ಸಾಮರಸ್ಯದ ಭ್ರಾತೃತ್ವವೇ ಸಮಗ್ರ ಬಿಲ್ಲವರ ಅಸ್ತಿತ್ವ : ಜಯ ಸಿ. ಸುವರ್ಣ

Spread the love

ಸಾಮರಸ್ಯದ ಭ್ರಾತೃತ್ವವೇ ಸಮಗ್ರ ಬಿಲ್ಲವರ ಅಸ್ತಿತ್ವ : ಜಯ ಸಿ. ಸುವರ್ಣ
ಮುಂಬಯಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಆರಾಧಕರಾದ ಬಿಲ್ಲವರು ಅಂದೂ ಇಂದೂ, ಮುಂದೆಂದೂ ಬಿಲ್ಲವ ಬ್ರದರ್ಸ್ (ಸಹೋದರತ್ವರೇ) ಆಗಿ ಬಾಳಲಿದ್ದೇವೆ. ಸಾಮರಸ್ಯದ ಭ್ರಾತೃತ್ವವೇ ಬಿಲ್ಲವರ ಅಸ್ತಿತ್ವ ಆಗಿದ್ದು ಭ್ರಾತೃಭಾವ, ಸಾಮರಸ್ಯದ ಬಾಳಿಗೆ ಬಿಲ್ಲವರು ಒಡನಾಡಿ ಬಂಧುಗಳಾಗಿದ್ದಾರೆ ಎಂದು ಬಿಲ್ಲವರ ಧೀಶಕ್ತಿ, ಮುಖ್ಯ ಮಾರ್ಗದರ್ಶಕರೂ, ರಾಷ್ಟ್ರೀಯ ಬಿಲ್ಲವ ಮಹಾಮಂಡಳ ಮುಲ್ಕಿ ಅಧ್ಯಕ್ಷ ಜಯ ಸಿ.ಸುವರ್ಣ ನುಡಿದರು.

ಸಾಂತಕ್ರೂಜ್ ಪೂರ್ವದಲ್ಲಿನ ನವೀಕೃತ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಸಾಧಾರಣ ಮಹಾಸಭೆಯಲ್ಲಿ ಕಿಕ್ಕಿರಿದು ನೆರೆದ ಸಭಿಕರನ್ನುದ್ದೇಶಿಸಿ ಜಯ ಸುವರ್ಣ ಮಾತನಾಡಿದರು. ಸಭೆಗೆ ಮುನ್ನ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕೋಟಿ-ಚೆನ್ನಯ್ಯರ ಪ್ರತಿಮೆಗೆ ಹಾರಾರ್ಪಣೆಗೈದು ನಮಿಸಿದರು.

ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಬಿಲ್ಲವರ ಸಂಘ ನಾಸಿಕ್ ಅಧ್ಯಕ್ಷ ಗಂಗಾಧರ್ ಕೆ. ಅವಿೂನ್, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರಾ ಅವರುಗಳ ಭಾರೀ ಪ್ರಯತ್ನದಿಂದ ಇದು ಸಾರ್ಥಕವಾಗಿದೆ. ಅಂತೆಯೇ ಬಿಲ್ಲವ ಜಾಗೃತಿ ಬಳಗದ ಸ್ಥಾಪಕಾಧ್ಯಕ್ಷ ಸೂರು ಸಿ.ಕರ್ಕೇರ, ಅಧ್ಯಕ್ಷ ಎನ್.ಟಿ ಪೂಜಾರಿ, ಮುಂದಾಳುಗಳಾದ ಸುರೇಶ್ ಎಸ್.ಪೂಜಾರಿ, ಕೆ.ಭೋಜರಾಜ್, ಡಿ.ಕೆ ಅಂಚನ್, ಸಂತೋಷಿ ಎಸ್. ಪೂಜಾರಿ, ಪುರುಷೋತ್ತಮ ಎಸ್.ಕೋಟ್ಯಾನ್ ಮತ್ತಿತರರ ಅವಿರತ ಪ್ರಯತ್ನ, ಹರೀಶ್ ಜಿ.ಅವಿೂನ್, ಸುರೇಂದ್ರ ಎಸ್.ಪೂಜಾರಿ, ರಾಜಶೇಖರ್ ಆರ್.ಕೋಟ್ಯಾನ್ ಮತ್ತಿತರ ಸಮಾನಮನಸ್ಕರ ಯೋಗದಾನದ ಸಫಲತೆ ಇಂದು ನಮ್ಮೆಲ್ಲರ ಪಾಲಿಗೆ ಈ ಏಕತಾಶುಭದಿನ ಪ್ರಾಪ್ತಿಸಿದೆ. ಅವರೆಲ್ಲರಿಗೂ ಸಮಗ್ರ ಬಿಲ್ಲವರ ಪರವಾಗಿ ಅಭಿವಂದಿಸುತ್ತೇನೆ. ಅಂದಿನ ಅಹಿತಕರ ಘಟನೆ ನಮ್ಮೆಲ್ಲರಲ್ಲೂ ನೋವು ಆವರಿಸಿತ್ತು. ಆದರೆ ತಮ್ಮೆಲ್ಲರ ಸಹಕಾರದೊಂದಿಗೆ ಅದೆಲ್ಲವೂ ಇಂದು ಮಾಯವಾಗಿ ಬಿಲ್ಲವರ ಏಕತಾ ಚಾರಿತ್ರಿಕ ಘಟನೆಗೆ ಸಾಕ್ಷಿಯಾಗಿದೆ. ಇಂತಹ ಸಮಾರ್ಪಣಾ ಭಾವನೆಯಿಂದಲೇ ಸಮಾಜದ ಉನ್ನತಿಗೆ ಸಾಧ್ಯವಾಗುವುದು. ಅದಕ್ಕಾಗಿ ತಿದ್ದುಪಡಿ ಅವಶ್ಯವೆಣಿಸಿದ್ದು ಆ ಕಾಲ ಇಂದು ಕೂಡಿ ಬಂದಿದೆ. ಭವಿಷ್ಯತ್ತಿನಲ್ಲಿ ಅಖಂಡ ಬಿಲ್ಲವ ಸಮಾಜಕ್ಕೆ ಇದು ವರವಾಗಬಲ್ಲದು. ನಾವೆಲ್ಲರೂ ಒಗ್ಗಟ್ಟಿನಿಂದ ಬಾಳುತ್ತಾ ಮುಂದಿನ ಪೀಳಿಗೆಗೆ ಮಾದರಿಯಾಗೋಣ. ಶೀಘ್ರವೇ ಏಕತೆಯಿಂದ ಶ್ರಮಿಸಿ ಇಂಜಿನೀಯರಿಂಗ್ ಕಾಲೇಜು ರೂಪಿಸಬೇಕಾಗಿದೆ. ಇವತ್ತಿನ ಸಂತೋಷದ ಶುಭಾವಸರಕ್ಕೆ ಪ್ರತಿಯೊಬ್ಬರಿಗೂ ವಂದಿಸುತ್ತೇನೆ ಎಂದರು.

ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ 2000ರ ಬೆಳವಣಿಗೆಯಿ ಂದ ಸ್ಥಾಪಿತ ಬಿಲ್ಲವ ಜಾಗೃತಿ ಬಳಗ ಸಂಸ್ಥೆಯನ್ನು ಒಗ್ಗೂಡಿಸುವ ಹಿತದೃಷ್ಠಿಯಿಂದ ಅಸೋಸಿಯೇಶನ್‍ನ ವಿಶೇಷ ಮಹಾಸಭೆ ಕರೆಯಲಾಗಿದೆ. ಏಕ ವಿಚಾರಿತ ಕಾರ್ಯಸೂಚಿ ಆಗಿಸಿ ಈ ಮಹತ್ವದ ಸಭೆ ಕರೆಯಲಾಗಿದೆ. ಬಿಲ್ಲವ ಜಾಗೃತಿ ಬಳಗವು ಅಸೋಸಿಯೇಶನ್‍ಗೆ ಸಂಧಾನ ಕುರಿತು ರವಾನಿಸಿದ ಪತ್ರವನ್ನು ಸಭೆ ಮುಂದಿಟ್ಟರು. ಅಸೋಸಿಯೇಶನ್ ಮತ್ತು ಬಳಗ ಎನ್ನುವ ತಾರತಮ್ಯ ತೊರೆದು ಬಿಲ್ಲವರೆಲ್ಲರೂ ಒಂದೇ ಎನ್ನಲು ಈ ಸಭೆ ಪೂರಕವಾಗಿದೆ ಎನ್ನುವುದು ನಮ್ಮ ಕಾರ್ಯಕಾರಿ ಸಮಿತಿಯ ಅಭಿಮತ. ಎನ್ನುತ್ತಾ, ಏಕೀಕರಣದ ಪರ್ಯಾಲೋ ಚನಾ ಠರಾವು ಮಂಡಿಸಿ ಅಸೋಸಿಯೇಶನ್‍ನೊಂದಿಗೆ ಐಕ್ಯಗೊಳಿಸುವ ಪ್ರಕ್ರಿಯೆ ಸಭೆ ಮುಂದಿಟ್ಟರು. ಅಂತೆಯೇ ಬಳಗದ ಚಲನಾವಲದಲ್ಲಿನ ಸ್ವಾಧೀನ, ವರ್ಗಾವಣೆ ಕುರಿತು, ಚಲನಾವಸ್ಥ ಮತ್ತು ದೃಢವಾದ ಆಸ್ತಿ, ಸ್ಥಿರನಿಧಿ, ಚಿರಸ್ಥಿರ ಸ್ವತ್ತು ಹಾಗೂ ಬಿಲ್ಲವ ಜಾಗೃತಿ ಬಳಗದ ಮುಖವಾಣಿ `ಗುರುತು’ ಇತ್ಯಾದಿಗಳ ಚರ್ಚೆ ನಡೆಸಲ್ಪಟ್ಟಿತು. ಸಮಗ್ರ ಬಿಲ್ಲವರ ಭವಿಷ್ಯತ್ತಿನ ಏಕೀಕರಣ, ಸಹೋದರತ್ವದ ಬಾಳಿಗೆ ಭಿನ್ನತೆಗಳನ್ನು ಮರೆತು ವಿಷಮಗಳಿಂದ ಮುಕ್ತರಾಗಿ ಬಿಲ್ಲವ ಸಮುದಾಯದ ಸಬಲೀಕರಣಕ್ಕೆ ಒಂದಾಗೋಣ. ಸುಮಾರು ಒಂದುವರೆ ದಶಕದ ಹಿಂದೆ ಸಮುದಾಯದ ಸಂಸ್ಥೆಯಲ್ಲಿ ಮನಸ್ತಾಪ ಮೂಡಿರಬಹುದು ಹೊರತು ನಾವೆಂದೂ ಬೇರ್ಪಟ್ಟಿಲ್ಲ. ನಮ್ಮಲ್ಲಿ ಒಡಕು ಬಿಟ್ಟಿಲ್ಲ ಯಾ ಇಬ್ಭಾಗವೂ ಆಗಿಲ್ಲ ಎಂದರು.

