ಉಡುಪಿ: ನಕಲಿ ಸಿಗರೇಟ್ ಹಾಗೂ ನಿಷೇಧಿತ ಇ-ಸಿಗರೇಟ್ ಜಾಲವನ್ನು ಪತ್ತೆ – ನಾಲ್ವರ ಬಂಧನ

Spread the love

ನಕಲಿ ಸಿಗರೇಟ್ ಹಾಗೂ ನಿಷೇಧಿತ ಇ-ಸಿಗರೇಟ್ ಜಾಲವನ್ನು ಪತ್ತೆ – ನಾಲ್ವರ ಬಂಧನ

ಉಡುಪಿ: ನಕಲಿ ಸಿಗರೇಟ್ ಹಾಗೂ ನಿಷೇಧಿತ ಇ-ಸಿಗರೇಟ್ ಜಾಲವನ್ನು ಪತ್ತೆ ಹಚ್ಚಿರುವ ಪಡುಬಿದ್ರಿ ಮತ್ತು ಮಣಿಪಾಲ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ 121-ಕಾಪು ವಿಧಾನಸಭಾ ಕ್ಷೇತ್ರದ S.S.T-03 ನೇ ತಂಡದ ಅಧಿಕಾರಿಯವರು ಏ17 ರಂದು ಸುಮಾರು 09.30 ಗಂಟೆಗೆ ಪಡುಬಿದ್ರಿ ಪೊಲೀಸ್ ಠಾಣಾ ಸರಹದ್ದಿನ ಕಾಪು ತಾಲೂಕು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಸಮಯದಲ್ಲಿ ಯಾವುದೇ ದಾಖಲೆ ಇಲ್ಲದ ಒಟ್ಟು 4,79,970/- ರೂ ಮೌಲ್ಯದ ಸಿಗರೇಟ್ ಬಂಡಲ್ಗಳು ಮತ್ತು ನಿಷೇಧೀತ E-Cigarette ಗಳನ್ನು , ಸಾಗಾಟಕ್ಕೆ ಉಪಯೋಗಿಸಿದ ಕಾರು ಮತ್ತು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆರವರ ಸೂಚನೆಯಂತೆ ಏಪ್ರಿಲ್ 18 ರಂದು ಅಕ್ರಮವಾಗಿ ಇ- ಸಿಗರೇಟ್ (Electronic Cigarettes) ಸಂಗ್ರಹ ಹಾಗೂ ವಿದೇಶಿ ಕಂಪನಿಯ ಸಿಗರೇಟುಗಳನ್ನು ಎಂ.ಆರ್.ಪಿ ದರ ನಮೂದಿಸದೇ ಕೋಟ್ಪಾ ಕಾಯಿದೆ ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಮಣಿಪಾಲದಲ್ಲಿನ ಶೀಶಾ ಪ್ಯಾರಡೈಸ್ ಮತ್ತು ಸ್ಮೋಕ್ ಕೋ ಎಂಬ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಎರಡೂ ಅಂಗಡಿಗಳಿಂದ ಸುಮಾರು 1,50,000 /- ರೂ ಮೌಲ್ಯದ 113 ವಿವಿಧ ಕಂಪನಿಯ ನಿಷೇದಿತ ಇ- ಸಿಗರೇಟ್ ಗಳು ಹಾಗೂ 5,000/- ರೂ ಮೌಲ್ಯದ ವಿದೇಶಿ ಕಂಪನಿಯ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ ಒಟ್ಟು 1,55,000/- ಆಗಿರುತ್ತದೆ.

