ಕುಂದಾಪುರದಲ್ಲಿ ಬೆಂಕಿ ಅವಘಡ; ಹಲವು ಅಂಗಡಿಗಳು ಸುಟ್ಟು ಭಸ್ಮ
ಕುಂದಾಪುರ: ಕುಂದಾಪುರ ವೆಂಕಟರಮಣ ದೇವಸ್ಥಾನದ ಸಮೀಪದ ಪಟಾಕಿ ಅಂಗಡಿಗೆ ಭೀಕರ ಬೆಂಕಿ ಹೊತ್ತಿಕೊಂಡು, ಅಂಗಡಿಯೊಂದಿಗೆ ಇಡೀ ಕಟ್ಟಡವೇ ಉರಿಯುತ್ತಿದೆ. ಇಂದು ತಡರಾತ್ರಿ ಸುಮಾರು 3 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟಕ ವಸ್ತುಗಳಿದ್ದ ಕಾರಣ ಅಗ್ನಿ ತೀವ್ರಗೊಂಡಿದೆ.

ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಸುದ್ದಿ ಬರೆಯುವಷ್ಟರಲ್ಲಿ ಬೆಂಕಿ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ನಿರಂತರ ಸ್ಫೋಟಗಳ ಶಬ್ದದಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ ಉಂಟಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಬೆಂಕಿಯ ಕಾರಣ ಮತ್ತು ನಷ್ಟದ ವಿವರಗಳನ್ನು ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಪರಿಶೀಲಿಸುತ್ತಿವೆ.