
ಉದಯನಿಧಿ ಸ್ಟಾಲಿನ್ ರವರ ವೈಯುಕ್ತಿಕ ಹೇಳಿಕೆಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ : ರಮೇಶ್ ಕಾಂಚನ್
ಉಡುಪಿ: ತಮಿಳುನಾಡಿನ ಸಚಿವರಾದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಟೀಕಿಸಿ ನೀಡಿರುವ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಅಂತರವನ್ನು ಕಾಯ್ದುಕೊಂಡಿದ್ದು ನಮ್ಮದ್ದು ಸರ್ವಧರ್ಮ ಸಮಭಾವದ ಸಿದ್ದಾಂತ ಎಂದು ಈಗಾಗಲೇ ಪಕ್ಷದ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಸಚಿವ ಉದಯ ಸ್ಟಾಲಿನ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದೊಂದಿಗೆ ತಳುಕು ಹಾಕುತ್ತಿರುವ ಬಿಜೆಪಿಗರಿಗೆ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂದು ಬಿಂಬಿಸುವ ಹುನ್ನಾರವನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಈ ಮೂಲಕ ಪ್ರಬಲವಾಗಿ ಖಂಡಿಸುತ್ತದೆ.
ಜಾತಿ ಧರ್ಮದ ಮಧ್ಯೆ ವಿಷಬೀಜ ಬಿತ್ತುವ ಬಿಜೆಪಿ ಪಕ್ಷದಿಂದ ನಾವು ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್ ಪಕ್ಷವು ಜಾತಿ ಧರ್ಮಗಳ ಮಧ್ಯೆ ಬೇಧ ಭಾವ ಮರೆತು ಸರ್ವಜನಾಂಗದ ಅಭಿವೃದ್ದಿಯತ್ತ ಯಾವಾಗಲೂ ಸಾಗಿದೆ. ಕಾಂಗ್ರೆಸ್ ಪಕ್ಷವು ಈವರೆಗೂ ನೀಡಿದ ಯೋಜನೆಗಳು ಸರ್ವ ಧರ್ಮಗಳಿಗೆ ಸಹಕಾರಿಯಾಗಿದೆ ಹಾಗೆಯೇ ನಮ್ಮ ಪಕ್ಷವೂ ಸರ್ವಧರ್ಮದವರ ಏಳಿಗೆಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡು ಈ ಭಾರತ ದೇಶವನ್ನು ಸಧೃಢವಾಗಿ ಕಟ್ಟಿದ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವವರಿಗೆ ನೆನಪಿಸಲು ಇಚ್ಚಿಸುತ್ತಿದ್ದೇವೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.