
ಉಡುಪಿ: ಮಾಬುಕಳ ಸೇತುವೆಯಲ್ಲಿ ಅಂಬುಲೆನ್ಸ್ ಅಪಘಾತ, ತಪ್ಪಿದ ಭಾರಿ ದುರಂತ
ಉಡುಪಿ: ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಂಬುಲೆನ್ಸ್ ನ ಟೈರ್ ಸ್ಪೋಟಗೊಂಡು ಡಿವೈಡರ್ ಹಾರಿ ಬಲಬದಿಯ ರಸ್ತೆ ನುಗ್ಗಿ ಸೇತುವೆಯ ಆವರಣ ಗೋಡೆಗೆ ಡಿಕ್ಕಿಯಾದ ಘಟನೆ ಬ್ರಹ್ಮಾವರ ತಾಲೂಕಿನ ಮಾಬುಕಳ ಸೇತುವೆಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಉತ್ತರಕನ್ನಡ ಮೂಲದ ಅನಾರೋಗ್ಯಪೀಡಿತ ಮಗುವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ಅಂಬುಲೆನ್ಸ್ನ ಟೈರ್ ಏಕಾಏಕಿ ಸ್ಪೋಟಗೊಂಡಿದ್ದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬಲಬದಿಯ ರಸ್ತೆ ನುಗ್ಗಿ ಪಕ್ಕದ ಮಾಬುಕಳ ಸೇತುವೆಯ ತಡಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಸೇತುವೆಯ ತಡೆಗೋಡೆಗೆ ಡಿಕ್ಕಿಹೊಡೆದು ಅಲ್ಲಿಯೇ ನಿಂತಿದ್ದರ ಪರಿಣಾಮ ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದು ಭಾರಿ ದುರಂತ ತಪ್ಪಿದೆ.
ಘಟನೆಯಲ್ಲಿ ಮಗುವಿನ ಜೊತೆಯಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ತಾಯಿಗೆ ಗಂಭೀರ ಗಾಯಗಳಾಗಿದ್ದು ಬೆರೋಂದು ಅಂಬುಲೇನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.