ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ, ತಿಂಗಳ ಹಿಂದೆಯೂ ಕೊಲೆಗೆ ಯತ್ನಿಸಿದ್ದ ತಂಡ
ಮಂಗಳೂರು: ರೌಡಿ ಶೀಟರ್ ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅರ್ಷದ್, ಪುಚ್ಚೆ ನಿಸಾಕ್ ಮತ್ತು ಜುನೈದ್ ಬಂಧಿತರು.
ಪ್ರಕರಣದಲ್ಲಿ ಈ ಹಿಂದೆ 7 ಮಂದಿಯನ್ನು ಬಂಧಿಸಿದ್ದು, ಈಗ ಬಂಧಿತರ ಸಂಖ್ಯೆ 10 ಕ್ಕೇರಿದೆ. ಆರಿಫ್ ನನ್ನು ಮಾರ್ಚ್ 27 ರಂದು ತೊಕ್ಕೊಟ್ಟಿನಲ್ಲಿ ಕಾರು ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದರು. ಅದಕ್ಕೂ ಹಿಂದೆ ಫೆ.13 ರಂದು ಆರಿಫ್ ಎಂದಿನಂತೆ ಬೈಕಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿಗಳು ಹತ್ಯೆಗೆ ಪ್ರಯತ್ನ ಪಟ್ಟಿದ್ದರು. ಆದರೆ ಅಂದು ಆರಿಫ್ ಹತ್ಯೆ ಸಾಧ್ಯವಾಗಿರಲಿಲ್ಲ. ಹತ್ಯೆಗೆ ಯತ್ನಿಸಿದವರನ್ನು ಈಗ ಬಂಧಿಸಲಾಗಿದೆ.
ಬಂಧಿತ ಅರ್ಷಾದ್ ಆರೋಪಿಗಳಿಗೆ ಶಸ್ತ್ರಾಸ್ತ್ರ ಪೊಲೀಸರ ಸಂಚಾರದ ಮಾಹಿತಿ, ಸಾರಿಗೆ ಮತ್ತು ಹಣದ ವ್ಯವಸ್ಥೆ ಮಾಡಿಕೊಟ್ಟಿದ್ದ. ಪುಚ್ಚೆ ನಿಸಾಕ್, ಆರಿಫ್ ಮೇಲೆ ನಡೆದ ಕೊಲೆ ಯತ್ನದ ತಂಡದಲ್ಲಿ ಭಾಗಿಯಾಗಿದ್ದ. ಅಲ್ಲದೆ, 2022 ರಲ್ಲಿ ನಡೆದ ದಾಳಿಯಲ್ಲೂ ಈತ ಶಾಮೀಲಾಗಿದ್ದನು. ಜುನೈದ್ ಆರೋಪಿಗಳಿಗೆ ವಾಹನವನ್ನು ಒದಗಿಸಿದ್ದಲ್ಲದೆ, ಕೊಲೆ ಯತ್ನದ ಸಂಚಿನಲ್ಲಿ ಭಾಗವಾಗಿದ್ದ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
