ಸೆ.17: ಮೂಡಬಿದಿರೆ ರೋಟರಿಶಾಲೆಯಲ್ಲಿ ಜಿಲ್ಲಾ ಮಟ್ಟದ ವಾಲೀಬಾಲ್ ಪಂದ್ಯಾಟ

Spread the love

ಸೆ.17: ಮೂಡಬಿದಿರೆ ರೋಟರಿಶಾಲೆಯಲ್ಲಿ ಜಿಲ್ಲಾ ಮಟ್ಟದ ವಾಲೀಬಾಲ್ ಪಂದ್ಯಾಟ

ಮಂಗಳೂರು: ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ `ರೋಟರಿ ಪ್ರೀ ಯೂನಿವರ್ಸಿಟಿ ಕಾಲೇಜು’ ಆಶ್ರಯದಲ್ಲಿ ಇದೇ ಸೆಪ್ಟಂಬರ್ 17ರಂದು ಜಿಲ್ಲಾ ಮಟ್ಟದ ವಾಲೀಬಾಲ್ ಪಂದ್ಯಾಟ ನಡೆಯಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 10ಗಂಟೆಗೆ ರೋಟರಿ ಶಾಲೆಯ ಮೈದಾನದಲ್ಲಿ ಪದವಿ ಪೂರ್ವ ಕಾಲೇಜು ವಿಭಾಗದ ಪುರುಷರ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ತಂಡಗಳು ಆಗಮಿಸುತ್ತಿದ್ದು, ಸುಮಾರು 80 ಮಂದಿ ತೀರ್ಪುಗಾರರು ಹಾಗೂ ತಂಡದ ವ್ಯವಸ್ಥಾಪಕರು ಭಾಗವಹಿಸಲಿದ್ದಾರೆ. ವಿಜೇತರಿಗೆ ವೈಯಕ್ತಿಕ ಪ್ರಶಸ್ತಿಯೂ ನೀಡುವುದಾಗಿ ತಿಳಿಸಿದ್ದಾರೆ.
ಪಂದ್ಯಾಟವನ್ನು ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮೂಡುಬಿದ್ರೆಯ ಉದ್ಯಮಿ ಶ್ರೀಪತಿ ಭಟ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಕೆ.ಆರ್. ತಿಮ್ಮಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕರಾದ ಶಶಿಧರ್ ಮಾಣಿ ಇವರುಗಳು ಭಾಗವಹಿಸಲಿದ್ದಾರೆ.

ಸಾಯಂಕಾಲ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಮೂಡಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಶರೀಫ್ ವಹಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಶ್ವಿನ್ ಜೆ ಪಿರೇರಾ, ಉದ್ಯಮಿ ರೋಹನ್ ರಾಜೇಶ್ ಮೆಂಡಿಸ್ ಭಾಗವಹಿಸುವರು.

ಮೂಡುಬಿದ್ರೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ರೋಟರಿ ವಿದ್ಯಾ ಸಂಸ್ಥೆ ಕಳೆದ 35 ವರ್ಷಗಳಿಂದ ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ, ರಾಷ್ಟ್ರಮಟ್ಟದಲ್ಲಿಯೂ ಹೆಸರುವಾಸಿಯಾಗಿರುವ ಸಂಸ್ಥೆಯಾಗಿದೆ. ರೋಟರಿ ಎಜುಕೇಶನ್ ಸೊಸೈಟಿ(ರಿ) ಮೂಡುಬಿದ್ರೆ ಇದರ ಆಡಳಿತಕ್ಕೊಳಪಟ್ಟ ಈ ಸಂಸ್ಥೆ ಅಧ್ಯಕ್ಷರಾದ ಕೆ. ಅಮರನಾಥ ಶೆಟ್ಟಿಯವರ ಮಾರ್ಗದರ್ಶನ ಹಾಗೂ ಮುಂದಾಳುತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ಕಳೆದ 2015-16ನೇ ಸಾಲಿನಲ್ಲಿ ನೂತನ ಪದವಿ ಪೂರ್ವ ಕಾಲೇಜು ವಿಭಾಗವನ್ನು ಪ್ರಾರಂಭಿಸಿದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಹೊಂದಿರುವ ರೋಟರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸ್ತುತ 110 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಶೇ.95ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಸೌಲಭ್ಯ ಕಲ್ಪಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ದೈಹಿಕ ಶಿಕ್ಷಕ ಸುಧೀರ್ ಕುಮಾರ್ ಉಪಸ್ಥಿತರಿದ್ದರು.


Spread the love