ಹಿಂದೂ ಕಾರ್ಯಕರ್ತರ ಹತ್ಯೆ ; ಎನ್ ಐ ಎ ತನಿಖೆಗೆ ವಹಿಸುವಂತೆ ಕಾರ್ಣಿಕ್ ಆಗ್ರಹ

Spread the love

ಹಿಂದೂ ಕಾರ್ಯಕರ್ತರ ಹತ್ಯೆ ; ಎನ್ ಐ ಎ ತನಿಖೆಗೆ ವಹಿಸುವಂತೆ ಕಾರ್ಣಿಕ್ ಆಗ್ರಹ

ಮಂಗಳೂರು: ಪರೇಶ ಮೇಸ್ತ ಸೇರಿದಂತೆ 20 ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ನ್ಯಾಯೋಚಿತವಾಗಿ ತನಿಖೆ ನಡೆಸ ಬೇಕಾದ ನಿಟ್ಟನಲ್ಲಿ ಈ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ  ಒಪ್ಪಿಸುವಂತೆ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಒತ್ತಾಯಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅತ್ಯಂತ ಸಂದೇಹಾಸ್ಪದವಾಗಿ ಹತ್ಯೆಗೀಡಾದ ಪರೇಶ ಮೇಸ್ತ ಎಂಬ ಯುವಕನೋರ್ವನ ಸಾವು ರಾಜ್ಯದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆ ಮತೀಯವಾದಿಗಳಿಂದ ನಿರಂತರವಾಗಿ ನಡೆಯುತ್ತರುವ ದೌರ್ಜನ್ಯ ಹಾಗು ಸರಣಿ ಹತ್ಯೆಗಳಿಗೆ ಕೈಗನ್ನಡಿಯಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರದ ನೈತಿಕ ಬೆಂಬಲದಿಂದ ಬಹು ಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ಈ ಹಲ್ಲೆಗಳನ್ನು ನಾಗರೀಕ ಸಮಾಜ ತೀವ್ರವಾಗಿ ಖಂಡಿಸುತ್ತಾ ಬಹುಸಂಖ್ಯಾತ ಸಮುದಾಯದ ರಕ್ಷಣೆಗಾಗಿ ಹಾಗು ಶಾಂತಿ ಸುವ್ಯವಸ್ಥೆಗಾಗಿ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಸರಕಾರ ನಿರ್ಮಿಸಿರುವುದು ವಿಷಾದನೀಯ.

ದೇವಸ್ಥಾನದಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದು ಬೈಕ್ ತರುವುದಕ್ಕಾಗಿ ಹೋದ ಪರೇಶ ಮೇಸ್ತ ನಾಪತ್ತೆಯಾಗಿರುವುದು, ಆತನ ಬೈಕ್ ಪೊದರುಗಳಲ್ಲಿ ಬಚ್ಚಿಟ್ಟಿರುವಂತೆ ಲಭ್ಯವಾಗಿರುವುದು, ನಾಪತ್ತೆಯಾಗಿದ್ದ ಸಮಯದಲ್ಲಿ ದರಿಸಿದ್ದ ಉಡುಪಲ್ಲದೆ ಬೇರೆಯೇ ಉಡುಪು ಧರಿಸಿರುವ ಪರೇಶ ಮೇಸ್ತರ ಮೃತದೇಹ ಸುಮಾರು 36 ಗಂಟೆಗಳ ನಂತರ, 7 ಮತ್ತು 8 ರಂದು ನಿಷೇದಾಜ್ಞೆ ಇದ್ದು ಸಾವಿರಾರು ಪೊಲೀಸರ ಸುಪರ್ದಿಯ ನಡುವೆ, ದೇವಸ್ಥಾನದ ಕೆರೆಯಲ್ಲಿ ಪತ್ತೆಯಾಗಿರುವುದು, ಮೃತದೇಹದ ಬಣ್ಣ ಕಪ್ಪಾಗಿರುವುದು, ಮೃತದೇಹದ ಕೈಯಲ್ಲಿರುವ ಹಚ್ಚೆಯನ್ನು ವಿರೂಪಗೊಳಿಸಿರುವುದು, ಪೊಲೀಸ್ ಇಲಾಖೆಗೆ ಗೊತ್ತಾದರೂ 7ನೇಯ ತಾರೀಕಿನಂದು ಮುಖ್ಯಮಂತ್ರಿಗಳ ಪ್ರವಾಸವಿದೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಹತ್ಯೆಯ ಸುದ್ದಿಯನ್ನು ಸಾರ್ವಜನಿಕರಿಂದ ಮರೆಮಾಚಿರುವುದು ಹಾಗು ಇನ್ನು ಅನೇಕ ಸಂಗತಿಗಳು ಮುಗ್ದ ಯುವಕನ ಹತ್ಯೆಯ ಹಿಂದೆ ಸಂದೇಹಗಳ ಹುತ್ತವನ್ನು ಸೃಷ್ಠಿಸಿವೆ.

