
ಕೊಪ್ಪಳ ಜಿಲ್ಲಾ ನೂತನ ಎಸ್ಪಿಯಾಗಿ ಯಶೋಧಾ ವಂಟಗೋಡಿ ಅಧಿಕಾರ ಸ್ವೀಕಾರ
ಕೊಪ್ಪಳ: ಐಪಿಎಸ್ ಅಧಿಕಾರಿ ಯಶೋಧಾ ವಂಟಗೋಡಿ ಅವರು ಫೆ.24ರಂದು ಕೊಪ್ಪಳ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ನೂತನ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೂಗುಚ್ಛ ನೀಡಿ ಕೊಪ್ಪಳ ಜಿಲ್ಲೆಗೆ ಆತ್ಮೀಯವಾಗಿ ಬರಮಾಡಿಕೊಂಡರು.
ಯಶೋಧಾ ವಂಟಗೋಡಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು, ಈ ಹಿಂದೆ ಡಿಎಸ್ಪಿಯಾಗಿ ದಕ್ಷಿಣ ಕನ್ನಡ ಮತ್ತು ಕುಂದಾಪುರದಲ್ಲಿ, ಎಸಿಪಿಯಾಗಿ ಹುಬ್ಬಳ್ಳಿಯಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ದಾವಣಗೆರೆಯಲ್ಲಿ, ಡಿಸಿಪಿಯಾಗಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಬೆಳಗಾವಿಯ ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರ ಹುದ್ದೆಯಿಂದ ವರ್ಗಾವಣೆಯಾಗಿ ಕೊಪ್ಪಳ ಜಿಲ್ಲೆಗೆ ಎಸ್ಪಿಯಾಗಿ ಆಗಮಿಸಿದ್ದಾರೆ.
ಬೆಳಗ್ಗೆ ನಡೆದ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಕೊಪ್ಪಳ ಮತ್ತು ಗಂಗಾವತಿ ಡಿಎಸ್ಪಿಗಳಾದ ಶರಣಬಸಪ್ಪ ಸುಭೇದಾರ, ಶೇಖರಪ್ಪ ನಿಂಗಪ್ಪ ಎನ್, ಇನ್ಸಪೆಕ್ಟರಗಳಾದ ಸಂತೋಷ ಹಳ್ಳೂರ, ಸುರೇಶ, ನಿಂಗಪ್ಪ , ಮಂಜುನಾಥ, ಅಡಿವೇಶ ಮತ್ತು ಮಹಾಂತೇಶ ಸಜ್ಜನ ಇತರರು ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಇನ್ನೀತರ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.