ಸುಸೂತ್ರ ಪಿಯುಸಿ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

Spread the love

ಸುಸೂತ್ರ ಪಿಯುಸಿ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ: ಮಾರ್ಚ್ 9ರಿಂದ 27ರವರೆಗೆ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 26 ಪರೀಕ್ಷಾ ಕೇಂದ್ರಗಳಿದ್ದು, 16,428 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದಿಂದ 2165, ವಾಣಿಜ್ಯ ವಿಭಾಗದಿಂದ 8983, ವಿಜ್ಞಾನ ವಿಭಾಗದಿಂದ 5280 ವಿದ್ಯಾರ್ಥಿಗಳು ಒಟ್ಟು 14,688 ಪ್ರಥಮ ಬಾರಿಗೆ ಪರೀಕ್ಷೆ ಬರೆಯಲಿರುವರು. 1158 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯಲಿರುವರು. 582 ರಿಪೀಟರ್ಸ್. 8503 ವಿದ್ಯಾರ್ಥಿನಿಯರು ಮತ್ತು 7925 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿರುವರು ಎಂದು ಡಿಡಿಪಿಯು ಆರ್ ಬಿ ನಾಯಕ್ ಮಾಹಿತಿ ನೀಡಿದರು.

ಪರೀಕ್ಷೆ 10.15 ರಿಂದ 1.30ರವರೆಗೆ ನಡೆಯಲಿದ್ದು, ಈ ಬಾರಿ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಲ್ಲಿ ಮಾತ್ರ ಠೇವಣಿ ಇಡಲಾಗುವುದು. ಖಜಾನೆಯಿಂದ ಪ್ರತಿ ದಿನ ಬೆಳಗ್ಗೆ ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿ ವಿತರಿಸಲು 3 ಸದಸ್ಯರ ತಂಡವನ್ನು ರಚಿಸಲಾಗಿದೆ.

ತಂಡದಲ್ಲಿ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರಿರುತ್ತಾರೆ. ಅಪರ ಜಿಲ್ಲಾಧಿಕಾರಿ, ಜಿಲ್ಲಾ ಖಜಾನಾಧಿಕಾರಿ, ಡಿಡಿಪಿಯು ಖಜಾನೆಯಿಂದ ಪತ್ರಿಕೆ ಸ್ವೀಕರಿಸಿ ವಿತರಿಸುವರು. ಖಜಾನೆಯಲ್ಲಿ ಸಿಸಿಟಿವಿ, ಬಯೋ ಮೆಟ್ರಿಕ್ ಮೆಷಿನ್, ಬಾರ್ ಕೋಡಿಂಗ್ ರೀಡರ್‍ಗಳನ್ನು ಅಳವಡಿಸಲಾಗಿದೆ.

ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ದಿನಗಳಂದು ಪೊಲೀಸ್ ಕಾನ್‍ಸ್ಟೇಬಲ್ ನೇಮಿಸಲು ಹಾಗೂ ಬಂದೋಬಸ್ತ್ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆ ಬಂಡಲ್ ಸುರಕ್ಷಿತವಾಗಿ ತಲುಪಿಸಲು ಅಂಚೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಈ ಸಂಬಂಧ ವಾಹನ ವ್ಯವಸ್ಥೆ ಮತ್ತು ಮೆಸ್ಕಾಂಗೆ ಪವರ್ ಕಟ್ ಮಾಡದಂತೆ ನಿರ್ದೇಶನ ನೀಡಲಾಯಿತು. ಪರೀಕ್ಷೆ ನಡೆಯುವ ವೇಳೆ ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ವಿದ್ಯಾಂಗ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ, ಎಲ್ಲ ತಹಸೀಲ್ದಾರ್ ಗಳು, ಕಾಲೇಜು ಮುಖ್ಯಸ್ಥರು ಉಪಸ್ಥಿತರಿದ್ದರು.


Spread the love