
ಕದ್ರಿ ಪೊಲೀಸರಿಂದ ತೃತೀಯ ಲಿಂಗಿ ಸರಗಳ್ಳತನದ ಆರೋಪಿಯ ಬಂಧನ
ಮಂಗಳೂರು: ಸರಗಳ್ಳತನ ಆರೋಪದ ಮೇಲೆ ತೃತೀಯ ಲಿಂಗಿ ಆರೋಪಿಯೊಬ್ಬನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೈಸೂರು ಮೂಲದ ಪ್ರಸ್ತುತ ಬೆಂಗಳೂರು ವಿವೇಕನಗರ ನಿವಾಸಿ ಅಭಿಷೇಕ್ ಅಲಿಯಾಸ್ ಗೊಂಬೆ ಅಲಿಯಾಸ್ ಅನಾಮಿಕ (27) ಎಂದು ಗುರುತಿಸಲಾಗಿದೆ.
ಗಣೇಶ್ ಶೆಟ್ಟಿ ಎಂಬಾತ ತಮ್ಮ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕದ್ರಿ ಬಿ ಎಸ್ ಎನ್ ಎಲ್ ಕಚೇರಿಯ ಬಳಿ ಆರೋಪಿ ಬೈಕನ್ನು ಅಡ್ಡಹಾಕಿ ಪೆಪ್ಪರ್ ಸ್ಪ್ರೇ ಹಾಕಿ ಗಣೇಶ್ ಶೆಟ್ಟಿ ಕುತ್ತಿಗೆಯಲ್ಲಿದ್ದ 24 ಗ್ರಾಂ ಚಿನ್ನದ ಚೈನನ್ನು ಅಪಹರಿಸಿದ್ದನು. ಆರೋಪಿ ಬೆಂಗಳೂರಿನಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ನಿರ್ದೇನದಂತೆ, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರೀರಾಮ್ ಶಂಕರ್ ಮಾರ್ಗದರ್ಶನದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಎಸಿಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಕದ್ರಿ ಪೊಲೀಸ್ ಠಾಣೆಯ ಸಿಬಂದಿಗಳ ನೇತೃತ್ವದಲ್ಲಿ ಬಂಧನ ಕಾರ್ಯಾಚರಣೆ ನಡೆದಿದೆ.