ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರುವ ವ್ಯವಸ್ಥೆ ಮಾಡಲಾಗಿದೆ: ಯು.ಟಿ ಖಾದರ್
ಮಂಗಳೂರು: ಬಜೆಟ್ ಅಧಿವೇಶನದ ಮಹತ್ವ, ರಾಜಸ್ವ ಸಂಗ್ರಹ, ಆರ್ಥಿಕ ವ್ಯವಸ್ಥೆಯ ವಿಚಾರ, ಅನುದಾನಗಳ ವರ್ಗೀಕರಣ ಮತ್ತು ಹಂಚಿಕೆ, ಬಳಕೆ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಶಾಸಕರಿಗೆ ಕಾರ್ಯಾಗಾರ ಮಾ. 9ರಂದು ಸಂಜೆ 4 ಗಂಟೆಗೆ ಲಲಿತ್ ಅಶೋಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರವನ್ನು ಮುಖ್ಯಮತ್ರಿ ಸಿದ್ಧರಾಮಯ್ಯ ನಡೆಸಿಕೊಡಲಿದ್ದಾರೆ ಎಂದರು.
ದೇಶದಲ್ಲಿ 17ನೇ ಬಾರಿಗೆ ಬಜೆಟ್ ಮಂಡಿಸಿ, ಆರ್ಥಿಕ ವ್ಯವಸ್ಥೆ ನಿರ್ವಹಣೆ ಬಗ್ಗೆ ಸಂಪನ್ಮೂಲ ಹಾಗೂ ಜ್ಞಾನ ಇರುವ ವ್ಯಕ್ತಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾರೂ ಸಿಗಲಾರರು. ಅವರೇ ಮಾಹಿತಿ ನೀಡಲಿದ್ದು, ಶಾಸಕರು ಈ ಬಗ್ಗೆ ಯಾವುದೇ ರೀತಿಯ ಸಂಶಯ, ಅನುಮಾನಗಳನ್ನು ಈ ಕಾರ್ಯಾಗಾರದಲ್ಲಿ ಪರಿಹರಿಸಿಕೊಳ್ಳಬಹುದು. ಬಜೆಟ್ನ ಭಾಷಣದ ಚರ್ಚೆ ಅಲ್ಲ. ಇಂದಿನ ಶಾಸಕರು ಮುಂದೆ ಹಣಕಾಸು ಸಚಿವರೂ ಆಗಬಹುದು, ಹಾಗಾಗಿ ಅವರೆಲ್ಲರಿಗೂ ಹಣಕಾಸಿನ ನಿರ್ವಹಣೆ ಮತ್ತು ಹಂಚಿಕೆಯ ಕುರಿತಂತೆ ಮಾಹಿತಿಯನ್ನು ಒದಗಿಸುವ ಉದ್ದೇಶ ಈ ಕಾರ್ಯಾಗಾರದ್ದಾಗಿದೆ. ಇಂತಹ ಕಾರ್ಯಾಗಾರ ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದೆ. ಎಲ್ಲಾ ಶಾಸಕರು ತಪ್ಪದೇ ಹಾಜರಿರುವಂತೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಕೆಲ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಈ ಕಾರ್ಯಾಗಾರದಿಂದ ಉತ್ತರ ಸಿಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಆದರೆ ಅಲ್ಲಲ್ಲಿ ಶಾಸಕರು ಉದ್ಘಾಟನೆ, ಶಂಕುಸ್ಥಾಪನೆ ಮಾಡುವುದನ್ನು ಮಾಧ್ಯಮದಲ್ಲಿ ಗಮನಿಸುತ್ತಿರುತ್ತೇನೆ. ಅದು ಯಾವ ಅನುದಾನದಲ್ಲಿ ಆಗುತ್ತಿದೆ ಎಂಬುದು ಗೊತ್ತಿಲ್ಲ. ಪ್ರತಿಯೊಬ್ಬರ ಅಭಿಪ್ರಾಯ ಭಿನ್ನವಾಗಿದ್ದು, ಸ್ಪೀಕರ್ ಆಗಿ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಸಾಲ ಮಾಡಿ ಬಜೆಟ್ ಮಂಡಿಸಲಾಗಿದೆ ಎಂಬ ಟೀಕೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ. ಗ್ರಾ.ಪಂನಿಂದ ಹಿಡಿದು ಪಾರ್ಲಿಮೆಂಟ್ವರೆಗೂ ಟೀಕೆಗಳು ಸಹಜ. ಒಂದು ತಿಂಗಳ ಅಧಿವೇಶನ ಇದೆ. ಅಲ್ಲಿ ಚರ್ಚೆಯಾಗುತ್ತದೆ ಎಂದವರು ಹೇಳಿದರು.