ಶೀಶಾ ಪ್ಯಾರಡೈಸ್ ಅಂಗಡಿ ಮಾಲೀಕರಾದ ಅನ್ಸಾರ್ ಹಾಗೂ ಸ್ಮೋಕ್ ಕೋ ಅಂಗಡಿಯ ಮಾಲೀಕರಾದ ಮುಫೀನ್ ಇಬ್ಬರ ವಾಸ :ಉಪ್ಪಳ ಗ್ರಾಮ, ಮಂಜೇಶ್ವರ ತಾಲೂಕು ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ರವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ Prohibition of Electronic Cigarettes (Production, Manufacture , Import, Export, Transport, Sale , Distribution, Storage and advertisement ) act 2019 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ವಿಚಾರಣೆಯ ವೇಳೆ ಐ.ಟಿ.ಸಿ ಕಂಪನಿಯ ನಕಲಿ ಸಿಗರೇಟು ಗಳನ್ನು ತಯಾರಿಸಿ ಮಾರಾಟ ಮಾಡಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಅನ್ಸಾರ್ ಭಾಗಿಯಾಗಿದ್ದು, ಅದೇ ರೀತಿ ಮುಫೀನ್ ಎಂಬುವವನು ಮುಂಬೈನ ಕ್ರಾಫ್ಟ್ ಮಾರುಕಟ್ಟೆಯಲ್ಲಿ ನಿಷೇದಿತ ಇ- ಸಿಗರೇಟುಗಳನ್ನು ಖರೀದಿಸಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ಮುಂದುವರೆದಿದೆ.

ಸದರಿ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಮಚಿಂದ್ರ ಹಾಕೆ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ಧಲಿಂಗಪ್ಪ ಟಿ ಕೆ.ಎಸ್.ಪಿ.ಎಸ್ , ದಿನಕರ ಕೆ.ಪಿ ಡಿ.ವೈ.ಎಸ್.ಪಿ ಉಡುಪಿರವರ ನಿರ್ಧೇಶನದಂತೆ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕರಾದ ದೇವರಾಜ ಟಿ.ವಿ ರವರ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರುಕ್ಮಾ ನಾಯ್ಕ, ಎ.ಎಸ್ಐ ಶೈಲೇಶ್ ಕುಮಾರ್, ಪಿಸಿ 2646 ಅರುಣ್ ಕುಮಾರ್, ಪಿಸಿ 04 ರೇವಣಸಿದ್ಧ, ಪಿಸಿ 189 ಉಮೇಶ್ ಯಾದವ್ ರವರು ದಾಳಿ ಸಮಯದಲ್ಲಿ ಭಾಗವಹಿಸಿರುತ್ತಾರೆ.

ಸರ್ಕಾರವು ಇ-ಸಿಗರೇಟ್ನ್ನು ನಿಷೇಧ ಮಾಡಿದ್ದು, ಐ.ಟಿ.ಸಿ ಕಂಪೆನಿಯ ನಕಲಿ ಗೋಲ್ಡ್ ಫ್ಲೇಕ್ ಸಿಗರೇಟ್ , ವಿದೇಶಿ ಕಂಪನಿಯ ಸಿಗರೇಟ್ ಹಾಗೂ ನಿಷೇಧಿತ ಇ- ಸಿಗರೇಟ್ ಗಳನ್ನು ಪಡುಬಿದ್ರಿ ಮತ್ತು ಮಣಿಪಾಲದಲ್ಲಿ ಪತ್ತೆ ಹಚ್ಚಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಹಾಗೂ ಪಡುಬಿದ್ರೆ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತದೆ. ಸದರಿ 3 ಪ್ರಕರಣಗಳಲ್ಲಿ 6,34,970/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಸದರಿ ಪ್ರಕರಣದ ಕುರಿತು ತನಿಖೆ ಮುಂದುವರೆದಿದ್ದು, ಸಾರ್ವಜನಿಕರಿಗೆ ನಿಷೇದಿತ ಇ- ಸಿಗರೇಟು ಹಾಗೂ ನಕಲಿ ಸಿಗರೇಟುಗಳ ಮಾರಾಟ ಮಾಡುವ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಮಚಿಂದ್ರ ಹಾಕೆ ಐ.ಪಿ.ಎಸ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love