ಕಾಂಗ್ರೆಸ್ ಕಾರ್ಯಕರ್ತರು ದಿಗಿಲುಗೊಳ್ಳದಿರಿ; ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್

Spread the love

ಕಾಂಗ್ರೆಸ್ ಕಾರ್ಯಕರ್ತರು ದಿಗಿಲುಗೊಳ್ಳದಿರಿ; ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್

ಉಡುಪಿ: ಕಳೆದ ನಾಲ್ಕಾರು ದಿನಗಳಿಂದ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಕಾರ್ಯಕರ್ತರು ಹಾಗೂ ನಾಯಕರುಗಳು ಭ್ರಮೆನಿರಸಗೊಂಡಿರುವುದು ಸರಿ. ರಾಷ್ಟ್ರ ರಾಜಕಾರಣ ಹಿನ್ನೆಲೆಯಲ್ಲಿ ಇಂತಹ ಸ್ಥಿತಿ ಬಂದೊದಗಿದೆ. ಇದನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಕಾರ್ಯಕರ್ತರು ದಿಗಿಲುಗೊಳ್ಳಬಾರದೆಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ||.ಡಿ.ಎಲ್.ವಿಜಯಕುಮಾರ್ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

ಈಗಾಗಲೇ ನಾನೂ ಸೇರಿದಂತೆ ನಮ್ಮ ಎರಡು ಜಿಲ್ಲೆಯ ನಾಯಕರುಗಳು ರಾಜ್ಯ ಹಾಗೂ ಎಐಸಿಸಿ ಪ್ರಮುಖರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂಬ ಬಗ್ಗೆ ಒತ್ತಾಯಿಸಲಾಗಿದೆ. ಇಂದಿರಾಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಈ ಕ್ಷೇತ್ರ ಭಾವನಾತ್ಮಕ ದೃಷ್ಠಿಯಲ್ಲಿದೆ, ಜಾತ್ಯಾತೀತ ಜನತಾದಳಕ್ಕಿಂತಲೂ ಶಕ್ತಿಯುತವಾಗಿದೆ. ಈಗಾಗಲೇ ಆ ಪಕ್ಷದ ಮುಖಂಡರು ವಿಧಾನಪರಿಷತ್ ಉಪಾಧ್ಯಕ್ಷರಾದ ಎಸ್.ಎಲ್ ಧರ್ಮೇಗೌಡರು ವಾಸ್ತವದ ಹೇಳಿಕೆ ನೀಡುವುದರ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಒಳಿತು ಎಂದಿರುವುದು ಸ್ವಾಗತಾರ್ಹವಾದುದಾಗಿದೆ. ರಾಜಕಾರಣದಲ್ಲಿ ಸತ್ಯ ಹೇಳುವ ಧೈರ್ಯ ಮಾಡಿರುವರ ಅವರ ಹೇಳಿಕೆಯನ್ನು ಪಕ್ಷ ಸ್ವಾಗತಿಸುತ್ತದೆ. ಸ್ವತಹಃ ಪ್ರಬಲ ಆಕಾಂಕ್ಷಿಯಾದ ನನ್ನನ್ನು ಸೇರಿದಂತೆ ಇತರ ಆಕಾಂಕ್ಷಿಗಳು ಈ ವಾಸ್ತವ ಪರಿಸ್ಥಿತಿ ಹಾಗೂ ಕಟು ಸತ್ಯವನ್ನು ಅರಿತು ಪಕ್ಷಕ್ಕಾಗಿ ಹಾಗೂ ಪಕ್ಷದ ಒಳಿತಿಗಾಗಿ ತ್ಯಾಗ ಮಾಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದಿದ್ದಾರೆ.

ಇನ್ನೂ ಕಾಲ ಮಿಂಚಿಲ್ಲ ಕಾಂಗ್ರೆಸ್ನವರ ಒತ್ತಡ, ಜೆಡಿಎಸ್ನವರ ವಾಸ್ತವ ಮಾತುಗಳು ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆಗೆ ಅವಕಾಶವಾಗಲೂಬಹುದು, ಆದುದರಿಂದ ಪಕ್ಷದ ಕಾರ್ಯಕರ್ತರು ಎದೆಗುಂದಬಾರದು ಮತ್ತು ಒತ್ತಾಯ ಇರಬೇಕೇ ಹೊರತು ಚಳುವಳಿಯ ಮೂಲಕ ಪಕ್ಷದ ಮುಖಂಡರುಗಳನ್ನು ನಿಂದಿಸುವ ಹೇಳಿಕೆಗಳನ್ನು ನೀಡಬಾರದು ಎಂದು ಡಾ||.ಡಿ.ಎಲ್.ವಿಜಯಕುಮಾರ್ ಕೋರಿದ್ದಾರೆ.

ರಾಜ್ಯದಲ್ಲಿ 20ಸ್ಥಾನಗಳಲ್ಲಿ ಜೆಡಿಎಸ್ನವರ ಬೆಂಬಲ ಪಡೆದು, ಉಳಿದ 8 ಸ್ಥಾನಗಳಲ್ಲಿ ಅವರಿಗೆ ಬೆಂಬಲ ನೀಡುವುದು ಅನಿವಾರ್ಯ ಈ ಕೊಡು-ಕೊಳ್ಳುವಿಕೆಯ ಮಧ್ಯೆ ನೋವು ಇರುತ್ತದೆ. ಇದೆಲ್ಲವನ್ನು ಅರ್ಥಮಾಡಿಕೊಂಡು ದೂರ ದೃಷ್ಠಿಯಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನವನ್ನು ಗಳಿಸುವುದರ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಪುನರ್ಪ್ರತಿಷ್ಠಾಪನೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ವಿನಂತಿಸಿದ್ದಾರೆ.

ಇತ್ತೀಚಿಗೆ ಶೃಂಗೇರಿಗೆ ಬೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ವೈರವರ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಅಭ್ಯರ್ಥಿಗಳೇ ದೊರಕದಿರುವುದು ಪಕ್ಷ ಅಧೋಗತಿಗೆ ಇಳಿದಿರುವುದಕ್ಕೆ ಸಾಕ್ಷಿಯಾಗಿದೆ ಎಂಬ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಶತಮಾನಗಳ ಪಕ್ಷವಾದ ಕಾಂಗ್ರೆಸ್ ಬದ್ರಬುನಾದಿ ಹೊಂದಿರುವಂತಹುದಾಗಿದೆ. ಅದರ ಸರ್ವನಾಶ ಅವರ ಕನಸಿನ ಮಾತು. ಅಷ್ಟಕ್ಕೂ ಬಿಜೆಪಿ ಒಳಗೆ ಏನಾಗುತ್ತಿದೆ ರಾಜ್ಯದಲ್ಲಿ ಐದಾರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗಾಗಿ ಪರದಾಡುತ್ತಿರುವ ಸ್ಥಿತಿ ಬಹಿರಂಗಗೊಂಡಿದೆ. ಇನ್ನೂ ಅವರ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಅವರ ಪಕ್ಷದವರೇ ಗೊ ಬ್ಯಾಕ್ ಶೋಭಾ ಎಂಬ ಘೋಷಣೆ ಯಡ್ಯೂರಪ್ಪನವರಿಗೆ ಕೇಳಿಸಿಲ್ಲವೆ ಎಂದು ಡಾ||.ಡಿ.ಎಲ್ ವಿಜಯಕುಮಾರ್ ಟೀಕಿಸಿದ್ದಾರೆ.


Spread the love