
ಕಾರ್ಕಳದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ತನಗೆ ಅವಕಾಶ ನೀಡಿ : ಡಾ.ಮಮತಾ ಹೆಗ್ಡೆ ಮನವಿ
ಉಡುಪಿ: ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ತಾನು ಕಾರ್ಕಳದಿಂದ ಸ್ಪರ್ಧಿಸಲು ಇಚ್ಚಿಸಿದ್ದು ಈಗಾಗಲೇ ಪಕ್ಷದ ನಾಯಕರನ್ನು ಸಹ ಭೇಟಿಯಾಗಿದ್ದೇನೆ. ಒಂದು ವೇಳೆ ಬಿಜೆಪಿ ಪಕ್ಷದ ಟಿಕೇಟ್ ಸಿಗದೆ ಇದ್ದರೆ ಪಕ್ಷೇತರಳಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಡಾ. ಮಮತಾ ಹೆಗ್ಡೆ ಹೇಳಿದ್ದಾರೆ.
ಅವರು ಗುರುವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ತಾನು ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು ಇದಕ್ಕಾಗಿ ಈಗಾಗಲೇ ತಯಾರಿಯನ್ನು ಮಾಡಿಕೊಂಡಿದ್ದೇನೆ. ಕ್ಷೇತ್ರದ ಈಗಿನ ಬಿಜೆಪಿ ಶಾಸಕ ಹಾಗೂ ಪ್ರಭಾವಿ ಸಚಿವರಾದ ಸುನಿಲ್ ಕುಮಾರ್ ಅಧಿಕಾರಾವಧಿಯಲ್ಲಿ ಕಾರ್ಕಳ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿದ್ದು, ತನಗೆ ಅವಕಾಶ ಲಭಿಸಿದ್ದಲ್ಲಿ ಕಾರ್ಕಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವ ದೃಢ ಸಂಕಲ್ಪ ಮಾಡಿದ್ದೇನೆ ಎಂದರು.
ನಾಲ್ಕು ಭಾರಿ ವಿಧಾನ ಸಭೆ ಹಾಗೂ ಒಂದು ಭಾರಿ ಲೋಕ ಸಭೆಗೆ ಮಪಿ ಪಕ್ಷದಿಂದ ಸ್ಪರ್ದಿಸಿರುವ ಸನ್ಮಾನ ವಿ ಸುನಿಲ್ ಕುಮಾರ್ ಅವರು ಕರ್ನಾಟಕ ಸರ್ಕಾರದ ಪಕ್ಷದ ಖಾತೆಯಾದ ಇಂಧನ ಸಚಿವರಾಗಿ ಸುಮಾರು ಎರಡು ವರ್ಷ ಅಧಿಕಾರ ನಡೆಸಿದ್ದು, ಕಾರ್ಕಳ ಅಭಿವೃದ್ಧಿಯಲ್ಲಿ ಹಿನ್ನಡೆಯಲ್ಲಿದ್ದಾರೆ. ಕಾರ್ಕಳ ಕ್ಷೇತ್ರ ಅಭಿವೃದ್ಧಿಯಲ್ಲಿ ವಿಪರೀತ ಹಿನ್ನಡೆ ಕಂಡಿದ್ದು ಕಾರ್ಕಳದಲ್ಲಿ ಇದುವರೆಗೆ ಯಾವುದೇ ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಗೊಂಡಿಲ್ಲ. ಇದರಿಂದಾಗಿ ಹೀಗಾಗಿ ಯುವಕರಿಗೆ ಉದ್ಯೋಗಾವಕಾಶಗಳಿಲ್ಲ ಎಂದರು.
ಕೃಷಿ ಯಾಧಾರಿತ ಬೆಳೆಗಳ ಸಂಸ್ಕರಣೆ, ಮಾರುಕಟ್ಟೆಗೆ ಬೇಕಾದ ವ್ಯವಸ್ಥೆ ಇಲ್ಲ. ಕೃಷಿ ಕಾಲೇಜು ಸ್ಥಾಪನೆಗೂ ಯಾರೂ ಮುಂದಾಗಿಲ್ಲ. ಕಾರ್ಕಳಕ್ಕೆ ಕೊಂಕಣ ರೈಲ್ವೆಯನ್ನು ವಿಸ್ತರಿಸಿ ಧರ್ಮಸ್ಥಳಕ್ಕೆ ಜೋಡಿಸಲು ಯಾರೂ ಮನಸ್ಸು ಮಾಡಿಲ್ಲ ಎಂದರು.
ಕಾರ್ಕಳ ಕ್ಷೇತ್ರದಲ್ಲಿರುವುದು ಗೇರುಬೀಜ ಕಾರ್ಖಾನೆ ಹಾಗೂ ಅಕ್ಕಿ ಗಿರಣಿಗಳು. ಆದರೆ ಇದರಲ್ಲಿ ದುಡಿಯುವ ಬಡ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ತನಗೆ ಸೀಟು ಸಿಕ್ಕಿ ಆಯ್ಕೆಯಾದರೆ ಈ ಎಲ್ಲಾ ಯೋಜನೆಗಳೊಂದಿಗೆ ಯುವಜನತೆಗೆ ಉದ್ಯೋಗಕ್ಕೆ ಆದ್ಯತೆ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ನಾನು ಕಾರ್ಕಳ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಆಯ್ಕೆಯಾಗಿ, ಬಂದರೆ ಪ್ರಾಮಾಣಿಕತೆಯಿಂದ,ಶ್ರದ್ಧೆಯಿಂದ ಈ ಮೇಲೆ ತಿಳಿಸಿದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಮಾಡಿ ಕಾರ್ಕಳ ಕ್ಷೇತ್ರದ ಜನತೆಯ ಋಣವನ್ನು ತೀರಿಸಲು ಬದ್ಧನಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಶಾಲಾಕ್ಷಿ ಶೆಟ್ಟಿ, ವೇದಾವತಿ ಹೆಗ್ಡೆ, ಮಾಯಾ ಶೆಟ್ಟಿ, ವಿನೂತನ ಶೆಟ್ಟಿ, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.