
ಕಾಪು: ಪತಿಗೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ- ದೂರು
ಉಡುಪಿ : ಕಟಪಾಡಿ ಸಮೀಪದ ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ತನ್ನ ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿ ಗಾಯಗೊಳಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಾ ಮಡ್ಮಣ್ ನಿವಾಸಿ ಮುಹಮ್ಮದ್ ಆಸಿಫ್ ಗಾಯಗೊಂಡವರು. ಇವರ ಪತ್ನಿ ಮಣಿಪುರ ಗ್ರಾಮದ ಗುಜ್ಜಿ ನಿವಾಸಿ ಹುಸೈನ್ ಎಂಬವರ ಪುತ್ರಿ ಅಫ್ರೀನ್ ಕೃತ್ಯ ಎಸಗಿದ ಆರೋಪಿಯಾಗಿದ್ದಾರೆ.
ಮೊಹಮ್ಮದ್ ಆಸೀಫ್ (22) ಕಾರ್ಕಳ ತಾಲೂಕಿನವರಾಗಿದ್ದು 11 ತಿಂಗಳ ಹಿಂದೆ ಉಡುಪಿ ತಾಲೂಕು ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿನ ನಿವಾಸಿ ಹುಸೈನ್ ರವರ ಮಗಳಾದ ಅಫ್ರೀನ್ ರವರನ್ನು ಮದುವೆಯಾಗಿದ್ದರು.ಮದುವೆಯಾದ ಬಳಿಕ ಅಫ್ರೀನ್ ಳು ಒಂದೂವರೆ ತಿಂಗಳು ಮೊಹಮ್ಮದ್ ಆಸೀಫ್ ರವರ ಮನೆಯಲ್ಲಿದ್ದು, ಆ ಬಳಿಕ ಗಂಡನ ಮನೆಯಲ್ಲಿ ಇರಲು ಇಷ್ಟವಿಲ್ಲವೆಂದು ಮಣಿಪುರದ ತನ್ನ ತವರು ಮನೆಗೆ ಬಂದಿರುತ್ತಾಳೆ. ಮೊಹಮ್ಮದ್ ಆಸೀಫ್ ರವರಿಗೂ ಕೂಡಾ ತಾನು ಬೇಕಾದಲ್ಲಿ ತನ್ನ ಮನೆಯಲ್ಲಿಯೇ ಇರುವಂತೆ ತಿಳಿಸಿದ ಮೇರೆಗೆ ಮೊಹಮ್ಮದ್ ಆಸೀಫ್ ರವರು ಸುಮಾರು 9 ತಿಂಗಳಿನಿಂದ ಹೆಂಡತಿಯ ಮನೆಯಲ್ಲಿಯೇ ವಾಸವಿದ್ದಾರೆ. ಅಫ್ರೀನ್ ಳಿಗೆ ಮೊಹಮ್ಮದ್ ಆಸೀಫ್ ರವರು ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನವಿದ್ದು, ಈ ಬಗ್ಗೆ ಯಾವಾಗಲೂ ಜಗಳವಾಡುತ್ತಿದ್ದಳು.
ಸಪ್ಟೆಂಬರ್ 17 ಸಂಜೆ 6:45 ಗಂಟೆಗೆ ಮೊಹಮ್ಮದ್ ಆಸೀಫ್ ರವರು ಬಾತ್ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ಸಮಯ ಅಫ್ರೀನ್ಳು ಹೊರಗಿನಿಂದ ಬಾಗಿಲು ಬಡಿದಿದ್ದು, ಮೊಹಮ್ಮದ್ ಆಸೀಫ್ ರವರು ಬಾಗಿಲನ್ನು ತೆರೆದಾಗ ಅಫ್ರೀನ್ ಳು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಸ್ಟೀಲಿನ ಪಾತ್ರೆಯಲ್ಲಿದ್ದ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಇವರ ಮೈ ಮೇಲೆ ಎರಚಿರುತ್ತಾಳೆ. ಮೊಹಮ್ಮದ್ ಆಸೀಫ್ ರವರು ಕೂಗಿಕೊಂಡು ಮನೆಯಿಂದ ಹೊರಗಡೆ ಓಡಿದ್ದು, ಆ ಸಮಯ ಹುಸೈನ್ ರವರು ಮೊಹಮ್ಮದ್ ಆಸೀಫ್ ರವರನ್ನು ಸಮಧಾನಪಡಿಸಿ ಮನೆಯೊಳಗೆ ಕರೆದುಕೊಂಡು ಹೋಗಿರುತ್ತಾರೆ. ಅಫ್ರೀನ್ ಳು ಮೈಮೇಲೆ ಬಿಸಿ ನೀರನ್ನು ಹಾಕಿದ ಪರಿಣಾಮ ಮೊಹಮ್ಮದ್ ಆಸೀಫ್ ರವರ ಎಡ ಬದಿಯ ಮುಖ, ದೇಹ, ಎಡಗೈ, ಎಡ ಬದಿಯ ಎದೆ, ಬೆನ್ನು ಬಲಕೈ ಗೆ ಗುಳ್ಳೆ ಎದ್ದಿದ್ದು, ಈ ಬಗ್ಗೆ ಆಸ್ಪತ್ರೆಗೆ ಹೋಗುತ್ತೇನೆಂದು ತಿಳಿಸಿದಾದ ಅಫ್ರೀನ್, ಅತ್ತೆ ಮೈಮುನಾ, ಮಾವ ಹುಸೈನ್ ಹಾಗೂ ನೆರೆಮನೆಯ ಲತೀಫ್ ರವರು ಸೇರಿ ಮೊಹಮ್ಮದ್ ಆಸೀಫ್ ರವರನ್ನು ಹೊರಗಡೆ ಹೋಗಲು ಬಿಡದೆ ಮನೆಯ ರೂಮಿನಲ್ಲಿಯೇ ಕೂಡಿ ಹಾಕಿರುತ್ತಾರೆ. ಅಲ್ಲದೇ ಅಫ್ರೀನ್ಳು ಮೊಹಮ್ಮದ್ ಆಸೀಫ್ ರವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾಳೆ. ಸಪ್ಟೆಂಬರ್ 18 ರಂದು ಮಧ್ಯಾಹ್ನ 3:00 ಗಂಟೆಗೆ ಉಳ್ಳಾಲದ ನಿವಾಸಿ ಜಮಾತ್ ಎಂಬುವವನು ಮೊಹಮ್ಮದ್ ಆಸೀಫ್ ರವರಿಗೆ ಕರೆ ಮಾಡಿ ಕೇಸ್ ಕೊಟ್ಟರೆ ನಿನ್ನನ್ನು ಬಿಡುವುದಿಲ್ಲ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ.
ಕಾಪು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.