
ಕಾಂಗ್ರೆಸ್ ಸರ್ಕಾರ ಮೀನುಗಾರರ ಹಿತ ಕಾಯಲು ಬದ್ಧ – ರಾಹುಲ್ ಗಾಂಧಿ
ಉಡುಪಿ: ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೀನುಗಾರರಿಗೆ 10 ಲಕ್ಷ ರೂ ಗಳ ವಿಮಾ ಸೌಲಭ್ಯ, ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತವಾಗಿ ಒಂದು ಲಕ್ಷ ರೂಪಾಯಿ ಸಾಲ ಹಾಗೂ ಪ್ರತಿದಿನ 500 ಲೀಟರ್ ಸಹಿತಿ ಡಿಸೇಲ್ ಸಬ್ಸಿಡಿಯೊಂದಿಗೆ ನೀಡಲಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಅವರು ಗುರುವಾರ ಉಚ್ಚಿಲ ಮಹಾಲಕ್ಷ್ಮೀ ದೇವಳದ ಸಭಾಂಗಣದಲ್ಲಿ ಮೀನುಗಾರರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಬೆಲೆ ಏರಿಕೆಯಿಂದ ಬೆಲೆ ಏರಿಕೆಯಿಂದ ಮೀನುಗಾರರ ಸಂಕಷ್ಟಕ್ಕೀಡಾಗಿದ್ದಾರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಮೀನುಗಾರರ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ಹಾಕಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ ಬಿಜೆಪಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, 40% ಕಮಿಷನ್ ತೆಗೆದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಿದೆ. ಜನರ ತೆರಿಗೆ ಹಣ ಕದಿಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು. ಇದೇ ವೇಳೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪಕ್ಕೆ ಪ್ರಧಾನಿ ಅವರೂ ಉತ್ತರ ಹೇಳಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಈಗಾಗಲೇ 4 ಭರವಸೆಗಳನ್ನು ನೀಡಿದೆ. ಈ ಭರವಸೆಗಳನ್ನು ಕೆಲವೇ ದಿನಗಳಲ್ಲಿ ಈಡೇರಿಸಲಿದ್ದು ಆಶ್ವಾಸನೆ ಈಡೇರಿಸಲು ವರ್ಷಗಟ್ಟಲೆ ತೆಗೆದುಕೊಳ್ಳದೆ, ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಈಡೇರಿಸಲಾಗುವುದು ಎಂದರು. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಯೋಜನೆ ಜಾರಿ ಮಾಡಲಾಗುವುದು. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ ನೀಡಬೇಕು, ಡಿಪ್ಲಮೋ ಪದವೀಧರರಿಗೆ ಪ್ರತಿ ತಿಂಗಳು 1,500 ರೂ. ನೀಡಲಾಗುವುದು ಎಂದರು.
ಬಡವರು ದುರ್ಬಲರ ಸಹಾಯ ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದ್ದು ಈ ಹಿಂದಿನ ಬಿಜೆಪಿ ಸರಕಾರವನ್ನು ಜನ ಆಯ್ಕೆ ಮಾಡಿಲ್ಲ ಬದಲಾಗಿಈ ಸರಕಾರ ಹಣದಿಂದ, ಕಳ್ಳ ಮಾರ್ಗದಿಂದ ಸರಕಾರ ರಚಿಸಲಾಯ್ತು. ಶಾಸಕರ ಖರೀದಿ ಮಾಡಿ ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲ ಮಾಡಲಾಯಿತು. ಬಿಜೆಪಿ ನಾಯಕರೇ 2.5 ಕೋಟಿ ಗೆ ಸಿಎಂ ಸೀಟು ಇದೆ ಎಂದು ಹೇಳಿದ್ದಾರೆ ಎಂದರು.
ಈ ಚುನಾವಣೆ ಎರಡು ವಿಚಾರಧಾರೆಗಳ ನಡುವಿನ ಹೋರಾಟವಾಗಿದ್ದು ಬಡವರ ಉದ್ಧಾರ ಮಾಡಬೇಕು ಅನ್ನುವುದು ಕಾಂಗ್ರೆಸ್ ಸರಕಾರದ ಆಶಯ. ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರ ತಾವು ಆರಿಸಿದ ಸರ್ಕಾರ ಅಲ್ಲ ಬದಲಾಗಿದ ಬಿಜೆಪಿ ಹಣದಿಂದ, ಕಳ್ಳತನದಿಂದ ಅಧಿಕಾರ ಮಾಡಿದ್ದಾರೆ ಈ ಸತ್ಯ ಕರ್ನಾಟಕದ ಜನರಿಗೆ ಗೊತ್ತು. ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆಯಾಗಿದೆ 2500 ಕೋಟಿ ಕೊಟ್ಟುವರು ಸಿಎಂ ಆಗಬಹುದು ಎಂದು ಬಿಜೆಪಿ ಶಾಸಕರೇ ಹೇಳಿದ್ದಾರೆ ಇತಿಹಾಸದಲ್ಲಿ ಮೊದಲ ಬಾರಿ ದಿಂಗಲೇಶ್ವರ ಸ್ವಾಮಿ ಕೂಡಾ ಭ್ರಷ್ಟಾಚಾರ ಇದೆ ಎಂದರು ಧಾರ್ಮಿಕ ವ್ಯಕ್ತಿ ಎಂಬ ಕಾರಣಕ್ಕೆ ಅವರಿಂದ, 30 ಪರ್ಸೆಂಟ್ ಪಡೆಯಲಾಗಿದೆ ಎಂದಿದ್ದಾರೆ ಪ್ರತಿ ನೇಮಕಾತಿ ಯಲ್ಲಿ ರಾಜ್ಯ ಸರಕಾರ 40 ಪರ್ಸೆಂಟ್ ಕಮಿಷನ್ ಪಡೆದಿದೆ ಇದು ನಿಮ್ಮ ಕೆಸೆಯಿಂದ ತೆಗೆದ ಹಣ, ಆದರೆ ಅದು ಎಲ್ಲಿಗೆ ಹೋಗುತ್ತಿದೆ? ಎಂದು ಪ್ರಶ್ನಿಸಿದರು.
