ಸಿಎಂ ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ ನಳಿನ್ ಹೇಳಿಕೆ – ಕ್ಷಮೆ ಯಾಚನೆಗೆ ರವಿ ಶೆಟ್ಟಿ ಒತ್ತಾಯ

Spread the love

ಸಿಎಂ ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ ನಳಿನ್ ಹೇಳಿಕೆ – ಕ್ಷಮೆ ಯಾಚನೆಗೆ ರವಿ ಶೆಟ್ಟಿ ಒತ್ತಾಯ

ಬೈಂದೂರು: ರಾಜ್ಯದ ಮುಖ್ಯಮಂತ್ರಿಯೋರ್ವರನ್ನು ಗಂಡಸು ಅಲ್ಲ ಹೆಂಗಸು ಅಲ್ಲ ಎಂದು ಕೀಳಾಗಿ ಪ್ರತಿಕ್ರಿಯಿಸುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳೀನ್ ಕುಮಾರ್ ಕಟೀಲ್ ಅವರು ತಮ್ಮ ಕೀಳು ಮಟ್ಟದ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ರವಿ ಶೆಟ್ಟಿ ಬೈಂದೂರು ಕಟು ಮಾತುಗಳಿಂದ ಖಂಡಿಸಿದ್ದಾರೆ.

ಟಿಪ್ಪು ಜಯಂತಿ ಆಚರಣೆಯನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರಂಭಿಸಿದ್ದಾಗಲೂ ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿರಲಿಲ್ಲ. ಹಿಂದಿನ ಸರ್ಕಾರ ಆರಂಭಿಸಿದ ಸರ್ಕಾರಿ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗುವ ಕೆಲಸವನ್ನು ಈಗಿನ ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಮಾಡುತ್ತಿದ್ದು ಇದೊಂದು ಸಂಪೂರ್ಣ ಸರ್ಕಾರಿ ಕಾರ್ಯಕ್ರಮವಾಗಿದೆ. ಬಿಜೆಪಿಯ ಯಡಿಯೂರಪ್ಪನವರು ಜಗದೀಶ್ ಶೆಟ್ಟರ್, ಅಶೋಕ್ ಟಿಪ್ಪು ವೇಷ ಹಾಗೂ ಕತ್ತಿ ಹಿಡಿದು ಸಂಭ್ರಮಿಸಿದಾಗ ನಳೀನ್ ಕುಮಾರ್ ಕಟೀಲ್ ಅವರು ಎಲ್ಲಿ ಹೋಗಿದ್ದರು? ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ತಮ್ಮ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಮಾತ್ರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲವಾದರೂ ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ. ಬಿಜೆಪಿ ಸಂಸದರು ಅದನ್ನೇ ವಿಷಯವಾಗಿಸಿಕೊಂಡು ಕೀಳು ಮಟ್ಟದಲ್ಲಿ ಒರ್ವ ರಾಜ್ಯದ ಮುಖ್ಯಮಂತ್ರಿಯೊರ್ವರನ್ನು ಅವಹೇಳನ ಮಾಡಿರುವುದು ಖಂಡನೀಯವಾಗಿದೆ.

ಕಳೆದ ಎರಡು ಅವಧಿಗಳಲ್ಲಿ ದ.ಕ ಜಿಲ್ಲೆಯ ಸಂಸದರಾಗಿ ತಮ್ಮ ಕ್ಷೇತ್ರಕ್ಕೆ ಯಾವುದೇ ರೀತಿಯ ಕೊಡುಗೆ ತೋರದ ಸಂಸದ ನಳಿನ್ ಕುಮಾರ್ ಜಿಲ್ಲೆಗೆ ಬೆಂಕಿ ಇಡುವ ಕೆಲಸವನ್ನು ಮಾಡಹೊರಟವರಿಂದ ಯಾವುದೇ ಪಾಠ ಕಲಿಯುವ ಅಗತ್ಯ ಮುಖ್ಯಮಂತ್ರಿ ಕುಮಾರಸ್ವಾಮಿಗಿಲ್ಲ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಹಲವು ವರ್ಷಗಳಾದರೂ ಕೂಡ ಕೊನೆಗೊಳಿಸುವ ಕನಿಷ್ಟ ಕೆಲಸ ಸಂಸದರಿಂದ ಸಾಧ್ಯವಾಗಿಲ್ಲ ಮೊದಲು ಸಂಸದರು ಇಂತಹ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿ ಮುಗಿಸುವುದರ ಮೂಲಕ ತಮ್ಮ ಗಂಡಸ್ತನವನ್ನು ಪ್ರದರ್ಶಿಸಬೇಕಾಗಿದೆ ಹೊರತು ಇಂತಹ ಕೀಳು ಮಟ್ಟದ ರಾಜಕೀಯ ಹೇಳಿಕೆ ನೀಡುವುದರ ಮೂಲಕ ಮಾಡುವುದು ಸರಿಯಲ್ಲ. ಎಂದು ಗುಡುಗಿದರು

ಸಂಸದರಾಗಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡದ ಸಂಸದರು ಅಭಿವೃದ್ಧಿಯ ವಿಷಯದಲ್ಲಿ ಮಾತನಾಡಲು ಆಗದೇ ಇಂತಹ ಕೀಳುಮಟ್ಟದ ರಾಜಕೀಯ ಹೇಳಿಕೆಗಳನ್ನು ಹೇಳುತ್ತಾ ರಾಜ್ಯ ಒಡೆಯುತ ಗಮನಹರಿಸುತ್ತಿರುವ ಸಂಸದರು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಕಲಿಯಲು ಹಲವು ವಿಚಾರಗಳಿವೆ. ಸದಾ ರಾಜ್ಯದ ಬಡ ರೈತರ ಬಗ್ಗೆ ಹಾಗೂ ನೊಂದವರ ಬಗ್ಗೆ ಕಾಳಜಿ ಹೊಂದಿರುವ ಕುಮಾರಸ್ವಾಮಿಯ ವಿರುದ್ದ ಇಂತಹ ಹೇಳಿಕೆ ನೀಡಿರುವ ಸಂಸದ ನಳಿನ್ ಕುಮಾರ್ ಅವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಲೇ ಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರ ವಿರುದ್ದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುವುದು ಎಂದು ಎಚ್ಚರಿಸಿದರು .


Spread the love

1 Comment

Comments are closed.