
ಅಪಹರಣಕ್ಕೆ ಒಳಗಾಗಿದ್ದ ಯುವಕನ ಶವ ಪತ್ತೆ: ಕೊಲೆ ಶಂಕೆ
ಹಾಸನ: ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೆ ಒಳಗಾಗಿದ್ದ ಯುವಕನ ಶವ ತಾಲ್ಲೂಕಿನ ಯೋಗೀಹಳ್ಳಿ ಅರಣ್ಯದಲ್ಲಿ ಬುಧವಾರ ಪತ್ತೆಯಾಗಿದೆ. ಕೊಲೆ ಮಾಡಿ ಶವವನ್ನು ಅರಣ್ಯದಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಲಿಖಿತ್ಗೌಡ ಅಲಿಯಾಸ್ ಬಂಗಾರಿ (26) ಕೊಲೆಯಾದ ಯುವಕ.
ಬೆಳಿಗ್ಗೆಯಿಂದ ತೀವ್ರ ಶೋಧ ಕಾರ್ಯ ನಡೆಸಿದ ನೂರಕ್ಕೂ ಹೆಚ್ಚು ಪೊಲೀಸರಿಗೆ ಅರಣ್ಯದಲ್ಲಿ ಶವ ಸಿಕ್ಕಿದೆ.
ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್ಗೌಡ ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ. ಲಿಖಿತ್ಗೌಡನಿಂದ ನವೀನ್ ₹ 2.5 ಲಕ್ಷ ಸಾಲ ಪಡೆದಿದ್ದ. ಸಾಲ ಹಿಂದಿರುಗಿಸದ್ದರಿಂದ ಲಿಖಿತ್ಗೌಡ ಹಾಗೂ ನವೀನ್ ನಡುವೆ ಜಗಳ ನಡೆದಿತ್ತು ಇದರಿಂದ ಕೋಪಗೊಂಡ ಲಿಖಿತ್ಗೌಡ ₹ 10 ಲಕ್ಷದ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು, ಆಯಕ್ವಿವ್ ಹೋಂಡಾ ತೆಗೆದುಕೊಂಡು ಬಂದಿದ್ದ. ಇದು ವಿಕೋಪಕ್ಕೆ ತಿರುಗಿ ನವೀನ್ ಮತ್ತು ಲಿಖಿತ್ಗೌಡ ಮಧ್ಯೆ ಮತ್ತೆ ಜಗಳ ನಡೆದಿತ್ತು.
ಫೆ.5 ರಂದು ಸಂಜೆ ಹಣ ಕೊಡುವುದಾಗಿ ಹೇಳಿ ನವೀನ್ ಹಾಗೂ ಸಾಗರ್, ಲಿಖಿತ್ಗೌಡನನ್ನು ಕರೆದುಕೊಂಡು ಹೋಗಿದ್ದರು. ಅಂದಿನಿಂದ ಎಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಇದರಿಂದ ಆತಂಕಗೊಂಡ ಲಿಖಿತ್ಗೌಡ ಪತ್ನಿ ಸಂಪ್ರೀತಾ ಹಾಗೂ ಕುಟುಂಬದವರು ನಗರದ ಬಡಾವಣೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶೋಧ ಕಾರ್ಯ ಆರಂಭಿಸಿದ್ದರು.
ಬುಧವಾರ ಬೆಳಿಗ್ಗೆ ಯೋಗೀಹಳ್ಳಿ ಅರಣ್ಯದಲ್ಲಿ ಯುವಕನ ಶವ ಇರುವ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಪೊಲೀಸರು, ಅದು ಲಿಖಿತ್ಗೌಡನ ಶವ ಎಂದು ಗುರುತಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.