ಮುಖ್ಯಮಂತ್ರಿಗಳು ಈ ಹಿಂದೆ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಶರತ್ ಮಡಿವಾಳರ ಸಾವಿನ ವಿಷಯವನ್ನು ಸಾರ್ವಜನಿಕರಿಂದ ಮುಚ್ಚಿಟ್ಟಿರುವುದು ಹಾಗು ಮುಖ್ಯಮಂತ್ರಿಗಳ ಉತ್ತರ ಕನ್ನಡ ಜಿಲ್ಲೆಯ ಭೇಟಿಯ ಸಂದರ್ಭದಲ್ಲಿ ಪರೇಶ ಮೇಸ್ತರ ಹತ್ಯೆಯ ಸುದ್ದಿಯನ್ನು ಮುಚ್ಚಿಟ್ಟಿರುವುದು ಸರಕಾರದ ಮತ್ತು ಪೊಲೀಸ್ ಇಲಾಖೆಯ ಬೇಜವಾಬ್ದಾರಿಯನ್ನು ಹಾಗು ಸಾರ್ವಜನಿಕರೊಂದಿಗೆ ಸಂವೇದನೆ ರಹಿತವಾದ ವ್ಯವಹಾರವನ್ನು ಎತ್ತಿ ತೋರಿಸುತ್ತದೆ.

ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್, ಮಡಿಕೇರಿಯ ಕುಟ್ಟಪ್ಪ, ಮೂಡಬಿದ್ರೆಯ ಪ್ರಶಾಂತ ಪೂಜಾರಿ, ಬಂಟ್ವಾಳದ ಶರತ್ ಮಡಿವಾಳ ಮುಂತಾದ 19 ಹಿಂದೂ ಕಾರ್ಯಕರ್ತರ ಹತ್ಯೆಗಳ ನ್ಯಾಯೋಚಿತ ವಿಚಾರಣೆಗಾಗಿ ಸಂಘಟಿತ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ವಿನಾಕಾರಣ ಕೋಮು ಗಲಭೆ ನಿರ್ಮಾಣ ಮಾಡಿ ಆ ಸಂದರ್ಭದಲ್ಲಿ ನಡೆದಿರುವ ಓರ್ವ ಮುಗ್ದ ಯುವಕ ಪರೇಶ ಮೇಸ್ತ ಇವರ ಹತ್ಯೆ ಇಡೀ ಕರಾವಳಿ ಕರ್ನಾಟಕವನ್ನು ದಿಗ್ಬ್ರಮೆಗೊಳಿಸಿದ್ದು ಸಾರ್ವಜನಿಕರು ಅತ್ಯಂತ ಆತಂಕಕ್ಕೆ ಒಳಗಾಗಿದ್ದಾರೆ. ನಿಷೇದಾಜ್ಞೆ ಜಾರಿಯಲ್ಲಿದ್ದರೂ ಗಲಭೆಗಳು ಮುಂದುವರೆದು ಮಾನ್ಯ ಮುಖ್ಯಮಂತ್ರಿಗಳು ಜಿಲ್ಲಾ ಪ್ರವಾಸದಲ್ಲಿದ್ದ ಸಮಯದಲ್ಲಿ ನಡೆದಿರುವ ಹತ್ಯೆ ಮತ್ತು ಈ ಹತ್ಯೆಯ ಹಿಂದಿರುವ ಕಾಣದ ಕೈಗಳ ಷಡ್ಯಂತ್ರವನ್ನು ಮುಚ್ಚಿಹಾಕಲು ಪ್ರಯತ್ನಿಸುವ ಬೇಜವಾಬ್ದಾರಿ ರಾಜ್ಯ ಸರಕಾರ ಹಾಗು ಸಂವಿಧಾನದತ್ತ ಅಧಿಕಾರವನ್ನು ಉಪಯೋಗಿಸಿ ಶಾಂತಿ ಸುವ್ಯವಸ್ಥೆಯ ಜವಾಬ್ದಾರಿ ಹೊಂದಿದ್ದರೂ ಸರಕಾರದ ಕೈಗೊಂಬೆಯಾಗಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ನ್ಯಾಯ ಒದಗಿಸಲು ವಿಫಲವಾಗಿರುವ ಪೊಲೀಸ್ ಇಲಾಖೆ ಸೇರಿ ಒಟ್ಟಿನಲ್ಲಿ ರಾಜ್ಯದಲ್ಲಿ ಅರಾಜಕತೆಯನ್ನು ಉಂಟು ಮಾಡಿರುವುದು ವಾಸ್ತವ.

ಈ ಎಲ್ಲಾ ಸಂಗತಿಗಳ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯ ಬೇಜವಾಬ್ದಾರಿಯನ್ನು ಹಾಗು ರಾಜ್ಯ ಸರಕಾರದ ಎಕಪಕ್ಷೀಯವಾದ ನಿಲುವನ್ನು ಪ್ರಶ್ನಿಸುತ್ತಾ ಪರೇಶ ಮೇಸ್ತ ಸೇರಿದಂತೆ 20 ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ನ್ಯಾಯೋಚಿತವಾಗಿ ತನಿಖೆ ನಡೆಸ ಬೇಕಾದ ನಿಟ್ಟನಲ್ಲಿ ಈ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ  ಒಪ್ಪಿಸುವಂತೆ ಒತ್ತಾಯಿಸಿದ್ದಾರೆ..

 


Spread the love