ಅ.18ರಿಂದ 21ರವರೆಗೆ ಸಂತ ಅಲೋಶಿಯಸ್ ವಿವಿಯಲ್ಲಿ 25ನೇ ತ್ರೈಮಾಸಿಕ ಸಮ್ಮೇಳನ ಸಮ್ಮೇಳನ
ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಿಂದ ಕ್ಸೇವಿಯರ್ ಬೋರ್ಡ್ ಆಫ್ ಹೈಯರ್ ಎಜುಕೇಶನ್ ನ 25ನೇ ತ್ರೈಮಾಸಿಕ ಸಮ್ಮೇಳನ ಅ.18ರಿಂದ 21ರವರೆಗೆ ಆಯೋಜಿಸಲಾಗಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂತ ಅಲೋಶಿಯಸ್ ವಿವಿಯ ಕುಲಪತಿ ರೆ.ಫಾ.ಡಾ.ಪ್ರವೀಣ್ ಮಾರ್ಟಿಸ್, ‘ಮನಸ್ಸುಗಳನ್ನು ಸದೃಢಗೊಳಿಸಿ, ಬದಲಾವಣೆಯನ್ನು ಸ್ವೀಕರಿಸಿ: ಜಾಗತಿಕ ಭವಿಷ್ಯದ ಸಾಧನವಾಗಿ ಉನ್ನತ ಶಿಕ್ಷಣದ ಪುನರ್ ಕಲ್ಪನೆ ಮಾಡೋಣ’ ಎಂಬ ವಿಷಯದಲ್ಲಿ ಅಲೋಶಿಯಸ್ ವಿವಿ ಕ್ಯಾಂಪಸ್ ನ ಎಲ್ಸಿಆರ್ಐ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.
ಸಮ್ಮೇಳನವು ದೇಶದೆಲ್ಲೆಡೆಯ ಕ್ರೈಸ್ತ ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶೈಕ್ಷಣಿಕ ನಾಯಕು ಮತ್ತು ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಉನ್ನತ ಶಿಕ್ಷಣದ ಬದಲಾದ ಪ್ರಪಂಚದ ಬಗ್ಗೆ ಚಿಂತನೆ ಮತ್ತು ವೇದಿಕೆಯನ್ನು ಒದಗಿಸಲಿದೆ.
ಅ.18ರಂದು ಸಂಜೆ 4 ಗಂಟೆಗೆ ಬಲಿಪೂಜೆಯೊಂದಿಗೆ ಸಮ್ಮೇಳನ ಆರಂಭವಾಗಲಿದೆ. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉದ್ಘಾಟನೆ ನೆರವೇರಿಸಲಿದ್ದು, ಭಾರತ ಸರಕಾರದ ಶಿಕ್ಷಣ ಸಚಿವಾಲಯದ ಸಂಯುಕ್ತ ಕಾರ್ಯದರ್ಶಿ ಆರ್ಮ್ಸ್ಟ್ರಾಂಗ್ ಪಾಮೇ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಾಗ್ಪುರದ ಆರ್ಚ್ ಬಿಷಪ್ ಹಾಗೂ ಸಿಬಿಸಿಐ ಶಿಕ್ಷಣ ಮತ್ತು ಸಂಸ್ಕೃತಿ ಆಯೋಗದ ಅಧ್ಯಕ್ಷ ರೆ.ಫಾ. ಡಾ.ಎಲಿಯಾಸ್ ಗೋನ್ಸಾಲ್ವಿಸ್ ದಿವ್ಯ ಬಲಿಪೂಜೆ ನೆರವೇರಿಸಲಿದ್ದಾರೆ. ಅ.19ರಂದು ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್ ರೆ.ಫಾ.ಡಾ.ಅಲೋಶಿಯಸ್ ಪೌಲ್ ಡಿಸೋಜ ನೆರವೇರಿಸಲಿದ್ದಾರೆ. ಸಮ್ಮೇಳನದ ಪ್ರಾಯೋಜಕತ್ವವನ್ನು ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ವಹಿಸಿದ್ದಾರೆ. ಸಮ್ಮೇಳನದಲ್ಲಿ ದೇಶ ವಿದೇಶಗಳ ತಜ್ಞರು ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ಸೇವಿಯರ್ ಬೋರ್ಡ್ ಆಫ್ ಹಯರ್ ಎಜಕೇಶನ್ನ ಅಧ್ಯಕ್ಷ ರೆ.ಫಾ.ಡಾ.ಜೋಜಿ ರೆಡ್ಡಿ, ಉಪಾಧ್ಯಕ್ಷ ರೆ.ಫಾ.ಗಿಲ್ಬರ್ಟ್ ಮಸ್ಕರೇನಸ್, ಪ್ರಧಾನ ಕಾರ್ಯದರ್ಶಿ ಭಗಿನಿ ಡಾ.ದೀಪ್ತಿ ಯುಎಫ್ಎಸ್ ಹಾಗೂ ಸಂತ ಅಲೋಶಿಯಸ್ ವಿವಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಕಲಾ ಉಪಸ್ಥಿತರಿದ್ದರು.