
ಎಜಿ ಕೊಡ್ಗಿಯವರದ್ದು ವಿಶೇಷವಾದ ವ್ಯಕ್ತಿತ್ವ : ವಿನಯ್ ಕುಮಾರ್ ಸೊರಕೆ
ಕುಂದಾಪುರ: ಆಸ್ಕರ್, ವಿಎಸ್ ಆಚಾರ್ಯರಂತೆಯೇ ಎಜಿ ಕೊಡ್ಗಿಯವರದ್ದು ವಿಶೇಷವಾದ ವ್ಯಕ್ತಿತ್ವವಾಗಿದ್ದು ಎಜಿ ಕೊಡ್ಗಿಯವರು ಅನೇಕ ವಿಚಾರಧಾರೆಗಳನ್ನು ಬಿಟ್ಟು ನಮ್ಮನ್ನೆಲ್ಲ ಅಗಲಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಮಂಗಳವಾರ ಮಾಜಿ ಶಾಸಕ ಎ.ಜಿ ಕೊಡ್ಗಿಯವರ ಅಂತಿಮ ದರ್ಶನ ಪಡೆದು ಮಾತನಾಡಿ ಎಜಿ ಕೊಡ್ಗಿಯವರು ಶಾಶ್ವತವಾಗಿ ನೆನಪುಳಿಯುವಂತಹ ಕೆಲಸಗಳನ್ನು ಮಾಡಿ ನಮ್ಮನ್ನಗಲಿದ್ದಾರೆ. ಅವರು ನುಡಿದಂತೆ ನಡೆಯುವವರು, ಜನಸಾಮಾನ್ಯರ ಬಗ್ಗೆ ಅತೀವ ಕಾಳಜಿ ಅವರಲ್ಲಿತ್ತು ಜನಸಾಮಾನ್ಯರ ಸ್ವರವನ್ನು ಎಲ್ಲಿಗೆ ಮುಟ್ಟಿಸಬೇಕೊ ಅಲ್ಲಿಗೆ ಮುಟ್ಟಿಸುವಂತಹ ಶಕ್ತಿ ಅವರಲ್ಲಿತ್ತು. ಜೀವನದೂದ್ದಕ್ಕೂ ಅನೇಕ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು ಎಂದರು.
ಕೊಡ್ಗಿಯವರು ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದೇ ಪ್ರಾಮಾಣಿಕ ಸೇವೆ ಸಲ್ಲಿಸಿದವರಾಗಿದ್ದು, ಪ್ರಸ್ತುತ ರಾಜಕೀಯಕ್ಕೆ ಅಪವಾದ ಎನ್ನುವ ರೀತಿಯಲ್ಲಿ ಬದುಕಿದ ನಾಯಕ. ಎಜಿ ಕೊಡ್ಗಿಯವರಂತಹ ಮೇರು ವ್ಯಕ್ತಿತ್ವದ ನಾಯಕನನ್ನು ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ ಎಂದರು.