ನಾವು ಯಾವುದೇ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಈಗಾಗಲೇ ಛತ್ತೀಸ್ಗಡ ಪಂಜಾಬ್ ಹಿಮಾಚಲ ಪ್ರದೇಶದಲ್ಲಿ ನಮ್ಮ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ. ನಾವು ಹೇಳಿದ್ದನ್ನು ಮಾಡುತ್ತೇವೆ ಸುಳ್ಳು ಭರವಸೆ ಕೊಡಲ್ಲ ಎಂದ ರಾಹುಲ್ ಪ್ರಧಾನಿ ಮೋದಿ ಹದಿನೈದು ಲಕ್ಷ ರೂಪಾಯಿ ಹಾಕುತ್ತೇನೆ ಅಂದಿದ್ದರು ಅವರ ತರ ನಾವು ಸುಳ್ಳು ಭರವಸೆ ಕೊಡುವುದಿಲ್ಲ ಎಂದರು.
ಬಳಿಕ ಸಂವಾದದಲ್ಲಿ ಭಾಗವಹಿಸಿದ ರಾಹುಲ್ ಅವರೊಂದಿಗೆ ಮೀನುಗಾರರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು
ಡ್ರಜ್ಜಿಂಗ್ ವ್ಯವಸ್ಥೆಗೆ ವ್ಯವಸ್ಥಿತ ಯೋಜನೆ
ಸಮುದ್ರದಲ್ಲಿ ಡ್ರಜ್ಜಿಂಗ್ ಸಮಸ್ಯೆ ಬಗ್ಗೆ ಗಮನ ಸೆಳೆದ ಮೀನುಗಾರರು ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯ ಮಾಡುವಂತೆ ಮನವಿ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಡ್ರಜ್ಜಿಂಗ್ ವ್ಯವಸ್ಥೆಗೆ ವ್ಯವಸ್ಥಿತ ಯೋಜನೆ ರೂಪಿಸಲಾಗುವುದು ನಮ್ಮ ಮುಖ್ಯಮಂತ್ರಿಗಳ ಮೂಲಕ ಬೇಡಿಕೆ ಈಡೇರಿಸಲಾಗುವುದು ಎಂದರು.
ಸೀ ಅಂಬುಲೆನ್ಸ್ ಅನುಷ್ಠಾನದ ಭರವಸೆ
ಮೀನುಗಾರರ ಜೀವ ಉಳಿಸಲು ಸಿ ಅಂಬುಲೇನ್ಸ್ ಅಗತ್ಯತೆ ಇದ್ದು ಇದರ ಅನುಷ್ಠಾನ ಮಾಡಲಾಗುವುದು ಎಂದರು. ಮೀನುಗಾರರು ಸಮುದ್ರದ ಕೃಷಿಕರಾಗಿದ್ದು ಮೀನುಗಾರರರಿಗೆ ರೈತರಿಗೆ ಸಿಗುವ ಎಲ್ಲಾ ಸಹಕಾರ ಸಿಗಬೇಕು ದೊಡ್ಡ ಸಣ್ಣ ಮೀನುಗಾರರ ಸ್ಪರ್ಧೆ ಬಗ್ಗೆ ಅರಿವಿದ್ದು ಶ್ರೀಮಂತ ಮೀನುಗಾರರ ಜೊತೆ ಬಡ ಮೀನುಗಾರರ ಸ್ಪರ್ಧೆ ನಿಲ್ಲಿಸಬೇಕು. ಮೀನುಗಾರರ ಜೊತೆ ಮತ್ತಷ್ಟು ಆಳವಾದ ಸಂವಾದ ಮಾಡಬೇಕಾಗಿದೆ ನಾನು ಕೂಡ ಭಾರತ್ ಜೋಡೊ ಯಾತ್ರೆಯ ವೇಳೆ ಕೇರಳದಲ್ಲಿ ಮುಂಜಾನೆ 4 ಕ್ಕೆ ಮೀನುಗಾರಿಕೆಗೆ ಹೋಗಿದ್ದೆ ಮೀನುಗಾರರ ನೋವು ನಲಿವು ನನಗೆ ಗೊತ್ತಿದೆ ಎಂದರು.
