
ಕುಂದಾಪುರ: ಸರಕಾರಿ ಆಸ್ಪತ್ರೆ ಐಸಿಯುವಿಗೆ 35 ಲಕ್ಷ ರೂ.ಗಳ ಉಪಕರಣಗಳ ಹಸ್ತಾಂತರ
ಕುಂದಾಪುರ: ಸರಕಾರಿ ಆಸ್ಪತ್ರೆಯಲ್ಲಿ ಅಮ್ಮುಂಜೆ ನಾರಾಯಣ ನಾಯಕ್-ರತ್ನಾ ನಾಯಕ್ ಅವರ ಸ್ಮರಣಾರ್ಥ ಅವರ ಮನೆಯವರು ಐಸಿಯುವಿಗೆ ನೀಡಿದ 35 ಲಕ್ಷ ರೂ.ಗಳ ಉಪಕರಣಗಳನ್ನು ಗುರುವಾರ ಹಸ್ತಾಂತರಿಸಲಾಯಿತು.
ಜಿಲ್ಲಾಕಾರಿ ಕೂರ್ಮಾ ರಾವ್ ಎಂ. ಮಾತನಾಡಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮೂಲಕ ಅದನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ನೀಡಿರುವುದು ಶ್ಲಾಘನೀಯ. ಸರಿಯಾದ ನಿರ್ವಹಣೆ, ನುರಿತ ಸಿಬ್ಬಂದಿಯ ಮೂಲಕ ಸೇವೆ ಸಾರ್ವಜನಿಕರಿಗೆ ದೊರೆಯುವಂತಾಗಲಿ. ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಅರ್ಪಿಸಬೇಕೆನ್ನುವ ತುಡಿತ ಇರುವವರು ವಿರಳ. ಅಂತಹವರ ಪೈಕಿ ನಾರಾಯಣ ನಾಯಕ್ ಅವರ ಮನೆಯವರು ಮುಂಚೂಣಿಯಲ್ಲಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ, ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣ ನೋಡೆಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಡಿಟಿಒ ಡಾ| ಚಿದಾನಂದ, ಉಪವಿಭಾಗ ಆಸ್ಪತ್ರೆಯ ಆಡಳಿತ ಶಸಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ, ದಾನಿಗಳ ಮನೆಯವರಾದ ನಿತ್ಯಾನಂದ ನಾಯಕ್, ಡಾ| ಸುಖಾನಂದ ಶೆಣೈ, ಶೋಭಾ ಶೆಣೈ, ತಹಶೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕೋವಿಡ್ ನೋಡೆಲ್ ವೈದ್ಯಾಧಿಕಾರಿ ಡಾ| ನಾಗೇಶ್ ಉಪಸ್ಥಿತರಿದ್ದರು.
ಸಿ| ವೀಣಾ ಸ್ವಾಗತಿಸಿ, ಕೌನ್ಸಿಲರ್ ವೀಣಾ ನಿರ್ವಹಿಸಿ, ಮುಖ್ಯ ಶುಶ್ರೂಷಕಿ ಅನ್ನಪೂರ್ಣ ವಂದಿಸಿದರು.