ಸಾಕಲು ಎಮ್ಮೆಗಳನ್ನು ಸಾಗಿಸುತ್ತಿದ್ದ ಇಬ್ಬರ ಮೇಲೆ ಗೋರಕ್ಷಕರಿಂದ ಹಲ್ಲೆ

Spread the love

ಸಾಕಲು ಎಮ್ಮೆಗಳನ್ನು ಸಾಗಿಸುತ್ತಿದ್ದ ಇಬ್ಬರ ಮೇಲೆ ಗೋರಕ್ಷಕರಿಂದ ಹಲ್ಲೆ

ಕಾರ್ಕಳ: ಮನೆಯಲ್ಲಿ ಸಾಕುವ ಉದ್ದೇಶದಿಂದ ಟೆಂಪೊದಲ್ಲಿ ಎಮ್ಮೆಗಳನ್ನು ಸಾಗಿಸುತ್ತಿದ್ದ ವೇಳೆ ಇಬ್ಬರಿಗೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಗುರುವಾರ ಬೆಳ್ಮಣ್ ಸಮೀಪದ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ನಡೆದಿದೆ.

ಹಲ್ಲೆಗೆ ಒಳಗಾದವರನ್ನು ರೆಂಜಾಳ ನಿವಾಸಿಗಳಾದ ರಾಜೇಶ್ ಮೆಂಡೊನ್ಸಾ (34) ಹಾಗೂ ಸಾಧು ಪೂಜಾರಿ ಎಂದು ಗುರುತಿಸಲಾಗಿದೆ.

ಸಾಧು ಪೂಜಾರಿ ಅವರ ಮನೆಯಿಂದ ಎರಡು ಎಮ್ಮೆಗಳನ್ನು ಮುಲ್ಕಿ ಪುನರೂರು ಚಂದ್ರಹಾಸ ಶೆಟ್ಟಿ ಎಂಬವರಿಗೆ ಸಾಕುವ ಉದ್ದೇಶದಿಂದ ಅವರ ಟೆಂಪೋದಲ್ಲಿ ಸಾಗಾಟ ಮಾಡಲಾಗುತ್ತಿತ್ತು.

ಟೆಂಪೊ ಜಾರಿಗೆಕಟ್ಟೆ ಬಳಿ ತಲುಪಿದಾಗ ಬಜರಂಗದಳದ ಕಾರ್ಯಕರ್ತರಾದ ಸಂದೀಪ್, ರಮೇಶ್ ಎಂಬವರು ಟೆಂಪೋವನ್ನು ತಡೆದು ನಿಲ್ಲಿಸಿ ಬಳಿಕ ಟೆಂಪೊದಲ್ಲಿದ್ದ ಸಾಧು ಪೂಜಾರಿಗೆ ಹಲ್ಲೆ ನಡೆಸಿದರು. ಈ ಸಂದರ್ಭ ಸಾಧು ಪೂಜಾರಿ ಅಲ್ಲಿಂದ ಒಡಿ ತಪ್ಪಿಸಿಕೊಂಡರು ಎನ್ನಲಾಗಿದ್ದು, ನಂತರ ಆರೋಪಿಗಳು ರಾಜೇಶ್ ಮೆಂಡೊನ್ಸಾರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಗ್ರಾಮಾಂತರ ಠಾಣಾ ಉಪನಿರಿಕ್ಷಕರು ಗಾಯಗೊಂಡಿರುವ ರಾಜೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಎಮ್ಮೆಗಳನ್ನು ಸ್ಥಳೀಯ ಆಡಳಿತದ ಪರವಾನಿಗೆ ಪಡೆದು ಸಾಕಲು ಕೊಂಡೊಯ್ಯಲಾಗುತ್ತಿದ್ದು ಎಂದು ರಾಜೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ, ಆದರೆ ರಾಜೇಶ್ ಹಾಗೂ ಸಾಧು ಪೂಜಾರಿ ಅವರು ಎಮ್ಮೆಗಳನ್ನು ಕಳವುಗೈದು ಮಾಂಸಕ್ಕಾಗಿ ಟೆಂಪೊದಲ್ಲಿ ಸಾಗಿಸುತ್ತಿದ್ದರೆಂದು ಪ್ರತಿದೂರ ಕೂಡ ದಾಖಲಾಗಿದೆ.


Spread the love