ಕರ್ನಾಟಕ ಸಂಘ ಶಾರ್ಜಾ – 23ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜೋತ್ಸವದ ಅಂಗವಾಗಿ ಮಹಾ ಆಡಿಷನ್
ಶಾರ್ಜಾ, ದುಬೈ: ಕರ್ನಾಟಕ ಸಂಘ ಶಾರ್ಜಾ ತನ್ನ 23ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಈ ವರ್ಷವೂ ಯುಎಇಯ ಕನ್ನಡದ ಮಕ್ಕಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವಿಶಿಷ್ಟ ವೇದಿಕೆ ಕಲ್ಪಿಸಿದೆ. “ಚಿಣ್ಣರ ಚಿಲಿಪಿಲಿ (ಛದ್ಮವೇಷ ಸ್ಪರ್ಧೆ)” ಹಾಗೂ “ಬಾನದಾರಿಯಲಿ (ಪ್ರತಿಭಾ ಕಾರಂಜಿ)” ಎಂಬ ಶೀರ್ಷಿಕೆಗಳ ಅಡಿಯಲ್ಲಿ ನಡೆಯುತ್ತಿರುವ ಈ ಉತ್ಸವದ ಭಾಗವಾಗಿ, ಪ್ರತಿಭಾ ಪರೀಕ್ಷೆ (ಮಹಾ ಆಡಿಷನ್) ಕಾರ್ಯಕ್ರಮವು ಭಾನುವಾರ ದುಬಾಯಿನ Smile Creations Event ಹಾಲ್ ನಲ್ಲಿ ಭವ್ಯವಾಗಿ ನೆರವೇರಿತು.
ಯುಎಇಯ ವಿವಿಧ ಭಾಗಗಳಿಂದ 50 ಕ್ಕೂ ಹೆಚ್ಚುಸ್ಪರ್ಧಿಗಳು ಭಾಗವಹಿಸಿ ನೃತ್ಯ, ನಾಟಕ, ಗಾಯನ ಸೇರಿದಂತೆ ತಮ್ಮ ವೈವಿಧ್ಯಮಯ ಕಲಾತ್ಮಕ ಪ್ರತಿಭೆಗಳನ್ನು ಮೆರೆದರು.
ತೀರ್ಪುಗಾರರಾಗಿ ಸುರೇಶ್ ಎನ್. ಶೆಟ್ಟಿ (ದುಬೈ), ಸವಿತಾ ನಾಯಕ್ (ಅಲ್ಐನ್) ಹಾಗೂ ಸುವರ್ಣ ಸತೀಶ್ ಅವರು ಸೇವೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ, ಕೋಶಾಧಿಕಾರಿ ಸುಗಂಧ ರಾಜ್ ಬೇಕಲ್, ಸಾಂಸ್ಕೃತಿಕ ಕಾರ್ಯದರ್ಶಿ ಅಮರ್ ಉಮೇಶ್, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಜ್ಮಲ್ ಸೈಯದ್, ಪ್ರೇಮ್ ಶ್ರೀ, ರಿತೇಶ್, ಜೀವನ್ ಕುಕ್ಯಾನ್ ಉಪಸ್ಥಿತರಿದ್ದರು.
ಮಹಿಳಾ ಸದಸ್ಯರಾದ ಉಷಾ ವಿಶ್ವನಾಥ ಶೆಟ್ಟಿ, ರಜನಿ ಜೀವನ್, ಅಸ್ಮತ್ ಆರಾ ಅಜ್ಮಲ್, ಮತ್ತು ಜಯಶ್ರೀ ಪ್ರೇಮ್ ಅವರು ಸಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಆರತಿ ಅಡಿಗ ಅವರು ನಿರ್ವಹಿಸಿದರು. ಅಧ್ಯಕ್ಷ ಸತೀಶ್ ಪೂಜಾರಿ ಅತಿಥಿಗಳು ಹಾಗೂ ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಕೋರಿ ಮಾತನಾಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ವಂದನೆಯನ್ನು ಸಲ್ಲಿಸಿದರು.