ ನಂಬುವುದಿಲ್ಲ ಎಂದು ಸಂಸದ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಪ್ರಭಾರಿ ಅನಂತ್ ಕುಮಾರ್ ಹೆಗಡೆ ಹೇಳಿದರು.

ಅವರು ರವಿವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

bjp-udupi-meeting

1857 ರಿಂದ ಆರಂಭಗೊಂಡ ಸ್ವಾತಂತ್ರ್ಯ ಹೋರಾಟ 1947 ರವರೆಗೆ 90 ವರ್ಷಗಳ ಕಾಲ ನಡೆಯಿತು. ನಂತರ ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ರವರ ಸಂಪುಟದಲ್ಲಿ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರು ಸಚಿವರಾದರು, ಒಂದು ದೇಶದಲ್ಲಿ ಎರಡು ಕಾನೂನು ವ್ಯವಸ್ಥೆಯನ್ನು ವಿರೋಧಿಸಿ ಸಂಪುಟದಿಂದ ಹೊರಬಂದರು, ನಂತರ ಅವರ ಹತ್ಯೆಯೂ ನಡೆಯಿತು. ಅಂದಿನಿಂದ ಸಂಘರ್ಷ ಆರಂಭಗೊಂಡು ಇಂದಿರಾಗಾಂಧಿಯವರಿಂದ ದೇಶಕ್ಕೆ ಕರಾಳ ತುರ್ತು ಪರಿಸ್ಥಿತಿ ಹೇರಿಕೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಹೀನಾಯ ಸೋಲು, ಜನತಾ ಪರಿವಾರದ ಮುರಾರ್ಜಿ ದೇಸಾಯಿಯವರ ಸರಕಾರ, ನಂತರ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರಕಾರ, ಈಗ ನರೇಂಧ್ರ ಮೋದಿಯವರ ಸ್ವಂತ ಬಲದ ಬಿಜೆಪಿ ಸರಕಾರ ಇದೆಲ್ಲಾ ರಾಜಕೀಯ ಇತಿಹಾಸ. ಕರ್ನಾಟಕದಲ್ಲಿಯೂ ಬಿ. ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಉತ್ತಮ ಜನಪರ ಆಡಳಿತಕ್ಕೆ ಹೆಸರು ಮಾಡಿದೆ. ಮತ್ತೊಮ್ಮೆ ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರಕಾರ ಅಧಿಖಾರಕ್ಕೆ ತರುವಲ್ಲಿ ಕಾರ್ಯಕರ್ತರು ಪಣತೊಟ್ಟು ದುಡಿಯಬೇಕೆಂದು ಅನಂತ್ ಕುಮಾರ್ ಹೆಗಡೆ ತಿಳಿಸಿದರು.

ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಮಾತನಾಡಿ ಜಿಲ್ಲೆಯಲ್ಲಿ ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡೆ, ಅದು ಎಲ್ಲಾ ಹಿರಿಯರ ಮತ್ತು ಯುವ ಕಾರ್ಯಕರ್ತರ ಶಿಸ್ತುಬದ್ಧ ಸಂಘಟನಾ ಕೌಶಲದಿಂದ ನಂತರ ಎಲ್ಲಾ ಚುನಾವಣೆಯಲ್ಲಿ ಉಡುಪಿ ಮತ್ತೊಮ್ಮೆ ಬಿಜೆಪಿ ಜಿಲ್ಲೆ ಎನ್ನುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಮಟ್ಟಾರ್ ರತ್ನಾಕರ ಹೆಗ್ಡೆಯವರು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಜಿಲ್ಲಾ ವರದಿ ಮಂಡಿಸಿ, ಜಿಲ್ಲಾ ಪದಾಧಿಕಾರಿಗಳನ್ನು ಪರಿಚಯಿಸಿದರು. ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿಯವರು ಗ್ರಾಮಾಂತರ ಮತ್ತು ನಗರ ಪ್ರದೇಶದ ಬಡವರ ಅಕ್ರಮ ಮನೆ ಮತ್ತು ಮನೆ ಅಡಿ ಸ್ಥಳದ ಸಕ್ರಮೀಕರಣವನ್ನು ಮಾಡಿ ಕೂಡಲೇ ಹಕ್ಕು ಪತ್ರ ನೀಡುವ ಕುರಿತಾಗಿ ಸರಕಾರವನ್ನು ಆಗ್ರಹಿಸುವ ನಿರ್ಣಯವನ್ನು ಮಂಡಿಸಿದರು. ಕಾರ್ಕಳ ಕ್ಷೇತ್ರ ಸಮಿತಿಯ ಅಧ್ಯಕ್ಷ ಮಣಿರಾಜ್ ಶೆಟ್ಟಿ ನಿರ್ಣಯವನ್ನು ಅನುಮೋದಿಸಿದರು.

ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಂಗಳೂರು ಮುಂದಿನ ಕಾರ್ಯಕ್ರಮಗಳ ವಿವರ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಟ್ಟಾರ್ ರತ್ನಾಕರ ಹೆಗಡೆಯವರು ಸಮಾರೋಪ ಭಾಷಣ ಮಾಡಿ ಒಟ್ಟು ಸಂಘಟನೆಗೆ ಪೂರಕವಾಗುವಂತೆ ಜಿಲ್ಲಾ ಸಮಿತಿ, ಕ್ಷೇತ್ರ ಸಮಿತಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳ ನೇಮಕಾತಿಗಳಲ್ಲಿ ಪ್ರದೇಶ, ಜಾತಿ, ವರ್ಗಗಳ ಸಮತೋಲನವನ್ನು ಮಾಡಲಾಗಿದೆ. ಉತ್ಸಾಹದಿಂದ ಕೆಲಸ ಮಾಡುವ ಕಾರ್ಯಕರ್ತರನ್ನು ವಿವಿಧ ಪ್ರಕೋಷ್ಠಗಳಲ್ಲಿ ತೊಡಗಿಸಿಕೊಳ್ಳಲಾಗುವುದು, ಪಕ್ಷದ ಸಂಘಟನಾ ಕೆಲಸ ಕಾರ್ಯಗಳಲ್ಲಿ ಎಲ್ಲಾ ಪದಾಧಿಕಾರಿಗಳು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 5 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಪಣ ತೊಡಬೇಕಾಗಿದೆ ಎಂದರು.

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ್ ನಾಯಕ್, ಯಶ್‍ಪಾಲ್ ಸುವರ್ಣ ವೇದಿಕೆಯಲ್ಲಿದ್ದರು. ಜಿಲ್ಲಾ ಉಪಾಧ್ಯಕ್ಷೆ ಸಂಧ್ಯಾ ರಮೇಶ್ ವಂದಿಸಿದರು


Spread the love