
ಆರ್.ಎಸ್.ಎಸ್.ಗೆ ತಳ ಸಮುದಾಯಗಳ ಬಗ್ಗೆ ಕಾಳಜಿ ಇಲ್ಲ – ಡಾ.ಸಿ.ಎಸ್.ದ್ವಾರಕಾನಾಥ್
ಉಡುಪಿ: 100 ವರ್ಷಗಳ ಆರ್ಎಸ್ಎಸ್ ಇತಿಹಾಸದಲ್ಲಿ ಎಂದೂ ಜಾತಿ ಪದ್ಧತಿ, ಅಸ್ಪೃಶ್ಯತೆ, ಬಡತನವನ್ನು ಪ್ರಶ್ನೆ ಮಾಡಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಹೇಳಿದರು.
ಅವರು ಕರ್ನಾಟಕ ದಲಿತ ಸಂಘರ್ಷಗಳ ಐಕ್ಯತಾ ಸಮಿತಿ ವತಿಯಿಂದ ಗುರುವಾರ ಮದರ್ ಆಫ್ ಸಾರೋಸ್ ಚರ್ಚ್ನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆದ ಭಾರತದ ಸಂವಿಧಾನ ಹಾಗೂ ಧರ್ಮ ರಾಜಕಾರಣ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾನತೆ, ಸಹೋದರತ್ವ, ಸಹಬಾಳ್ವೆ, ಜಾತ್ಯತೀತತೆ ಹಾಗೂ ಜೀವ ವಿರೋಧಿಗಳಾಗಿರುವ ಸಂಘ ಪರಿವಾರ ದಶಕಗಳಿಂದಲೂ ಸಂವಿಧಾನವನ್ನು ವಿರೋಧಿಸಿಕೊಂಡೇ ಬಂದಿದೆ ಎಂದರು.
ಆರ್ಎಸ್ಎಸ್ ಹಿಂದುತ್ವ ಎಂದರೆ ಬ್ರಾಹ್ಮಣತ್ವವಾಗಿದೆ. ಆರ್ಎಸ್ಎಸ್ 97 ವರ್ಷಗಳಲ್ಲಿ 7 ಸರಸಂಘ ಚಾಲಕರನ್ನು ಕಂಡಿದ್ದು ಅವರಲ್ಲಿ 6 ಮಂದಿ ಬ್ರಾಹ್ಮಣರು, ಒಬ್ಬರು ಮಾತ್ರ ಬನಿಯಾ. ಇದುವರೆಗೂ ಒಬ್ಬ ಶೂದ್ರ, ಒಬ್ಬ ದಲಿತ, ಆದಿವಾಸಿ, ಅಲೆಮಾರಿ ಸರಸಂಘ ಚಾಲಕನಾಗಿಲ್ಲ. ಇವರೆಲ್ಲ ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದರು. ಹಿಂದೂ, ರಾಷ್ಟ್ರೀಯತೆ, ಭಾರತೀಯತೆ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ. 100 ವರ್ಷಗಳ ಆರ್ಎಸ್ಎಸ್ ಇತಿಹಾಸದಲ್ಲಿ ಎಂದೂ ಜಾತಿ ಪದ್ಧತಿ, ಅಸ್ಪೃಶ್ಯತೆ, ಬಡತನವನ್ನು ಪ್ರಶ್ನೆ ಮಾಡಿಲ್ಲ. ಕೆಳ ವರ್ಗಕ್ಕೆ ಸೇರಿದ ಹಿಂದೂಗಳ ಸಮಸ್ಯೆಗಳು ಕಾಣುತ್ತಿಲ್ಲ.