ಉಳ್ಳಾಲ ಕ್ಷೇತ್ರ ವಿಂಗಡನೆ ಆದ ಬಳಿಕ ಬಂಟ್ವಾಳ ತಾಲೂಕಿನ ಸಜಿಪ, ಇರಾ, ಚೇಳೂರು, ಕುರ್ನಾಡು ಮೊದಲಾದ ಪೊಲೀಸ್ ಠಾಣೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಬೇಡಿಕೆ ಇರಿಸಲಾಗಿತ್ತು. ಗಲಾಟೆಗೆ ಮಾತ್ರವಲ್ಲ, ಪಾಸ್ಪೋರ್ಟ್ ಸೇರಿದಂತೆ ಇತರ ಕಾರ್ಯಗಳಿಗೂ ಪೊಲೀಸ್ ಠಾಣೆಯ ಅಗತ್ಯವಿದೆ ಎಂದವರು ಹೇಳಿದರು.
ನೇತ್ರಾವತಿ ಹಳೆದಂಡೆಯ ಕಲ್ಲಾಪುವಿನಿಂದ ಸಜಿಪದವರೆಗೆ ನದಿ ಬದಿಯ ರಸ್ತೆ ಕಾಮಗಾರಿಗೆ 10 ಕೋಟಿ ರೂ.ವರೆಗೆ ಕೆಲಸ ಆಗಿದೆ. ಮತ್ತೆ 50 ಕೋಟಿರೂ. ಮಂಜೂರು ಆಗಿದೆ. ಉಳ್ಳಾಲದಲ್ಲಿ ಶ್ರಮಿಕ ಸ್ಕೂಲ್ ಮಂಜೂರು ಆಗಿದೆ. ತಲಾ 60 ಕೋಟಿ ರೂ. ವೆಚ್ಚದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ರಾಜ್ಯಕ್ಕೆ 10 ಮಂಜೂರಾಗಿದ್ದು, ಒಂದು ಜಿಲ್ಲೆಗೆ ಒದಗಿಸಲು ಬೇಡಿಕೆ ಇರಿಸಲಾಗಿದೆ. ಸ್ಥಳಾವಕಾಶ ಇರುವಲ್ಲಿ ಅದನ್ನು ಸ್ಥಾಪಿಸಬೇಕಾಗಿದೆ. ಇದರಿಂದ ಜಿಲ್ಲೆಯ ಯುವಕರಿಗೆ ಇದರಿಂದ ಪ್ರಯೋಜನ ಆಗಲಿದೆ. ಕಲಿಕೆಗೂ ಉದ್ಯೋಗದ ಸಂದರ್ಭ ಪ್ರಾಯೋಗಿಕ ಅನುಭವಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇಂಜಿನಿಯರಿಂಗ್ ಶಿಕ್ಷಣ ಪಡೆದ ಶೇ. 30ರಿಂದ 40ರಷ್ಟು ಮಂದಿ ಕೆಲಸವಿಲ್ಲದೆ ಸುತ್ತಾಡುವಂತಾಗಿದೆ. ಆದರೆ ಐಟಿಐ ಕಲಿತವರಲ್ಲಿ ಕೆಲಸವಿಲ್ಲದೆ ಸುತ್ತಾಡುವವರ ಸಂಖ್ಯೆ ಶೇ. 10ರಷ್ಟು. ಹಾಗಾಗಿ ಪ್ರಾಯೋಗಿಕ ಕಲಿಕೆ ಅಗತ್ಯವಾಗಿದೆ. ಅದಕ್ಕಾಗಿ ಈ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಅಗತ್ಯವಾಗಿದೆ. ಕರಾವಳಿಗೆ ಅಗತ್ಯವಾದ ಯಾವುದೇ ಕೊಟ್ಟಿಲ್ಲ ಎಂಬ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಿ. ಪೂರಕ ಬಜೆಟ್ನಲ್ಲಿ ಈ ಬಗ್ಗೆ ಗಮನ ಹರಿಸುವ ಸಾಧ್ಯತೆ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸ್ಪೀಕರ್ ಖಾದರ್ ಉತ್ತರಿಸಿದರು.