ಮೀನುಗಾರರ ಹಿತ ಕಾಯುವುದರಲ್ಲಿ ರಾಜಿ ಇಲ್ಲ
ನಾನು ನಿಮ್ಮ ಕುಟುಂಬದ ಸದಸ್ಯ, ನಮ್ಮ ನಡುವೆ ನೇರ ಸಂವಾದ ಯಾವತ್ತೂ ಇರುತ್ತದೆ ಮೀನುಗಾರರ ಹಿತ ಕಾಯುವುದರಲ್ಲಿ ನಾನು ರಾಜಿ ಮಾಡಿಕೊಳ್ಳಲ್ಲ ಎಂದ ರಾಹುಲ್ ಜಾತಿ ಗಣತಿಯ ಬಗ್ಗೆ ನಾನು ಅನೇಕ ಬಾರಿ ಪ್ರಸ್ತಾಪ ಮಾಡಿದ್ದೇನೆ ಯುಪಿಎ ಅಧಿಕಾರದಲ್ಲಿದ್ದಾಗ ಜಾತಿ ಗಣತಿಯ ಬಗ್ಗೆ ಒತ್ತಾಯ ಮಾಡಿದ್ದೆ ಜಾತಿಗಣತಿ ಕೇಂದ್ರ ಸರ್ಕಾರದ ಕೈಯಲ್ಲಿದೆ ಆದರೆ ಕೇಂದ್ರ ಸರ್ಕಾರ ಜಾತಿಗಣತಿ ವಿವರ ಬಹಿರಂಗ ಪಡಿಸಿಲ್ಲ. ವೈದ್ಯರಲ್ಲಿ ಹೋದರೆ ಮೊದಲು ಎಂ ಆರ್ ಐ ಮಾಡುತ್ತಾರೆ ಸಮಸ್ಯೆ ಏನು ಅನ್ನೋದು ಅದರಿಂದ ಅರಿವಾಗುತ್ತೆ ಜನರ ಸಮಸ್ಯೆ ಅರಿತುಕೊಳ್ಳಲು ನಾವು ಜನರು ಯಾವ ಜಾತಿಗೆ ಸೇರಿದ್ದಾರೆ ಅನ್ನೋದು ತಿಳಿಬೇಕು ಜಾತಿಯ ಬಗ್ಗೆ ಸ್ಪಷ್ಟತೆ ಬಂದಮೇಲೆ ಕಾರ್ಯಕ್ರಮ ರೂಪಿಸಬಹುದು. ಕೇಂದ್ರದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿಯ ಮಿತಿಯನ್ನು ತೆಗೆಯುತ್ತೇವೆ ಜಾತಿ ಗಣತಿಯ ವಿವರದಿಂದ ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎಂದರು.
ಬೃಹತ್ ಅಂಜಲ್ ಮೀನು ಉಡುಗೊರೆ
ಸಂವಾದ ಮುಗಿಸಿ ವಾಪಾಸು ವೇದಿಕೆಗೆ ಬರುತ್ತಿದ್ದಂತೆ ಮೀನುಗಾರ ಮಹಿಳೆಯೊಬ್ಬರು ರಾಹುಲ್ ಗಾಂಧಿಯವರಿಗೆ ಬೃಹತ್ ಗಾತ್ರದ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದರು. ಮೀನನ್ನು ಪ್ರೀತಿಯಿಂದ ಸ್ವೀಕರಿಸಿದ ರಾಹುಲ್ ಗಾಂಧಿ ಆಕೆಯನ್ನು ಆತ್ಮೀಯವಾಗಿ ಹಸ್ತಲಾಘವ ಮಾಡಿದರು.
ಉಚ್ಛಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ
ಮೊಗವೀರ ಸಮುದಾಯದ ಉಚ್ಛಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಭೇಟಿ ನೀಡಿದರು
ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಡುಪಿ ಕ್ಷೇತ್ರದ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಎಂ., ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಪ್ರತಾಪ್ ಚಂದ್ರ ಶೆಟ್ಟಿ, ಟಿ. ಎನ್. ಪ್ರತಾಪನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಮುಖರಾದ ಎಂ.ಎ. ಗಫೂರ್, ದೇವಿಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ನವೀನ್ ಚಂದ್ರ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಭಾವನಾ, ಗೀತಾ ವಾಗ್ಲೆ, ವೆರೋನಿಕಾ ಕರ್ನೇಲಿಯೋ, ದೀಪಕ್ ಕೋಟ್ಯಾನ್, ಪ್ರಶಾಂತ ಜತ್ತನ್ನ, ಮಂಜುನಾಥ ಸೊಣೇಗಾರ್, ವಿಶ್ವಾಸ್ ಅಮೀನ್, ಸರಳಾ ಕಾಂಚನ್, ಶಿವಾಜಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.