ಗಂಡಸು ಕಾಣೆ ಪ್ರಕರಣ ದಾಖಲು: ಪತ್ತೆಗೆ ಪೊಲೀಸರ ಮನವಿ
ಮಂಗಳೂರು: ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಕಲ್ಲರಕೋಡಿಯಲ್ಲಿ ವಾಸವಾಗಿದ್ದ ವ್ಯಕ್ತಿಯೋರ್ವ ಕಾಣೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆ ಮುಂದುವರಿದಿದೆ.
ಪಿರ್ಯಾದಿದಾರರಾದ ರಾಹತ್ ಉನ್ನಿಸಾ (28) ಅವರು ನೀಡಿದ ದೂರಿನ ಪ್ರಕಾರ, ಅವರ ಗಂಡ ಮೊಹಮ್ಮದ್ ಅರ್ಷದ್ (30) ಅವರು ಮಾರ್ಚ್ 23ರಂದು ಸಂಜೆ ಗಾರೆ ಕೆಲಸ ಮುಗಿಸಿ ಮನೆಗೆ ಬಂದು, ಶಿವಮೊಗ್ಗದಲ್ಲಿರುವ ಮಗಳನ್ನು ನೋಡಲು ಹೋಗುವುದಾಗಿ ತಿಳಿಸಿ ರಾತ್ರಿ 8 ಗಂಟೆಗೆ ಮನೆಯಿಂದ ಹೊರಟಿದ್ದರು. ಶಿವಮೊಗ್ಗ ತಲುಪಿದ ಕೂಡಲೇ ಫೋನ್ ಮಾಡುವುದಾಗಿ ತಿಳಿಸಿದ್ದರೂ, ಮರುದಿನ ಬೆಳಗ್ಗೆ ತನಕ ಯಾವುದೇ ಸಂಪರ್ಕವಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಮಾರ್ಚ್ 24ರಂದು ಬೆಳಿಗ್ಗೆ 6 ಗಂಟೆಗೆ ಫೋನ್ ಸಂಪರ್ಕಿಸಲು ಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಶಿವಮೊಗ್ಗದಲ್ಲಿರುವ ಅವರ ತಾಯಿ ಮನೆಗೂ ಹೋಗಿರದಿರುವುದು ತಿಳಿದುಬಂದಿದೆ. ಬಳಿಕ ಎಲ್ಲ ಕಡೆ ಹುಡುಕಾಟ ನಡೆಸಿದರೂ ಈವರೆಗೆ ಯಾವುದೇ ಸುಳಿವು ಸಿಗದ ಕಾರಣ ದೂರು ನೀಡಲಾಗಿದೆ.
ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ: 26/2026 ಅಡಿ ‘ಗಂಡಸು ಕಾಣೆ’ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ವ್ಯಕ್ತಿಯ ವಿವರ:
ಹೆಸರು: ಮೊಹಮ್ಮದ್ ಅರ್ಷದ್
ತಂದೆ: ಮೊಹಮ್ಮದ್ ಫೈಝಲ್
ವಯಸ್ಸು: 30 ವರ್ಷ
ಎತ್ತರ: 5.7 ಅಡಿ
ಚಹರೆ: ಸದೃಢ ದೇಹ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಗಡ್ಡ
ಧರಿಸಿದ್ದ ಉಡುಪು: ಬೂದು ಬಣ್ಣದ ನೈಟ್ ಪ್ಯಾಂಟ್, ಆಕಾಶ ನೀಲಿ ಟೀ-ಶರ್ಟ್, ಕಪ್ಪು ಜಾಕೆಟ್
ಭಾಷೆಗಳು: ಕನ್ನಡ, ತೆಲುಗು, ಉರ್ದು
ಕಾಣೆಯಾದ ವ್ಯಕ್ತಿ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ (ದೂ: 0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (ದೂ: 0824-2220536 / 9480802350) ಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
