
ಕಾಂಗ್ರೆಸ್ ಸೋಲಿನ ಹತಾಶೆಯಿಂದ ಬೋಗಸ್ ಕಾರ್ಡಿನ ಗ್ಯಾರಂಟಿ ಸರಣಿ ಮುಂದುವರಿಸಿದೆ: ಮುಖ್ಯಮಂತ್ರಿ ಬೊಮ್ಮಾಯಿ
ಹುಬ್ಬಳ್ಳಿ: ಕಾಂಗ್ರೆಸ್ ಸೋಲಿನ ಹತಾಶೆಯಿಂದ ಬೋಗಸ್ ಕಾರ್ಡಿನ ಗ್ಯಾರಂಟಿ ಸರಣಿ ಮುಂದುವರಿಸಿದೆ. ಇದು ನಾಲ್ಕನೇಯದ್ದು, ಮೂರು ಬೋಗಸ್ ಘೋಷಣೆ ಮಾಡಿದ್ದರು. ಇದೊಂದು ಕೂಡ ಬೋಗಸ್ ಗ್ಯಾರಂಟಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ರಾಜಸ್ಥಾನದಲ್ಲಿ ಪದವೀಧರರಿಗೆ ಪ್ರತಿ ತಿಂಗಳು ಮಾಶಾಸನ ಕೊಡುತ್ತೇವೆ ಎಂದಿದ್ದರು. ಇದುವರೆಗೂ ಕೊಟ್ಟಿಲ್ಲ. ಛತ್ತೀಸಗಡನಲ್ಲಿ 1500 ರೂಪಾಯಿ ಕೊಡುತ್ತೇವೆಂದರು, ಅದನ್ನು ಕೊಡಲಿಲ್ಲ. ಹೀಗೆ ಅವರು ನಾಲ್ಕು ರಾಜ್ಯಗಳಲ್ಲಿ ಹೇಳಿದ ಹಾಗೇ ಎಲ್ಲಿಯೂ ನಡೆದುಕೊಂಡಿಲ್ಲ. ಅದರ ಪಟ್ಟಿಯನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದರು.
ಕಾಂಗ್ರೆಸ್ ನವರು ಬೋಗಸ್, ಸುಳ್ಳು ಹೇಳುವುದಕ್ಕೆ ಕಾರಣ ಅವರು ಹತಾಶರಾಗಿದ್ದಾರೆ. ಅವರು ಗೆಲ್ಲುವುದಕ್ಕೆ ಸಾಧ್ಯವಾಗದೆ ಇರುವುದರಿಂದ ಬೋಗಸ್ ಘೋಷಣೆ ಮಾಡುತ್ತಿದ್ದಾರೆ. ಸುಳ್ಳು ಹೇಳಿ ಮೋಸ ಮಾಡಲು ತಯಾರಾಗಿದ್ದಾರೆ. ಇದನ್ನು ಜನರು ನಂಬಲ್ಲ ಎಂದರು.
ಹಿಂದೆ ಇವರೇ 2013ರಲ್ಲಿ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದರು. ಇವರು ಬಂದ ಮೇಲೆ 5 ಕೆಜಿ ಅಕ್ಕಿ ಕೊಡುವುದನ್ನು ನಿಲ್ಲಿಸಿದ್ದಾರೆ. ಚುನಾವಣೆ ಬಂದಾಗ ಏಳು ಕೆಜಿ ಅಕ್ಕಿಯನ್ನು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಚುನಾವಣೆ ಬಂದಾಗ ಬೋಗಸ್ ಪಾಲಿಸಿ ಮಾಡಿ, ಸುಳ್ಳು ಹೇಳುವಂತಹದ್ದು ಕಾಂಗ್ರೆಸ್ ನ ಗುಣಧರ್ಮ ಎಂದರು.
ರಾಹುಲ್ ಗಾಂಧಿ ಮಹಾನ್ ನಾಯಕರು ಹೊರದೇಶಕ್ಕೆ ಹೋದವರು. ಈ ದೇಶದ ಬಗ್ಗೆ ಗೌರವ ಇರುವವರು, ಹೋರ ದೇಶಕ್ಕೆ ಹೋದಾಗ ಕೀಳುಮಟ್ಟದಲ್ಲಿ ಮಾತನಾಡುತ್ತಾರೆ. ಅವರಿಗೆ ಕರ್ನಾಟಕದ ಬಗ್ಗೆ ವಿಶ್ವಾಸ ಪ್ರೀತಿ ಬದ್ಧತೆ ಇಲ್ಲ. ಹೀಗಾಗಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ, ಕರ್ನಾಟಕ ಜನತೆ ಮರಳು ಆಗಲ್ಲ ಎಂದರು.