
ಕ್ರೈಸ್ತ ಸಮುದಾಯದ ಧರ್ಮಗುರುಗಳ ಮತ್ತು ಧಾರ್ಮಿಕ ಸ್ಥಳಗಳ ಫೋಟೋ ರಾಜಕೀಯಕ್ಕೆ ಬಳಕೆ – ದೂರು ದಾಖಲು
ಮಂಗಳೂರು: ಕ್ರೈಸ್ತ ಸಮುದಾಯದ ಧರ್ಮಗುರುಗಳ ಮತ್ತು ಧಾರ್ಮಿಕ ಸ್ಥಳ (ಚರ್ಚುಗಳ) ಫೋಟೊಗಳನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿರುವುದರ ಬಗ್ಗೆ ಭಾರತೀಯ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟ ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಹೇಳಿದರು.
ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕೆಲವೊಂದು ಜನರು ಕ್ರೈಸ್ತ ಸಮುದಾಯದ ಧರ್ಮಗುರುಗಳ ಭಾವಚಿತ್ರವನ್ನು ಮತ್ತು ಅವರ ಹೇಳಿಕೆಗಳನ್ನು ಚುನಾವಣಾ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಬಳಸಿದ್ದು ಸಮುದಾಯಕ್ಕೆ ನೋವು ತಂದಿದೆ.
ಸಮುದಾಯದ ಧಾರ್ಮಿಕ ಕೇಂದ್ರಗಳಿಗೆ ಹಲವಾರು ವರ್ಷಗಳಿಂದ ಬೇರೆ ಬೇರೆ ಸರಕಾರಗಳಿಂದ ಅನುದಾನಗಳನ್ನು ಕೊಟ್ಟಿದ್ದು ಆಯಾ ಸಮಯದಲ್ಲಿ ನಮಗೆ ಅನುದಾನಕ್ಕೆ ಸಹಾಯ ಮಾಡಿದ ಜನಪ್ರತಿನಿಧಿಗಳು ಧಾರ್ಮಿಕ ಕೇಂದ್ರಕ್ಕೆ ಬಂದಾಗ ಅವರನ್ನು ಗೌರವಿಸಿ ಅವರಿಗೆ ಶುಭ ನುಡಿಯನ್ನು ಹೇಳುವುದು ನಮ್ಮ ಧರ್ಮದ ಸಂಪ್ರದಾಯವಾಗಿದೆ. ಈ ರೀತಿ ನಮ್ಮ ಧರ್ಮಗುರುಗಳು ಜನಪ್ರತಿನಿಧಿಗಳಿಗೆ ಶುಭ ನುಡಿ ಹೇಳಿದ್ದು ಮತ್ತು ಸನ್ಮಾನಿಸಿದ ಭಾವಚಿತ್ರಗಳನ್ನು ಮತ್ತು ಧಾರ್ಮಿಕ ಕೇಂದ್ರದ ಭಾವಚಿತ್ರವನ್ನು ಚುನಾವಣೆಗಾಗಿ ಬಳಸಿ ಸಮುದಾಯಕ್ಕೆ ಅವಮಾನ ಮಾಡಿರುತ್ತಾರೆ. ಕ್ರೈಸ್ತ ಸಮುದಾಯ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿ ಇಲ್ಲ ನಮ್ಮಲ್ಲಿ ಬೇರೆ ಬೇರೆ ಪಕ್ಷದ ಮುಖಂಡರು ನಮ್ಮ ಸಮುದಾಯದಲ್ಲಿ ಇದ್ದಾರೆ. ಹೀಗಾಗಿ ನಮ್ಮ ಸಮುದಾಯವನ್ನು ಒಂದು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸಿ ಅಪಪ್ರಚಾರ ಮಾಡಿರುವಂತವರ ವಿರುದ್ದ ಹಾಗೂ ಧರ್ಮಗುರುಗಳ ಧಾರ್ಮಿಕ ವಸ್ತ್ರದ ಮೇಲೆ ಪಕ್ಷದ ಶಾಲನ್ನು ಎಡಿಟ್ ಮಾಡಿದವರ ವಿರುದ್ದವೂ ಕಾನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಪೀಟರ್ ದಾಂತಿ, ರಾಜ್ಯ ಸಂಚಾಲಕರಾದ ಐವನ್ ಮೊಂತೇರೊ, ದಕ ಜಿಲ್ಲಾ ಸಂಚಾಲಕ ಸಿರಿಲ್ ಫೆರ್ನಾಂಡಿಸ್ ಉಪಸ್ಥೀತರಿದ್ದರು.