ಉಳ್ಳಾಲ: ಆಟೋ ಚಾಲಕ ಕಾಣೆ – ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲು
ಉಳ್ಳಾಲ: ಮಂಜನಾಡಿ ಗ್ರಾಮದ ಪೊಟ್ಟಳಿಕೆ ಸಾರ್ತಬೈಲ್ ಕೋಡಿ ನಿವಾಸಿ ಆಟೋ ಚಾಲಕನೊಬ್ಬ ಕಾಣೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆಬ್ರವರಿ 4, 2026ರಂದು ಶ್ರೀಮತಿ ಆಯಿಷಾ (43), ಗಂಡ ಅಬ್ದುಲ್ ಸಮದ್, ಸಾರ್ತಬೈಲ್ ಕೋಡಿ, ಪೊಟ್ಟಳಿಕೆ, ಮಂಜನಾಡಿ ಗ್ರಾಮ, ಉಳ್ಳಾಲ ತಾಲೂಕು ಇವರು ನೀಡಿದ ದೂರಿನಂತೆ, ಅವರ ಪತಿ ಅಬ್ದುಲ್ ಸಮದ್ (52) ಆಟೋ ಚಾಲಕರಾಗಿದ್ದು, ಫೆಬ್ರವರಿ 2ರಂದು ಮಧ್ಯಾಹ್ನ 12.30ರ ಸುಮಾರಿಗೆ ಮನೆದಿಂದ ಬಾಡಿಗೆಗೆ ಹೋಗಿದ್ದರು. ಸಂಜೆ ಮನೆಯಲ್ಲಿ ಬರಾಕತ್ ಹಬ್ಬ ಇರುವ ಕಾರಣ ಸಂಜೆ 6 ಗಂಟೆಯೊಳಗೆ ಮನೆಗೆ ಮರಳದ ಹಿನ್ನೆಲೆ, ದೂರದಾರರು ಸಂಜೆ 6.30ರ ಸುಮಾರಿಗೆ ಫೋನ್ ಮೂಲಕ ಸಂಪರ್ಕಿಸಿದಾಗ ಐದು ನಿಮಿಷಗಳಲ್ಲಿ ಮನೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಅವರು ಮನೆಗೆ ಮರಳಿಲ್ಲ. ಬಳಿಕ ಸಂಜೆ 7.15ರ ಸುಮಾರಿಗೆ ಮತ್ತೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ನಂತರ ಸಂಬಂಧಿಕರು ಹಾಗೂ ಇತರ ಆಟೋ ಚಾಲಕರಲ್ಲಿ ವಿಚಾರಿಸಿ ವಿವಿಧೆಡೆ ಹುಡುಕಾಟ ನಡೆಸಿದರೂ ಅಬ್ದುಲ್ ಸಮದ್ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು ಐದು ವರ್ಷಗಳ ಹಿಂದೆ ಕೂಡ ಅವರು ಕೆಲ ದಿನಗಳು ಮನೆ ಬಿಟ್ಟು ಹೋಗಿ ಮರಳಿ ಬಂದ ಘಟನೆ ನಡೆದಿದ್ದುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಬ್ದುಲ್ ಸಮದ್ ಅವರನ್ನು ಪತ್ತೆಹಚ್ಚಿಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2026 ಅಡಿಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ವ್ಯಕ್ತಿಯ ವಿವರ:
ಅಬ್ದುಲ್ ಸಮದ್ (52), ತಂದೆ ಅಹ್ಮದ್ ಬಾವ. ಎತ್ತರ 5.6 ಅಡಿ, ಕಪ್ಪು ಮೈಬಣ್ಣ, ಕ್ಲೀನ್ ಶೇವ್, ತೋರ ಶರೀರ, ಕೋಲು ಮುಖ. ಕಾಣೆಯಾಗುವ ವೇಳೆ ಲೈಟ್ ಗ್ರೀನ್ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಬ್ಯಾರಿ, ಮಲಯಾಳಂ, ತುಳು, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಮಾತನಾಡಬಲ್ಲರು.
ಕಾಣೆಯಾದ ಅಬ್ದುಲ್ ಸಮದ್ ಕುರಿತು ಮಾಹಿತಿ ದೊರೆತಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ನಿಯಂತ್ರಣ ಕೊಠಡಿ (ದೂ.ಸಂ. 0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (0824-2220536 / 9480802350) ಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
