
ಕಾಪು: ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ
ಕಾಪು: ನವ ನಿರ್ಮಾಣದತ್ತ ಕಾಪು ಘೋಷಣೆಯೊಂದಿಗೆ ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ರಥ ಯಾತ್ರೆಗೆ ಕಾಪುವಿನಲ್ಲಿಂದು ಚಾಲನೆ ನೀಡಲಾಯಿತು. ಶಾಸಕ ಲಾಲಾಜಿ ಮೆಂಡನ್ ಮತ್ತು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ರಥಯಾತ್ರೆಯನ್ನು ಜೊತೆಯಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ಲಾಲಾಜಿ ಮೆಂಡನ್ ಕಳೆದ ಬಾರಿ ಗೆದ್ದಂತಹ ಈ ಕ್ಷೇತ್ರವನ್ನು ಈ ಬಾರಿ ಪುನರಪಿ ಭಾರೀ ಅಂತರದಿಂದ ಗೆದ್ದು ಕರ್ನಾಟಕದಲ್ಲಿ ನಂಬರ್ ಒನ್ ಕ್ಷೇತ್ರವನ್ನಾಗಿ ರೂಪಿಸಬೇಕು.ಇದಕ್ಕಾಗಿ ಎಲ್ಲರೂ ಕಮಲದ ಗುರುತಿಗೆ ಮತ ಹಾಕಬೇಕು ಎಂದರು.
ಕಾಪು ಅಭ್ಯರ್ಥಿ ಸುರೇಶ್ ಶೆಟ್ಟಿ ಮಾತನಾಡಿ ಕ್ಷೇತ್ರದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಗೆಲ್ಲುವುದು ನಿಶ್ಚಿತ ಎಂಬ ಭರವಸೆ ಮೂಡಿಸುತ್ತಿದೆ. ಗೆದ್ದು ಜನರ ಕನಸನ್ನು ನನಸು ಮಾಡುವ ಜವಾಬ್ದಾರಿ ನೀಡಿದರೆ ಪ್ರಾಮಾಣಿಕವಾಗಿ ನಿಭಾಯಿಸುವ ಮೂಲಕ ಜನಸೇವೆ ಮಾಡಲು ಉತ್ಸುಕನಾಗಿದ್ದೇನೆ ಎಂದರು
ದೆಹಲಿ ಶಾಸಕ ಹಾಗು ಚುನಾವಣಾ ಪ್ರವಾಸಿ ಪ್ರಭಾರಿ ವಿಜಯೇಂದ್ರ ಗುಪ್ತ ಅವರು ಮಾತನಾಡಿ ಶಕ್ತಿ ಕೇಂದ್ರಗಳಲ್ಲಿ ಸರಿಯಾಗಿ ಕೆಲಸ ಆದರೆ ವಿಜಯ ಖಚಿತ.ಇಲ್ಲಿ ಲಾಲಾಜಿ ಮತ್ತು ಗುರ್ಮೆ ರಾಮ ಲಕ್ಷ್ಮಣರಂತೆ ಕೆಲಸ ಮಾಡುತ್ತಿರುವುದರಿಂದ ಗೆಲುವು ಶತಸಿದ್ಧ ಎಂದರು.
ಈ ಸಂದರ್ಭದಲ್ಲಿ ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಚುನಾವಣಾ ಉಸ್ತುವಾರಿಗಳಾದ ಸುಲೋಚನ ಭಟ್, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವೀಣಾ ಶೆಟ್ಟಿ, ಪಕ್ಷದ ಪ್ರಮುಖರು ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿರಿದರು.