ಉದ್ಯೋಗ ಸೃಷ್ಟಿ, ಶಿಕ್ಷಣ, ಪ್ರವಾಸೋದ್ಯಮ, ದೂರದೃಷ್ಟಿಯ ಪ್ರಣಾಳಿಕೆ : ಡಾ. ಭರತ್ ಶೆಟ್ಟಿ

Spread the love

ಉದ್ಯೋಗ ಸೃಷ್ಟಿ, ಶಿಕ್ಷಣ, ಪ್ರವಾಸೋದ್ಯಮ, ದೂರದೃಷ್ಟಿಯ ಪ್ರಣಾಳಿಕೆ : ಡಾ. ಭರತ್ ಶೆಟ್ಟಿ

ಮಂಗಳೂರು ನಗರ ಉತ್ತರದಲ್ಲಿ ಹಿಂದೂ ಭವನ ಸ್ಥಾಪನೆ ಮಾಡಿ ಅಲ್ಲಿ ಬಡವರ ಮದುವೆಗೆ ಕಡಿಮೆ ವೆಚ್ಚದಲ್ಲಿ ಸಭಾಂಗಣ ಒದಗಿಸುವುದು, ಮೀನುಗಾರರಿಗೆ ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಐಟಿ ಹಬ್ ನಿರ್ಮಾಣ, ಆಯುಷ್ ವನ ನಿರ್ಮಾಣ, ಅಲೆಮಾರಿ ಗೋವುಗಳಿಗೆ ಗೋಶಾಲೆ, ಕಡಲಕಿನಾರೆಯಲ್ಲಿ ಜಲಕ್ರೀಡೆ, ಆಹಾರ ಮಳಿಗೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಒತ್ತು ಸಹಿತ ದೂರದೃಷ್ಟಿ, ಅಭಿವೃದ್ಧಿ, ರಾಷ್ಟ್ರೀಯತೆಗೆ ಆದ್ಯತೆ ನೀಡಿ ಮುಂದಿನ ಅವಧಿಗೆ ಕ್ಷೇತ್ರದಲ್ಲಿ ಸರ್ವಾಂಗೀಣ ಬೆಳವಣಿಗೆಯನ್ನು ಒಳಗೊಂಡ 30 ಅಂಶಗಳ ಪ್ರಣಾಳಿಕೆಯನ್ನು ಅಭ್ಯರ್ಥಿ, ಶಾಸಕ ಡಾ. ಭರತ್ ಶೆಟ್ಟಿ ವೈ ಬಿಡುಗಡೆಗೊಳಿಸಿದರು.

ಅವರು ಕಾವೂರು ಸೊಸೈಟಿ ಸಭಾಂಗಣದಲ್ಲಿರುವ ಪಕ್ಷದ ಚುನಾವಣಾ ಕಾರ್ಯಾಲಯದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳ ಉನ್ನತೀಕರಣ, ಆಡಳಿತ/ ಐಐಟಿ, ಐಐಎಂ ವ್ಯಾಸಂಗ ಮಾಡುವವರಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು, ಗ್ರಾಮೀಣ ಭಾಗದಲ್ಲಿ ಕ್ಯಾಂಪ್ಕೊ ಮಾದರಿಯಲ್ಲಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಹಕಾರಿ ಸಂಸ್ಥೆಗಳ ಸ್ಥಾಪನೆ, ಸರಕಾರಿ ಕಚೇರಿಗಳಲ್ಲಿ ಸರಕಾರದ ಸೌಲಭ್ಯ ಪಡೆಯಲು ಸರಳೀಕರಣ ವ್ಯವಸ್ಥೆ, ಸ್ತ್ರೀಶಕ್ತಿ ಮಾದರಿಯಲ್ಲಿ ಯುವಕರಿಗಾಗಿ ಯುವಶಕ್ತಿ ಗುಂಪುಗಳ ರಚನೆ, ಸಮುದಾಯ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಕ್ರಮ, ಇನ್ನಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ, ಶಬರಿಮಲೆಗೆ ತೆರಳುವ ಯಾತ್ರಿಗಳಿಗೆ ತಂಗಲು ಮಂಗಳೂರು ಉತ್ತರದಲ್ಲಿ ವಿಶ್ರಾಂತಿ ಶಿಬಿರ ಹೀಗೆ ಹಲವು ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗುವುದು ಎಂದು ಡಾ. ಭರತ್ ಶೆಟ್ಟಿ ವೈ ಹೇಳಿದರು.

ಕಳೆದ ಅವಧಿಯಲ್ಲಿ ಕೋರೊನಾದ ಎರಡು ವರ್ಷಗಳನ್ನು ಮತ್ತು ಒಂದು ವರ್ಷ ವಿಪಕ್ಷದಲ್ಲಿದ್ದರೂ ಉಳಿದ 2 ವರ್ಷಗಳಲ್ಲಿ 2,250 ಕೋಟಿ ರೂಗಳನ್ನು ತಂದು ಕ್ಷೇತ್ರದ ಅಭಿವೃದ್ಧಿ ನಡೆಸಲಾಗಿದೆ. ಕ್ಷೇತ್ರದ ಹೆಚ್ಚಿನ ಪ್ರಮುಖ ರಸ್ತೆಗಳು, ಒಳರಸ್ತೆಗಳು ಕಾಂಕ್ರೀಟಿಕರಣಗೊಂಡು ಅಭಿವೃದ್ಧಿಯಾಗಿವೆ. ಪ್ರಮುಖ ಜಂಕ್ಷನ್ ಗಳು, ಕೆರೆ, ಉದ್ಯಾನವನ, ವೃತ್ತ, ರಾಜಕಾಲುವೆ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಹೆಚ್ಚಿನವು ಪೂರ್ಣಗೊಂಡಿವೆ. ಹಲವು ಪ್ರಗತಿಯಲ್ಲಿವೆ. ದೇವಾಲಯ, ದೈವಸ್ಥಾನಗಳಿಗೆ ಅನುದಾನ ನೀಡಿ ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಪ್ರವಾಸೋದ್ಯಮದಲ್ಲಿ ಬೀಚ್ ಅಭಿವೃದ್ಧಿ, ಬ್ಲೂಫ್ಲಾಗ್ ಹೆಗ್ಗಳಿಕೆ, ಕಾಲೇಜಿಗೆ ನ್ಯಾಕ್ ಸ್ಥಾನಮಾನ, ಹಾಸ್ಟೆಲ್ ಗಳ ಅಭಿವೃದ್ಧಿ, ಶಾಲೆಗಳಿಗೆ ಹೊಸ ಕೊಠಡಿ, ಪಿಠೋಪಕರಣಗಳ ಪೂರೈಕೆ ಸಹಿತ ವಿವಿಧ ಯೋಜನೆಗಳು ಆಗಿವೆ. ಮುಂದಿನ ಅವಧಿಯಲ್ಲಿ ಇನ್ನಷ್ಟು ವೇಗದಲ್ಲಿ ಕೆಲಸಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ ,ಶರತ್ಚಂದ್ರ ಶೆಟ್ಟಿ, ಸಂದೀಪ್ ಪಚ್ಚನಾಡಿ, ರಾಜೇಶ್ ಕೊಠಾರಿ,ಕೃಷ್ಣ ಶೆಟ್ಟಿ ಕಡಬ ಹಾಗೂ ಬಿಜೆಪಿ ಮುಖಂಡರ ಉಪಸ್ಥಿತರಿದ್ದರು


Spread the love