ಕದ್ರಿ ಶ್ರೀ ಕಾಲಭೈರವ ದೇವಸ್ಥಾನ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಸಂಪನ್ನ

Spread the love

ಕದ್ರಿ ಶ್ರೀ ಕಾಲಭೈರವ ದೇವಸ್ಥಾನ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಸಂಪನ್ನ

ಮಂಗಳೂರು: ರಾಜರಾಜೇಶ್ವರ ತಪೋನಿಧಿ ಶ್ರೀ ೧೦೦೮ ಶ್ರೀ ರಾಜಯೋಗಿ ನಿರ್ಮಲನಾಥಜೀ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದವಿದ್ವಾನ್ ದೇರೆಬೈಲು ವಿಠಲ್‌ದಾಸ್ ತಂತ್ರಿಗಳ ನೇತೃತ್ವದಲ್ಲಿ ಕದಿರೆಯ ಪಟ್ಟದ ಸಿದ್ಧ ಪೀಠದೊಡೆಯ ಕದ್ರಿ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಾಥ ಪಂಥದ ಸಂಪ್ರದಾಯದಂತೆ ವೈಧಿಕ ವಿಧಿ ವಿಧಾನಗಳೊಂದಿಗೆ ಇಂದು (ಫೆ.೬) ವಿದ್ಯುಕ್ತವಾಗಿ ನೆರವೇರಿತು.

ಇದೇ ವೇಳೆ ಶ್ರೀಕಾಲ ಭೈರವ ದೇವರಿಗೆ ರೋಟ್ ಪೂಜೆ, ಪ್ರಸನ್ನ ಪೂಜೆ ನಡೆಯಿತು. ಮಧ್ಯ ಪ್ರದೇಶ, ರಾಜಸ್ಥಾನಗಳಿಂದ ತರಿಸಲಾದ ಅಮೂಲ್ಯ ಶಿಲೆಗಳಲ್ಲಿ ರೂಪಿಸಲಾದ ವಿವಿಧ ವರ್ಣದ ಶಿವಲಿಂಗಗಳ ಪ್ರತಿಷ್ಠಾಪನೆಯೂ ಇದೇ ಸಂದರ್ಭ ನಡೆಯಿತು.

ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಗುಜರಾತ್, ಕರ್ನಾಟಕ ಸೇರಿದಂತೆ ವಿವಿದೆಡೆಗಳಿಂದ ಆಗಮಿಸಿದ ಸಾಧು ಸಂತರು ಕಾಲಭೈರವ ಭಕ್ತರು ಸಹಿತ ಸ್ಥಳೀಯರು, ಜೋಗಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಜಸ್ಥಾನದ ಭಕ್ತರು ಢೋಲ್ ತಾಲಿ ನೃತ್ಯ ಮಾಡಿ ಸಂಭ್ರಮಿಸಿದರು. ಕರ್ನಾಟಕದ ಮಾರ್ವಾಡಿಗಳು ಶ್ವೇತಾಂಬರ ಜೈನರಾದರೂ ಅವರು ಭೈರವನ ಆರಾಧಕರು. ರಾಜಸ್ಥಾನದಲ್ಲಿರುವ ಭೈರೂನಾಥ ಇವರ ಮನೆದೈವ. ಕಾಲಭೈರವ ಬ್ರಹ್ಮಕಲಶೋತ್ಸವದಲ್ಲಿ ಅವರು ಸಂಭ್ರಮದಿಂದ ಪಾಲ್ಗೊಂಡು ನೃತ್ಯ ಮಾಡುತ್ತಿದ್ದುದಕ್ಕೆ ಇದು ಒಂದು ಕಾರಣ.

ಕದ್ರಿ ಮಠವು ಹಿಂದೆ ಮೋಹನನಾಥರ ಕಾಲದಲ್ಲಿ ಒಮ್ಮೆ ಜೀರ್ಣೋದ್ಧಾರಗೊಂಡಿತ್ತು. ಈಗ ಕಾಲಭೈರವ ದೇವಸ್ಥಾನ ಜೀರ್ಣೋದ್ಧಾರಗೊಂಡು ಹೊಸ ರೂಪ ಪಡೆದಿದೆ. ನಾಯಿಯೊಂದಿಗೆ ಭೈರವನಿರುವ ವಿಗ್ರಹವನ್ನು ಪ್ರತಿಷ್ಠೆಗಾಗಿ ಮಧ್ಯ ಪ್ರದೇಶದಲ್ಲಿ ರೂಪಿಸಿ ತರಿಸಲಾಗಿದೆ.

ಕದ್ರಿ ಮಠದ ಅಧಿಪತಿಯಾಗಿದ್ದ ಭವಾನಿ ನಾಥರು ಪ್ರಸಿದ್ದಿ ರಸ ವೈದ್ಯರಾಗಿದ್ದರು ಮತ್ತು ಅವರು ತಾಮ್ರದ ಕಾಸನ್ನು ಚಿನ್ನವಾಗಿಸುತ್ತಿದ್ದರೆಂಬ ಪ್ರತೀತಿ ಇದೆ. ಪ್ರಸ್ತುತ ಶ್ರೀ ರಾಜಯೋಗಿ ನಿರ್ಮಲ್ ನಾಥ ಜೀ ಮಹಾರಾಜ್ ಅವರು ಕದ್ರಿ ಮಠದ ಪೀಠಾಧಿಪತಿಯಾಗಿದ್ದಾರೆ.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಜೋಗಿ, ಪ್ರಧಾನ ಕಾರ್ಯದರ್ಶಿ ಸತೀಶ್ ಜೋಗಿ ಮಾಲೆಮಾರ್, ಪ್ರಧಾನ ಸಲಹೆಗಾರರಾದ ಹರಿನಾಥ್ ಜೋಗಿ, ಕಿರಣ್ ಕುಮಾರ್ ಜೋಗಿ, ಪ್ರಧಾನ ಆರ್ಚಕ ಉಮೇಶ್‌ನಾಥ್, ಡಾ. ಪಿ. ಕೇಶವನಾಥ್, ಗಂಗಾಧರ್ ಬಿ., ಶಿವರಾಮ ಜೋಗಿ ಮೊದಲಾದವರಿದ್ದರು.


Spread the love