
ಕುಂದಾಪುರ: ಯೋಗಕಲೆ ಭಾರತ ವಿಶ್ವಕ್ಕೆ ನೀಡಿದ ಶ್ರೇಷ್ಠ ಕೊಡುಗೆ – ಕೆ.ರಾಜು
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಕುಂದಾಪುರದ ಪತಂಜಲಿ ಯೋಗ ಸಮಿತಿ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ “ವಿಶ್ವ ಯೋಗ ದಿನಾಚರಣೆ” ಪ್ರಯುಕ್ತ ವಿಶೇಷ ಯೋಗ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ತಾಲೂಕು ಉಪವಿಭಾಗಾಧಿಕಾರಿ ಕೆ.ರಾಜು, ಭಾರತ ವಿಶ್ವಕ್ಕೆ ನೀಡಿದ ಶ್ರೇಷ್ಠ ಕೊಡುಗೆ ಯೋಗಕಲೆ. ಇದನ್ನು ಜೀವನದ ಕಲೆಯಾಗಿಸಿಕೊಳ್ಳಬೇಕು. ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳೋಣ ಎಂದರು.
ಕುಂದಾಪುರದ ಪತಂಜಲಿ ಯೋಗ ಸಮಿತಿಯ ವಿವೇಕ ಪೈ ಮಾತನಾಡಿ, ನಮ್ಮನ್ನು ನಾವು ಅರಿಯಬೇಕು. ಜೀವನದಲ್ಲಿ ಅಷ್ಟಾಂಗ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿ ಮನಸ್ಸಿನ ಏಕಾಗ್ರತೆ ಮತ್ತು ಕುರಿತು ಸರಳ ಯೋಗವಿಧಾನ ಮತ್ತು ಯೋಗಾಭ್ಯಾಸವನ್ನುವನ್ನು ಕಾರ್ಯಾಗಾರದ ಮೂಲಕ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ನೆಹರು ಯುವ ಕೇಂದ್ರ ಉಡುಪಿಯ ಅಧಿಕಾರಿಗಳಾದ ವಿಲ್ಫ್ರೆಡ್ ಡಿಸೋಜ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬಳಿಕ ವಿದ್ಯಾರ್ಥಿ ಸಂದೇಶ್ ಅವರಿಂದ ವಿಶೇಷ ಯೋಗ ಪ್ರದರ್ಶನ ನಡೆಯಿತು. ಬೆಳಿಗ್ಗೆ 6.30ರಿಂದ 11.15ವರೆಗೆ ಯೋಗ ಕಾರ್ಯಕ್ರಮ ನಡೆಯಿತು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು. ಪ್ರೊ.ಸತ್ಯನಾರಾಯಣ ಸ್ವಾಗತಿಸಿದರು.