ಸೆ.1ರಂದು ಚೀನಿ ವಸ್ತುಗಳ ಬಹಿಷ್ಕಾರ ಆಂದೋಲನ : ಬಜರಂಗದಳ

Spread the love

ಸೆ.1ರಂದು ರಾಜ್ಯಾದ್ಯಂತ ಚೀನಿ ವಸ್ತುಗಳ ಬಹಿಷ್ಕಾರ ಆಂದೋಲನ : ಬಜರಂಗದಳ

ಉಡುಪಿ: ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸಲು ಸೆ.1ರಂದು ರಾಜ್ಯಾದ್ಯಂತ ಆಂದೋಲನ ನಡೆಸಲಾಗುವುದು ಎಂದು ಬಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಗಡಿಯಲ್ಲಿ ಭದ್ರತೆಗೆ ಬಾಹ್ಯ ಸವಾಲು ಒಡ್ಡುತ್ತಿರುವ ಚೀನಾ, ನಮ್ಮ ದೇಶದಲ್ಲಿ ತನ್ನ ವಸ್ತುಗಳ ಮಾರಾಟದಿಂದ ಕೋಟ್ಯಾಂತರ ರು. ಲಾಭ ಗಳಿಸುತ್ತಿದೆ. ಇದರಿಂದ ನಮ್ಮ ದೇಶದ ದಿನಬಳಕೆಯ ವಸ್ತುಗಳ ಉದ್ಯಮಗಳು, ಪಟಾಕಿ ಉದ್ಯಮ, ಮಕ್ಕಳ ಆಟಿಕೆ ವಸ್ತುಗಳ ಉದ್ಯಮ, ರೇಷ್ಮೆ ಮತ್ತು ಇತರ ಬಟ್ಟೆ ಉದ್ಯಮ, ಮಹಿಳೆಯರ ಅಲಂಕಾರಿಕ ಉದ್ಯಮ, ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಕಲ್ ಉದ್ಯಮಗಳು ನಷ್ಟದಿಂದ ಕುಸಿಯುವಂತೆ ಮಾಡಿದೆ. ಈ ಮೂಲಕ ನಮ್ಮ ದೇಶದ ಆರ್ಥಿಕತೆಗೆ ಬಲವಾದ ಏಟು ನೀಡುತ್ತಾ, ದೇಶದ ಆಂತರಿಕ ಭದ್ರತೆಗೂ ಸವಾಲು ಒಡ್ಡುತ್ತಿದೆ. ಇದನ್ನು ತಡೆಯಲು ಚೀನಿ ವಸ್ತುಗಳನ್ನು ಬಹಿಷ್ಕರಿಸುವುದು ಅನಿವಾರ್ಯವಾಗಿದೆ ಎಂದವರು ಹೇಳಿದರು.

ಸೆ.1ರಂದು ಚೀನಿ ವಸ್ತುಗಳನ್ನು ಸುಟ್ಟು ಹಾಕುವ ಮೂಲಕ, ಅವುಗಳನ್ನು ದೇಶದೊಳಗೆ ನಿಷೇಧಿಸುವಂತೆ ನಮ್ಮ ಸರ್ಕಾರಕ್ಕೂ ಆಗ್ರಹಿಸಲಾಗುವುದು ಎಂದವರು ಹೇಳಿದರು.

ಲವ್ ಮ್ಯಾರೇಜ್ ಓಕೆ, ಲವ್ ಜಿಹಾದ್ ಯಾಕೆ
ಬಜರಂಗದಳ ಪರಸ್ಪರ ಪ್ರೀತಿಸಿ, ಅಂತರ್ಜಾತಿಯ ಮದುವೆಯಾಗುವುದಕ್ಕೆ ಪೂರ್ಣ ಬೆಂಬಲ ನೀಡುತ್ತದೆ. ಆದರೇ ಪ್ರೀತಿಯ ನಾಟಕವಾಡಿ, ಮದುವೆಯಾಗಿ, ನಂತರ ಮತಾಂತರಗೊಳಿಸುವ ಲವ್ ಜಿಹಾದ್ ಅನ್ನು ವಿರೋಧಿಸುತ್ತದೆ ಎಂದು ಶರಣ್ ಹೇಳಿದರು.
ಹಿಂದೂ ಯುವತಿಯನ್ನು ಮದುವೆಯಾಗಿ ಅವರನ್ನು ಇಸ್ಲಾಂಗೆ ಮತಾಂತರಗೊಳಿಸುವ ಲವ್ ಜಿಹಾದ್ ಎಂಬುದು ಭಯೋತ್ಪಾದನೆಯ ಇನ್ನೊಂದು ಮುಖವಾಗಿದೆ. ಈ ಬಗ್ಗೆ ಜಾತಿ ಸಂಘಟನೆಗಳು, ಹತ್ತವರು ಎಚ್ಚರಿಕೆ ವಹಿಸಬೇಕು, ಇಂತಹ ಕೃತ್ಯಗಳಿಗೆ ಬಲಿಯಾದವರು ಮಾನ ಕಾಪಾಡುವುಕ್ಕಾಗಿ ಅವುಗಳನ್ನು ಮುಚ್ಚಿಡದೇ, ಪೆÇಲೀಸರಿಗೆ ದೂರು ನೀಡಿ, ಅಂತಹ ಘಟನೆಗಳು ಬೇರೆಯವರ ಜೀವನದಲ್ಲಿ ನಡೆಯದಂತೆ ಸಹಾಯಕ ಮಾಡಬೇಕು ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ವಿಭಾಗ ಸಹಸಂಚಾಲಕ ಸುನಿಲ್ ಕೆ.ಆರ್., ಜಿಲ್ಲಾ ಗೋರಕ್ಷಕ್ ಪ್ರಮುಖ್ ದಿನೇಶ್ ಹೆಬ್ರಿ ಉಪಸ್ಥಿತರಿದ್ದರು.


Spread the love