
ಕಟಪಾಡಿ ಕಟ್ಟಡ ಕಾರ್ಮಿಕನ ಕೊಲೆ ಪ್ರಕರಣದ ಆರೋಪಿಯ ಬಂಧನ
ಉಡುಪಿ: ಕಟಪಾಡಿಯಲ್ಲಿ ನಡೆದ ಕಟ್ಟಡ ಕಾರ್ಮಿಕ ಗಣೇಶ್ ಕೊಲೆ ಪ್ರಕರಣದ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಓಡಿಸ್ಸಾ ಮೂಲದ ಕಾರ್ಮಿಕರಾದ ಅಕನ್ ಎಂದು ಗುರುತಿಸಲಾಗಿದೆ.
ಜುಲೈ 17 ರಂದು ಕಾಪು ಠಾಣಾ ವ್ಯಾಪ್ತಿಯ ಕಟಪಾಡಿ ಹಳೇ ಸಂತೆ ಮಾರ್ಕೆಟ್ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಓಡಿಸ್ಸಾ ಮೂಲದ ಕಾರ್ಮಿಕರಾದ ಅಕನ್ ಮತ್ತು ಗಣೇಶ್ ಎಂಬವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆದು, ಅಕನ್ ಗಣೇಶ್ ಸೇತಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದ ಪರಿಣಾಮ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ದಾರಿ ಮಧ್ಯೆ ಮೃತಪಟ್ಟಿದ್ದನು.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ, ಹೆಚ್ಚುವರಿ ಎಸ್ಪಿ ಕಾರ್ಕಳ ಡಿವೈಎಸ್ಪಿ ಭೇಟಿ ನೀಡಿ ಆರೋಪಿಯ ಪತ್ತೆಗೆ ಕಾಪು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿ ಅಕನನ್ನು ಉಡುಪಿ ಎಕ್ಸ್ ಪ್ರೆಸ್ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಪ್ರಕರಣದ ಆರೋಪಿಗಳ ಪತ್ತೆಗೆ ಜಿಲ್ಲಾ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಮತ್ತು ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ವೃತ್ತ ನೀರಿಕ್ಷಕ ಕೆ ಸಿ ಪೂವಯ್ಯ ನೇತೃತ್ವದಲ್ಲಿ ಕಾಪು ಪಿಎಸ್ ಐ ಶ್ರೀಶೈಲ ಮುರಗೋಡ, ಸಿಬಂದಿಗಳಾದ ಸುಧಾಕರ ಮತ್ತು ನಾರಾಯಣ ಇತರ ಸಿಬಂದಿಗಳು ಪಾಲ್ಗೊಂಡಿರುತ್ತಾರೆ