ಧ್ವನಿಯಿಲ್ಲದವರ ಧ್ವನಿಯಾಗುವ ಸಂಕಲ್ಪ ನನ್ನದು ; ಪ್ರಮೋದ್ ಮಧ್ವರಾಜ್

Spread the love

ಧ್ವನಿಯಿಲ್ಲದವರ ಧ್ವನಿಯಾಗುವ ಸಂಕಲ್ಪ ನನ್ನದು ; ಪ್ರಮೋದ್ ಮಧ್ವರಾಜ್

ಉಡುಪಿ: ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ಜನಸೇವೆ ಮಾಡುವುದಕ್ಕಾಗಿ ಹೊರತು, ಅಧಿಕಾರ ಬಲ ಪ್ರದರ್ಶನಕ್ಕೆ ಅಲ್ಲ. ನನಗೆ ನಮ್ಮ ಮುಖ್ಯಮಂತ್ರಿಗಳು ನೀಡಿದ ಅವಕಾಶದಲ್ಲಿ ಪ್ರತಿ ಹೆಜ್ಜೆ, ಪ್ರತಿ ಕ್ರಿಯೆ ಜನಪರವಾಗಿರುವಂತೆ ನೋಡಿಕೊಳ್ಳುತ್ತೇನೆ. ಧ್ವನಿಯಿಲ್ಲದವರ ಧ್ವನಿಯಾಗುವ ಸಂಕಲ್ಪ ನನ್ನದು. ಜನ ಸೇವೆಗೆ ನಾನು ಸಿದ್ಧ ಎಂದು ಮೀನುಗಾರಿಕೆ ಯುವಜನಸೇವೆ, ಕ್ರೀಡಾ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.

pramod-madhwaraj-felicitation

ಅವರು ಸಾಲಿಗ್ರಾಮದ ಚೇಂಪಿ ಶ್ರೀ ವಿಶ್ವಕರ್ಮ ಸಾಂಸ್ಕøತಿಕ ಸಭಾಭವನದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ಕಾಂಗ್ರೆಸ್ ಪಕ್ಷ ಜನರ ಅಬಿವೃದ್ಧಿಗಾಗಿ ದುಡಿದ ಏಕೈಕ ಪಕ್ಷ ಎನ್ನುವ ಹೆಮ್ಮೆ ಇದೆ. ನಮ್ಮ ಪಕ್ಷದ ನಾಯಕರು ಜನಸೇವೆಗಾಗಿ ಪ್ರಾಣ ತ್ಯಾಗ ಮಾಡಿದ ನಿದರ್ಶನಗಳಿವೆ. ನಾವು ಚುನಾವಣೆಯ ವೇಳೆ ಮತಯಾಚಿಸಬೇಕಾಗಿಲ್ಲ, ಜನರ ಕಷ್ಟ ಸಮಸ್ಯೆಗಳಿಗೆ ಸ್ಪಂದಿಸಿದರೆ ಮತದಾರರೆ ನಮಗೆ ಓಟು ನೀಡುತ್ತಾರೆ ಎಂದರು.

ಪ್ರತಿಯೋರ್ವ ಕಾಂಗ್ರೆಸ್ ಕಾರ್ಯಕರ್ತರು ಕೂಡ ವಾರದಲ್ಲಿ ಒಂದು ಗಂಟೆ ಜನರ ಕಷ್ಟ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ನಮ್ಮ ಸರಕಾಋ ಸಾಕಷ್ಟು ಜನಪರ ಯೋಜನೆಗಳನ್ನು ತಂದಿದೆ ಅದರ ಮೂಲಕ ಅವರಿಗೆ ಸಹಾಯ ಹಸ್ತ ನೀಡುವ ಕೆಲಸಗಳಾಗಬೇಕು. ನಮ್ಮ ಸ್ಥಾನ ಮಾನಗಳಿಗೆ ನಾವು ಹುಡುಕಿಕೊಂಡು ಹೋಗಬೇಕಾಗಿಲ್ಲ ಹಣೆಯಲ್ಲಿ ಬರೆದಿದ್ದರೆ ಅದು ತಾನಾಗಿಯೇ ಬರುತ್ತದೆ. ಆನರ ಹೃದಯದಲ್ಲಿ ಸ್ಥಾನ ಪಡೆಯುವ ಕೆಲಸ ಮಾಡಬೇಕು. ಉಡುಪಿ ಜಿಲ್ಲೆಯಲ್ಲಿ ಸುಮಾರು 850 ಮನೆಗಳಿಗೆ ರಾಜೀವ ಗಾಂಧಿ ಯೋಜನೆಯ ಮೂಲಕ ಉಚಿತ ವಿದ್ಯುತ್ ಸಂಪರ್ಕ, ಸಮುದ್ರದಲ್ಲಿ ಅವಘಡಗಳು ಸಂಭವಿಸಿ ಮೃತರಾದರೆ ಸುಮಾರು 5 ಲಕ್ಷ ಪರಿಹಾರ ನೀಡುವ ವ್ಯವಸ್ಥೆ, ಉಡುಪಿ ಜಿಲ್ಲೆಯೊಂದಕ್ಕೆ ಸುಮಾರು 64 ಸಾವಿರ ಬಿಪಿಎಲ್ ಕಾರ್ಡ್‍ಗಳು, ಬಾಪೂಜಿ ಕೇಂದ್ರ ಮೂಲಕ ಗ್ರಾಮ ಪಂಚಾಯಿತಿಯಿಂದ ಹಲವಾರು ಸೇವೆಗಳು ನೀಡುವ ವ್ಯವಸ್ಥೇ ಕಲ್ಪಿಸಲಾಗಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೊಳ್ಕೆಬೈಲು ಕಿಶನ್ ಹೆಗ್ಡೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹಿರಿಯಣ್ಣ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ವಿಕಾಸ್ ಹೆಗ್ಡೆ, ಉಡುಪಿ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯಚಂದ್ರ ಶೆಟ್ಟಿ, ಮಹಿಳಾ ಕಾಂಗ್ರೆಸ್‍ನ ಮಮತಾ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶೋರ್ ಮಂದಾರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಮಾನಂದ ಶೆಟ್ಟಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಡೂರು ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.

ಹಿರಿಯ ಕಾಂಗ್ರೆಸ್ ಸದಸ್ಯ ಇಬ್ರಾಹಿಂ ಸಾಹೇಬ್ ಪ್ರಸ್ತಾವಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಪರಿಪೂರ್ಣ ಅಭಿನಂದನಾ ಪತ್ರ ವಾಚಿಸಿದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಚ್ಚುತ ಪೂಜಾರಿ ಕಾರ್ಕಡ ವಂದಿಸಿದರು. ಸಬಾ ಕಾರ್ಯಕ್ರಮಕ್ಕೂ ಮೊದಲು ಇಂದಿರಾ ಭವನಕ್ಕೆ ತೆರಳಿದ ಸಚಿವರು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿದರು. ಸಭೆಯಲ್ಲಿ ವಿವಿಧ ಸಂಘಟನೆ, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದ ಬಳಿಕ ಸಚಿವರು ಅರ್ಜಿ ಅಹವಾಲುಗಳನ್ನು ಸ್ವೀಕರಿಸಿದರು.


Spread the love