
ಆಜಾದಿ ಸೇ ಅಂತ್ಯೋಯ್ ತಕ್ ಅಭಿಯಾನದಲ್ಲಿ ದಕ ಜಿಲ್ಲೆಗೆ ಪ್ರಶಸ್ತಿ
ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಕೇಂದ್ರ ಸರಕಾರ ನಡೆಸಿದ ಆಜಾದಿ ಸೇ ಅಂತ್ಯೋದಯ ತಕ್ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿ ಐದನೇ ಸ್ಥಾನ ಪಡೆದಿದ್ದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು.
ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಜನರ ನೋಂದಣಿ ಮಾಡೂವ ಮೂಲಕ ಅವರನ್ನು ವಿಮೆ ವ್ಯಾಪ್ತಿಗೆ ತರಲಾಗಿದೆ. ಜನ್ ಧನ್ ಯೋಜನೆ, ಕೌಶಲಾಭಿವೃದ್ಧಿ ತರಬೇತಿ, ನರೇಗಾ ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಗುಂಪುಗಳಿಗೆ ನರ್ಸರಿ ತರಬೇತಿ, ಹೀಗೆ ಫಲಾನುಭವಿ ಆಧಾರಿತ ಕಾರ್ಯಕ್ರಮಗಳ ಅನುಷ್ಠಾಣಕ್ಕೆ ಸಮಿತಿ ರಚಿಸಿದ್ದು ಪ್ರತಿ ಬ್ಯಾಂಕ್ ಶಾಖೆಗೆ ತಂಗಳಿಗೆ 20 ಜನರ ನೋಂದಣಿ ಗುರಿ ನೀಡಿ ಉತ್ತಮ ಸಾಧನೆ ಮಾಡಿದ ಬ್ಯಾಂಕುಗಳನ್ನು ಗೌರವಿಸಲಾಗಿದೆ. ಯುಡಿಐಡಿ ಕಾರ್ಡ್ ವಿತರಣೆ ಹಾಗೂ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಯೋಜನೆಗಳಲ್ಲಿ ಶೇ 100 ರಷ್ಟು ಗುರಿ ಸಾಧನೆ ಮಾಡಲಾಗಿದೆ.
ನವದೆಹಲಿಯ ಹ್ಯಾಬಿಟ್ಯಾಟ್ ಸೆಂಟರ್ ನಲ್ಲಿ ಸೋಮವಾರ ಕೇಂದ್ರ ಸಚಿವರು ಪ್ರಶಸ್ತಿಯನ್ನು ವಿತರಿಸಿದರು. ಅಭಿಯಾನದಲ್ಲಿ ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 75 ಜಿಲ್ಲೆಗಳು ಭಾಗವಹಿಸಿದ್ದವು.