ಆರ್ಎಸ್ಎಸ್ಗೆ ಬೇಕಿರುವುದು ವೈದಿಕ ಶ್ರೇಷ್ಠತೆ, ಅಧಿಕಾರವೇ ಹೊರತು ತಳ ಸಮುದಾಯಗಳ ಬಗ್ಗೆ ಕಾಳಜಿ ಇಲ್ಲ. ಮುಗ್ಧ ಹಿಂದುಳಿದ ವರ್ಗಗಳನ್ನು ಮತ್ತೊಂದು ಧರ್ಮದ ಮೇಲೆ ಸಮುದಾಯಗಳ ಮೇಲೆ ಎತ್ತಿಕಟ್ಟು ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನದಲ್ಲಿ ಧರ್ಮ ನಿರಪೇಕ್ಷತೆಯ ಅಂಶವಿದ್ದರೂ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಕೈಸ್ತರು ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆ ಎಂದು ದೂರುತ್ತಾರೆ. ಆದರೆ, ದೇಶಕ್ಕೆ ಸ್ವಾತಂತ್ಯ ಬಂದಾಗ ಇದ್ದ ಕ್ರೈಸ್ತರ ಜನಸಂಖ್ಯೆ ಪ್ರಸ್ತುತ ಕುಸಿತ ಕಂಡಿದೆ. ಮತಾಂತರ ಮಾಡಿದ್ದರೆ ಕ್ರೈಸ್ತರ ಸಂಖ್ಯೆ ಹೆಚ್ಚಾಗಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ಧರ್ಮ ಹುಟ್ಟಿನಿಂದ ಬರಬಾರದು, ಪ್ರಜ್ಞೆ ಬಂದ ಬಳಿಕ ಆಯ್ಕೆಯಾಗಬೇಕು ಎಂದು ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ್ದರು ವೈದಿಕಶಾಹಿಯ ವಿರುದ್ಧ ಶತಮಾನಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಮಹಾನ್ ಹೋರಾಟಗಾರರ ಆಶಯಗಳನ್ನು ಸಂವಿಧಾನದಲ್ಲಿ ಕಟ್ಟಿಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.
ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿ ‘ಕೋಮುವಾದಿಗಳ ಪ್ರಯೋಗ ಶಾಲೆಯಾಗಿರುವ ಉಡುಪಿ ಜಿಲ್ಲೆಯಲ್ಲಿ ದಲಿತ ಸಂಘಟನೆಗಳು ಒಟ್ಟಾಗಿ ಐಕ್ಯತಾ ಸಮಿತಿ ರಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆಯ ಬಿಜೆಪಿ ಸದಸ್ಯೆ ಎಡ್ಲಿನ್ ಕರ್ಕಡ ಅಂಬೇಡ್ಕರ್ ಸೇನೆಗೆ ಸೇರ್ಪಡೆಯಾದರು.
ಕರ್ನಾಟಕ ದಲಿತ ಸಂಘರ್ಷಗಳ ಐಕ್ಯತಾ ಸಮಿತಿಯ ಸಂಚಾಲಕ ಸುಂದರ್ ಮಾಸ್ತರ್ , ಉಡುಪಿ ಚರ್ಚ್ನ ಧರ್ಮಗುರು ಚಾರ್ಲ್ಸ್ ಮಿನೇಜಸ್,ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇದ್ರಿಸ್ ಹೂಡೆ, ನಿವೃತ್ತ ಬಿಇಒ ವಿಠಲದಾಸ್ ಬನ್ನಂಜೆ, ಕರ್ನಾಟಕ ದಲಿತ ಸಂಘರ್ಷಗಳ ಐಕ್ಯತಾ ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಕೊರಗ ಮುಖಂಡರಾದ ಸುಂದರ್, ಮುಖಂಡರಾದ ಶೇಖರ್ ಹೆಜಮಾಡಿ, ಹರೀಶ್ ಸಾಲ್ಯಾನ್, ಹರೀಶ್ ಮಲ್ಪೆ, ವಿಶ್ವನಾಥ್ ಬೆಳ್ಳಂಪಳ್ಳಿ, ರಮೇಶ್ ಕೆಳಾರ್ಕಳ ಬೆಟ್ಟು, ವಾಸುದೇವ ಮುದೂರು, ಶ್ಯಾಮರಾಜ್ ಬಿರ್ತಿ, ಸುಂದರ್ ಗುಜ್ಜರಬೆಟ್ಟು, ಡಾ.ಪ್ರೇಮದಾಸ್ ಇದ್ದರು.