ಪೊಲೀಸರ ತಾರತಮ್ಯ ನೀತಿಯನ್ನು ಖಂಡಿಸಿ ಡಿವೈಎಫ್‍ಐ ಪ್ರತಿಭಟನೆ

Spread the love

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕಡಲ ತೀರದ ಬೆಂಗ್ರೆ ಪ್ರದೇಶದಲ್ಲಿ ಕಳೆದ ಎರಡು ತಿಂಗಳ ಹಿಂದೆ ಕಸಬ ಬೆಂಗ್ರೆ ಹಾಗೂ ತೋಟ ಬೆಂಗ್ರೆ ಯುವಕರ ಮಧ್ಯೆ ಗಲಾಟೆಯೊಂದು ನಡೆದಿರುತ್ತದೆ. ಈ ಗಲಾಟೆಗೆ ಕಾರಣರಾದವರನ್ನು ಈಗಾಗಲೇ ಪಣಂಬೂರು ಠಾಣಾ ಪೊಲೀಸರು ಬಂಧಿಸಿ ಪ್ರಕರಣವನ್ನು ದಾಖಲಿಸಿರುತ್ತಾರೆ. ಆದರೆ ಪೊಲೀಸರು ಇಂದು ಆ ಗಲಾಟೆಗೆ ಸಂಬಂಧಪಡದ ಅಮಾಯಕರ ಯುವಕರುಗಳನ್ನು ಇನ್ನಿತರರ ಪಟ್ಟಿಯಲ್ಲಿ ಸೇರಿಸಿ ಅವರನ್ನು ಬಂಧಿಸಲು ಹೊರಟಿರುವ ಪೊಲೀಸರ ನೀತಿಗೆ ಡಿವೈಎಫ್‍ಐ ಮಂಗಳೂರು ದಕ್ಷಿಣ ಸಮಿತಿ ಖಂಡನೆಯನ್ನು ವ್ಯಕ್ತಪಡಿಸಿದೆ.

ಅತೀ ಬಡವರು ವಾಸಿಸುವಂತಹ ಬೆಂಗ್ರೆಯಲ್ಲಿ ಯುವಜನರನ್ನು ತಪ್ಪು ದಾರಿಗೆಳೆಯಲು ನಗರದಿಂದ ಗಾಂಜಾ ಇನ್ನಿತರ ಮಾದಕ ದ್ರವ್ಯಗಳನ್ನು ಮಾರುವಂತಹ ಅಪರಾಧಿಗಳನ್ನು ಪೊಲೀಸರು ಇಲ್ಲಿನವರೆಗೂ ಬಂಧಿಸಿಲ್ಲ. ಬದಲಾಗಿ ಅಲ್ಲಿನ ಯುವಕರು ಗಾಂಜಾ ವ್ಯಸನಿಗಳೆಂದು ವಿನಾಕಾರಣ ಠಾಣೆಗೆ ಕರೆಯಿಸಿ ಮಾನಸಿಕ ಹಿಂಸೆಯನ್ನು ನೀಡುತ್ತಾರೆ. ಮಾತ್ರವಲ್ಲ ಪಾಸ್‍ಪೋರ್ಟ್ ಅರ್ಜಿ ವಿಚಾರಣೆಗೆ ಠಾಣೆಗೆ ಬಂದರೆ ಅವರನ್ನು ಅಪರಾಧಿಗಳಂತೆ ಉಪಚರಿಸಿ ಮಾನಸಿಕ ಕಿರುಕುಳವನ್ನು ನೀಡುವುದು. ಈ ರೀತಿಯ ಪಣಂಬೂರು ಪೊಲೀಸರ ವರ್ತನೆಯಿಂದ ಬೆಂಗರೆ ಪ್ರದೇಶದ ಯುವಕರನ್ನು ಹತಾಶರನ್ನಾಗಿಸಿದೆ.

ಈ ಹಿನ್ನಲೆಯಲ್ಲಿ ಕಸಬ ಬೆಂಗ್ರೆ ನಾಗರಿಕರ ಮೇಲೆ ಪಣಂಬೂರು ಪೊಲೀಸರು ತೋರುವಂತಹ ತಾರತಮ್ಯದ ನೀತಿಯನ್ನು ಖಂಡಿಸಿ, ಪಣಂಬೂರು ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆಯಿಂದ ಅಮಾಯಕರ ಹೆಸರನ್ನು ಕೈಬಿಡಲು ಒತ್ತಾಯಿಸಿ ಇದೇ ಬರುವ ಮಾರ್ಚ್ 16-03-2016ರಂದು ಡಿವೈಎಫ್‍ಐ ಬೆಂಗರೆ ಘಟಕದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಮುಂದೆ ಬಂದರು ಕಡವಿನ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಲಿದೆ ಎಂದು ಡಿವೈಎಫ್‍ಐನ ಮಂಗಳೂರು ದಕ್ಷಿಣ ಸಮಿತಿಯ ಅಧ್ಯಕ್ಷರಾದ ರಾಜೇಶ್ ಉರ್ವಸ್ಟೋರ್, ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿರುತ್ತಾರೆ.


Spread the love