ಕಾರ್ಯಸೂಚಿಗೆ ಅನುಮೋದನೆ ನೀಡುವಂತೆ ಸಭೆಗೆ ತಿಳಿಸುತ್ತಿದ್ದಂತೆಯೇ ಸಭೆಯು ಒಕ್ಕೊರಲ ಸರ್ವಾನುಮತದ ಒಪ್ಪಿಗೆಯಿಂದ ಸಮ್ಮತಿ ಸೂಚಿಸಿ ವಿಚಾರ ಮಂಡನೆ ಅಂಗೀಕರಿಸಿತು. ಅಂತೆಯೇ ಸಮುದಾಯದಲ್ಲಿ ಉದ್ಭವಿಸಿದ ಒಂದು ರೀತಿಯ ಸ್ಫೋಟಕ ವಿಚಾರಕ್ಕೆ ಇಂದು ಅಂತ್ಯವಾಡಿ ಚಾರಿತ್ರಿಕ ದಾಖಲೆಗೆ ಬಿಲ್ಲವರು ಸಾಕ್ಷಿಯಾಗಿದ್ದಾರೆ ಎಂದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಗೌ| ಜೊತೆ ಕಾರ್ಯದರ್ಶಿಗಳಾದ ಪ್ರೇಮನಾಥ ಪಿ.ಕೋಟ್ಯಾನ್, ಆಶಾಲತಾ ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿಗಳಾದ ರಾಜೇಶ್ ಜೆ.ಬಂಗೇರ, ಶಿವರಾಮ ಎಸ್. ಪೂಜಾರಿ, ಸದಾಶಿವ ಎ.ಕರ್ಕೇರ, ಮೋಹನ್ ಡಿ.ಪೂಜಾರಿ ಇನ್ನಿತರ ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಯುವಾಭ್ಯುದಯ ಉಪ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್ ಹಾಗೂ ಸೇವಾದಳದ ಮುಖ್ಯಸ್ಥ ಗಣೇಶ್ ಕೆ.ಪೂಜಾರಿ ಸೇರಿದಂತೆ ವಿವಿಧ ಉಪಸಮಿತಿಗಳ, ಎಲ್ಲಾ ಸ್ಥಳೀಯ ಕಛೇರಿಗಳ ಮುಖ್ಯಸ್ಥರು ವೇದಿಕೆಯಲ್ಲಿ ಅಸೀನರಾಗಿದ್ದರು. ಎನ್.ಎಂ ಸನೀಲ್, ವರದ ಉಳ್ಳಾಲ್, ರೋಹಿತ್ ಎಂ.ಸುವರ್ಣ, ಹರೀಶ್ ಜಿ.ಅವಿೂನ್, ಸುರೇಂದ್ರ ಎಸ್.ಪೂಜಾರಿ, ಶ್ರೀನಿವಾಸ ಪೂಜಾರಿ ಹಾಗೂ ರಾಷ್ಟ್ರೀಯ ಬಿಲ್ಲವ ಮಹಾಮಂಡಳ ಮುಲ್ಕಿ ಇದರ ಗೌರವ ಪ್ರಧಾನ ಕೋಶಾಧಿಕಾರಿ ಯು.ನಾರಾಯಣ ಸಭಿಕರ ಪರವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಅಸೋಸಿಯೇಶನ್‍ನ ಹಿರಿಯ ಮುತ್ಸದ್ಧಿಗಳಾದ ವಾಸುದೇವ ಆರ್.ಕೋಟ್ಯಾನ್, ನ್ಯಾ ಶಶಿಧರ್ ಕಾಪು, ನ್ಯಾ| ಎಸ್.ಬಿ ಅವಿೂನ್, ಮಹಾಬಲ ಪೂಜಾರಿ, ನ್ಯಾ| ಗೋಪಾಲ ಪೂಜಾರಿ, ಸಿ.ಆರ್ ಮೂಲ್ಕಿ, ಸಿಎ| ಅಶ್ವಜಿತ್ ಹೆಜ್ಮಾಡಿ, ಧರ್ಮೇಶ್ ಎಸ್.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ.ಪೂಜಾರಿ, ಕೆ.ಬಿ.ಪೂಜಾರಿ, ಅಶೋಕ್ ಎಂ. ಕೋಟ್ಯಾನ್, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ ಸೇರಿದಂತೆ ಅನೇಕ ಬಿಲ್ಲವ ಮುಂದಾಳುಗಳು ಹಾಜರಿದ್ದರು. ಕು| ವಿಧಿತಾ ಪೂಜಾರಿ ವಸಾಯಿ ಪ್ರಾರ್ಥನೆಯನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಸಭಾಕಲಾಪ ನಡೆಸಿ ವಂದನಾರ್ಪಣೆಗೈದರು.


Spread the love