ಉಡುಪಿ ಧರ್ಮಪ್ರಾಂತ್ಯ ಮಟ್ಟದ ಗೃಹ ಕಾರ್ಮಿಕರ ದಿನಾಚರಣೆ
ಉಡುಪಿ: ಅಂತರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆಯಾದ ಜೂನ್ 16 ರಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕಾರ್ಮಿಕರ ಆಯೋಗದಿಂದ ” ಗೃಹ ಕಾರ್ಮಿಕರ ದಿನಾಚರಣೆ” ಯನ್ನು ಉಡುಪಿ ಕಕ್ಕುಂಜೆಯ ಅನುಗೃಹ ಪಾಲನಾ ಕೇಂದ್ರದಲ್ಲಿ ಆಚರಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳಾದ ಮೊನ್ಸಿಂಜೊರ್. ಫರ್ಡಿನಾಂಡ್ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಯಾಗಿರುವಂತಹ ಮಲ್ ಶಾ ಅಲ್ತಾಫ್ ಅಹ್ಮದ್ ರವರು ಭಾಗವಹಿಸಿ, ತಮ್ಮ ಸಂದೇಶದಲ್ಲಿ ” ಅಂತರಾಷ್ಟ್ರೀಯ ಗೃಹಕಾರ್ಮಿಕರ ದಿನಾಚರಣೆಯ ಈ ದಿನ ನಿಮ್ಮೊಂದಿಗೆ ಆಚರಿಸಲು ಬಹಳ ಸಂತೋಷವಾಗುತ್ತಿದೆ. ಗೃಹಕಾರ್ಮಿಕರು ಯಾವುದೇ ತರಹದವರಾಗಿರಲಿ ಅವರು, ಆ ಮನೆಯ ದೈನಂದಿನ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುವಂತವರಾಗಿದ್ದಾರೆ, ಗೃಹಕಾರ್ಮಿಕರು ಇರುವುದರಿಂದ ಮನೆಯ ಸದಸ್ಯರ ಬದುಕು ನೆಮ್ಮದಿಯಿಂದ ಬದುಕಲು ಸಾಧ್ಯ. ಸರಕಾರದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಲ್ಲಿ ಗೃಹಕಾರ್ಮಿಕರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ, ಅದರ ಸದುಪಯೋಗವನ್ನು ಪಡೆದುಕೊಳ್ಳಿ” ಎಂದು ಕರೆ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳು ಹಾಗೂ ಆಯೋಗಗಳ ಸಂಯೋಜಕರಾದ ಅತಿ. ವಂದನೀಯ ಸ್ಟೀವನ್ ಡಿಸೋಜರವರು ಪ್ರಾರ್ಥನಾ ವಿಧಿಯನ್ನು ನಡೆಸಿ ಒಳ್ಳೆಯ ರೀತಿಯಲ್ಲಿ ದೇವರು ನಮ್ಮನ್ನು ನಮ್ಮ ಕಾಯಕದಲ್ಲಿ ಕಾಪಾಡಲಿ ಎಂದರು.
ಸಿಐಟಿಯು ನ ರಾಜ್ಯ ಜಂಟಿ ಕಾರ್ಯದರ್ಶಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ರವರು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯ ವಿವರಗಳನ್ನು ನೀಡಿ , ಸಂಘಟಿತರಾಗಲು ಕರೆ ನೀಡಿದರು. ಉಡುಪಿ ಧರ್ಮಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕರಾದ ಎಲ್ರಾಯ್ ಕಿರನ್ ಕ್ರಾಸ್ಟೊ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ” ಧರ್ಮಪ್ರಾಂತ್ಯದ ಕಾರ್ಮಿಕ ಆಯೋಗವು ನಿಮ್ಮೊಂದಿಗೆ ಸದಾ ಇದ್ದು ನಿಮ್ಮನ್ನು ಸಂಘಟಿಸಿ ಶಕ್ತಿವಂತರನ್ನಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ ಹಾಗೂ ಅಂತರಾಷ್ಟ್ರೀಯ ಗೃಹಕಾರ್ಮಿಕರ ದಿನವನ್ನು ಇಂದು ನಿಮ್ಮೊಂದಿಗೆ ಆಚರಿಸಿ, ನಿಮಗೆ ಸ್ಪೂರ್ತಿ ತುಂಬುವಂತಹುದೇ ಇದರ ಉದ್ದೇಶವೆಂದು ಹೇಳಿದರು.
ಮೊನ್ಸಿಂಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ ” ಅಂತರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆಯನ್ನು ಧರ್ಮಪ್ರಾಂತ್ಯ ಮಟ್ಟದಲ್ಲಿ ಪ್ರಥಮ ಬಾರಿ ಆಚರಿಸುವ ಸಂದರ್ಭದಲ್ಲಿ ನಾವೆಲ್ಲರೂ ಸಂಘಟಿತರಾಗೋಣ ಹಾಗೂ ನಮಗೆ ಸಿಗುವಂತಹ ಸೌಲಭ್ಯಗಳನ್ನು ” ಎಂದು ಕರೆ ನೀಡಿದರು.
ಉಡುಪಿ ಧರ್ಮಪ್ರಾಂತ್ಯ ಸಮಿತಿಯ ಸದಸ್ಯರಾದ ಪ್ರಭು ಕೆನಡಿ ಪಿರೇರಾರವರು ಸರ್ವರನ್ನು ಸ್ವಾಗತಿಸಿದರೆ ಕಲ್ಯಾನ್ ಪುರ ವಲಯದ ಕಾರ್ಮಿಕ ಆಯೋಗದ ಸಂಯೋಜಕರಾದ ಲೂಕ್ ಡಿಸೋಜ ವಂದಿಸಿದರು. ಶಾಂತಿ ಪಿರೇರಾ ಕೆಲವು ಆಟಗಳನ್ನು ನೇರವೇರಿಸಿ ಕಾರ್ಯಕ್ರಮ ನಿರೂಪಿಸಿದರು. ಅವುಗಳಲ್ಲಿ ಗೆದ್ದ ಗೃಹ ಕಾರ್ಮಿಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಾಜರಾದ ಗೃಹ ಕಾರ್ಮಿಕರು ಅತಿಥಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು..