ಹುತಾತ್ಮ ಯೋಧನ ಪುತ್ರಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ

Spread the love

ಹುತಾತ್ಮ ಯೋಧನ ಪುತ್ರಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ

ನವದೆಹಲಿ: ಎಬಿವಿಪಿ ವಿರುದ್ಧ ಅಭಿಯಾನ ಪ್ರಾರಂಭಿಸಿರುವ ಕಾರ್ಗಿಲ್ ಹುತಾತ್ಮನ ಪುತ್ರಿ ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರ್ಮೆಹರ್ ಕೌರ್ ಅವರನ್ನು ಭೂಗತ ದೊರೆ ದಾವೂದ್ ಇಬ್ರಾಹಿಂ ಅವರಿಗೆ ಹೋಲಿಸಿ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ.

ಕಾರ್ಗಿಲ್ ಯುದ್ಧದಲ್ಲಿ ಮೃತರಾಗಿದ್ದ ಯೋಧನ ಪುತ್ರಿ ದ ಲೇಡಿ ರಾಮ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದು ತಮ್ಮ ಫೇಸ್ಬುಕ್ ಪುಟದಲ್ಲಿ “ನಾನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ. ನಾನು ಎಬಿವಿಪಿಗೆ ಹೆದರುವುದಿಲ್ಲ. ನಾನೊಬ್ಬಳೇ ಅಲ್ಲ. ಭಾರತದ ಪ್ರತಿ ವಿದ್ಯಾರ್ಥಿ ನನ್ನೊಟ್ಟಿಗಿದ್ದಾರೆ” ಎಂದು ಬರೆದಿದ್ದರು. ಇದಕ್ಕೆ #ಸ್ಟೂಡೆಂಟ್ಸ್ ಎಗೇನ್ಸ್ಟ್ ಎಬಿವಿಪಿ ಎಂಬ ಹ್ಯಾಶ್ ಟ್ಯಾಗ್ ಕೂಡ ಸೇರಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡಿತ್ತು.

ಒಂದು ಕಡೆ ಗುರ್ಮೆಹರ್ ಕೌರ್ ಮತ್ತೊಂದು ಕಡೆ ದಾವೂದ್ ಇಬ್ರಾಹಿಂ ಇರುವ ಫೋಟೋವನ್ನು ಪ್ರತಾಪ್ ಸಿಂಹ ಭಾನುವಾರ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ಕೌರ್ ಅವರು “ನನ್ನ ತಂದೆಯನ್ನು ಪಾಕಿಸ್ತಾನ ಕೊಂದದ್ದಲ್ಲ, ಅವರನ್ನು ಕೊಂದದ್ದು ಯುದ್ಧ ಎಂದು ಬರೆದ ಹಲಗೆ ಹಿಡಿದುಕೊಂಡಿದ್ದರೆ, ದಾವೂದ್ “೧೯೯೩ ರಲ್ಲಿ ನಾನು ಜನರನ್ನು ಕೊಲ್ಲಲಿಲ್ಲ, ಅವರನ್ನು ಕೊಂದದ್ದು ಬಾಂಬ್” ಎಂದು ಬರೆದಿರುವ ಹಲಗೆ ಹಿಡಿದಂತೆ ಮಾಡಿ, ಎರಡನ್ನು ಜೋಡಿಸಿ ಪ್ರಕಟಿಸಲಾಗಿದೆ.
pic.twitter.com/NaG4xVrT2B

— Pratap Simha (@mepratap) ಫೆಬ್ರವರಿ 26, 2017
“ಕನಿಷ್ಠ ಪಕ್ಷ ದಾವೂದ್ ತನ್ನ ರಾಷ್ಟ್ರ ವಿರೋಧಿ ನಡೆಯನ್ನು ಸಮರ್ಥಿಸಿಕೊಳ್ಳಲು ತನ್ನ ತಂದೆಯ ದೇಹವನ್ನು ಬಳಸಿಕೊಳ್ಳಲಿಲ್ಲ” ಎಂದು ಕೂಡ ಆ ಫೋಟೋಗೆ ಶೀರ್ಷಿಕೆ ನೀಡಲಾಗಿದೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕ್ರಪೆ: ಕನ್ನಡಪ್ರಭ


Spread the love