ಜಯದೇವ ಮತ್ತು ಕಿದ್ವಾಯಿ ಆಸ್ಪತ್ರೆಗಳ ಘಟಕ ಮಂಗಳೂರಿನಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆ ಬಜೆಟ್ನಲ್ಲಿ ಈಡೇರಿಕೆಯಾಗಿಲ್ಲ. ಅದಕ್ಕಾಗಿ ನಿಮ್ಮ ಬೇಡಿಕೆ ಏನು ಎಂಬ ಪ್ರಶ್ನೆಗೆ, ಕೇಳಿದ್ದೆವು. ಆದರೆ ಆಗಿಲ್ಲ. ಸಂಬಂಧಪಟ್ಟ ಸಚಿವರನ್ನು ಈ ಬಗ್ಗೆ ಕೇಳುತ್ತೇವೆ ಎಂದರು.
ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿ ಕಳೆದ ಬಜೆಟ್ನಲ್ಲಿ ಘೋಷಣೆಯಾಗಿತ್ತು. ಈ ಬಜೆಟ್ನಲ್ಲಿ ಅದಕ್ಕೆ ಪೂರಕವಾಗಿ 300 ಹಾಸಿಗೆಗಳ ಆಸ್ಪತ್ರೆಗೆ ಅನುಮೋದನೆಯಾಗಿದೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ರೂಪುರೇಷೆ ಮಾಡಿ, ಅಗತ್ಯ ಹಣಕಾಸಿನ ಬೇಡಿಕೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಿದ್ದಾರೆ. ಅಲ್ಲಿ ಮಂಜೂರಾತಿ ದೊರಕಿದ ಬಳಿಕ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಸಾಕಷ್ಟು ಪ್ರಯತ್ನಿಸಿದ್ದು, ಅವರಿಗೆ ನಮ್ಮ ಬೆಂಬಲವಿದೆ ಎಂದು ಅವರು ಹೇಳಿದರು.
ಗಲ್ಫ್ ರಾಷ್ಟ್ರಗಳಿಗೆ ತೆರಳಿದವರು ಸಂಕಷ್ಟದಲ್ಲಿರುವ ಕುರಿತಾದ ಪ್ರಶ್ನೆಗೆ, ಸಾಕಷ್ಟು ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಮನ್ವಯ ತಂಡವನ್ನು ರಚಿಸಿಕೊಂಡು ಪರಿಸ್ಥಿತಿ ನಿಭಾಯಿಸುವ ವ್ಯವಸ್ಥೆ ಆಗುತ್ತಿದೆ. ಜಿಲ್ಲಾ ಮಟ್ಟದಲ್ಲಿಯೂ ಆನ್ಲೈನ್ ವ್ಯವಸ್ಥೆ ಮೂಲಕ ಸಂಬಂಧಿಕರು ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಇವೆಲ್ಲವನ್ನೂ ಕ್ರೋಢೀಕರಿಸಿಕೊಂಡು ಕ್ರಮ ಆಗಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
