
ಗುತ್ತಿಗೆದಾರರ ಜೇಬು ತುಂಬಿಸಲು ಅಂಬೇಡ್ಕರ್ ಭವನ ನಿರ್ಮಾಣ!
ಚಟುವಟಿಕೆಗಳಿಲ್ಲದೇ ಪಾಳು ಬಿದ್ದಿದೆ ಗೋಪಾಡಿ ಅಂಬೇಡ್ಕರ್ ಭವನ. ಭವನ ನಿರ್ಮಾಣದ ಹಿಂದಿರುವ ಹಿಡನ್ ಅಜೆಂಡಾ ತನಿಖೆಗಾಗಿ ದಸಂಸ ಆಗ್ರಹ.
ಕುಂದಾಪುರ: ದಲಿತರಿಗಾಗಿಯೇ ಆಳುವ ಸರ್ಕಾರಗಳು ತರುತ್ತಿರುವ ಹೊಸ-ಹೊಸ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ ಎಂಬ ಆರೋಪಗಳು ಆಗಾಗೆ ಕೇಳಿ ಬರುತ್ತಲೇ ಇವೆ. ಗೋಪಾಡಿಯಲ್ಲಿ ಕಳೆದ ಆರು ವರ್ಷಗಳ ಹಿಂದೆ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಈ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ದಲಿತರ ಸಬಲೀಕರಣಕ್ಕಾಗಿ ಸರ್ಕಾರ ನಾನಾ ಯೋಜನೆಗಳನ್ನು ಹೊರತರುತ್ತಿದೆ. ಅತ್ಯಂತ ತೀರ ಹಿಂದುಳಿದ ದಲಿತ ಸಮಾಜದ ಕಾರ್ಯ ಚಟುವಟಿಕೆಗಳಿಗೆ ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ದಲಿತ ಸಮಾಜದ ಸಾಂಸ್ಕøತಿಕ, ಇನ್ನಿತರ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿ ಕೊಡುತ್ತಿದೆ. ಆದರೆ ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಗೋಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ದಲಿತರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಗೋಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಚಾವಡಿಬೆಟ್ಟುವಿನಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಕೆ.ಆರ್.ಐ.ಡಿ.ಎಲ್ ಇಲಾಖೆಯಿಂದ 2016-17ನೇ ಸಾಲಿನ ಪರಿಶಿಷ್ಟಜಾತಿ ಯೋಜನೆಯಡಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಇಂದಿಗೂ ಏನೂ ಕಾರ್ಯಚಟುವಟಿಕೆಗಳು ನಡೆಯದೇ ಹಾಗೆಯೇ ಪಾಳು ಬಿದ್ದಿದೆ. ಸರ್ಕಾರದ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಭವನ ನಿರ್ಮಾಣ ಮಾಡಲಾಗಿದೆ. ಬಹುತೇಕ ಪರಿಶಿಷ್ಟಜಾತಿ ಸಮುದಾಯದವರು ವಾಸಿಸುವ ಕೇರಿಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿ ಅವರ ಕಾರ್ಯಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವುದು ಈ ಯೋಜನೆಯ ಸದುದ್ದೇಶ. ಆದರೆ ಗೋಪಾಡಿಯ ಪಡುಚಾವಡಿಬೆಟ್ಟುವಿನ ಅಂಬೇಡ್ಕರ್ ಭವನ ದಲಿತ ಕೇರಿಯಿಂದ ದೂರ ಇತರೆ ಸಮುದಾಯದವರು ನೆಲೆಸುವ ಕೇರಿಯಲ್ಲಿ ನಿರ್ಮಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ರಸ್ತೆಯಲ್ಲೇ ಸಾಗಬೇಕು:
ಗೋಪಾಡಿಯ ಪಡುಚಾವಡಿಬೆಟ್ಟುವಿನಲ್ಲಿ ನಿರ್ಮಾಗೊಂಡ ಅಂಬೇಡ್ಕರ್ ಭವನಕ್ಕೆ ಸೂಕ್ತವಾದ ರಸ್ತೆ ಇಲ್ಲ. ಸಮೀಪದ ಮೂರು ಮನೆಯವರು ತಮ್ಮ ಸ್ವಂತ ಹಣದಿಂದ ತಮ್ಮ ಮನೆಗಳಿಗೆ ಖಾಸಗಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ವಿಶಾಲವಾದ ಸರ್ಕಾರಿ ಜಾಗದಲ್ಲಿ ನಿರ್ಮಿಸಬೇಕಿದ್ದ ಭವನ ಕನಿಷ್ಠ ಆರು ಸೆಂಟ್ಸ್ ಜಾಗದಲ್ಲಿ ಒತ್ತೊತ್ತಾಗಿ ನಿರ್ಮಿಸಲಾಗಿದೆ. ಅಲ್ಲದೇ ಸ್ಥಳೀಯರ ವಿರೋಧ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನೂ ಕೊಟ್ಟಿಲ್ಲ. ಮೇಲ್ನೋಟಕ್ಕೆ ಗಮನಿಸಿದರೆ ಇಲಾಖೆಯ ಹಣ ಗುತ್ತಿಗೆದಾರರ ಜೇಬು ತುಂಬಿಸಲು ಮಾತ್ರವೇ ಈ ಭವನ ನಿರ್ಮಾಣವಾಗಿದೆ ಎನ್ನುವುದು ಖಾತ್ರಿಯಾಗುತ್ತದೆ.
ದಿಕ್ಕು ತಪ್ಪಿಸಿ ಅಂಬೇಡ್ಕರ್ ಭವನ ನಿರ್ಮಾಣ!
ಇತರೆ ಸಮುದಾಯದ ಕುಟಂಬಗಳು ವಾಸಿಸುವ ಪಡುಚಾವಡಿಬೆಟ್ಟುವಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗುವ ಆರಂಭದಲ್ಲಿ ಇಲ್ಲಿನ ಸ್ಥಳೀಯ ನಿವಾಸಿಗಳು ತಡೆ ಹಿಡಿದಿದ್ದರೆನ್ನಲಾಗಿದೆ. ಆಗಿನ ಪಂಚಾಯತ್ ಆಡಳಿತ ಮತ್ತು ಅಧಿಕಾರಿಗಳು, ಗುತ್ತಿಗೆದಾರರು ಸ್ಥಳೀಯರಿಗೆ ಸಮುದಾಯ ಭವನ ಎಂದು ಸುಳ್ಳು ಹೇಳಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸಂಪೂರ್ಣ ಕಟ್ಟಡ ನಿರ್ಮಾಗೊಂಡ ಬಳಿಕ ಅಂಬೇಡ್ಕರ್ ಭವನ ಎಂದು ಹೆಸರಿಡುವಾಗಷ್ಟೇ ಆಡಳಿತ ಮತ್ತು ಅಧಿಕಾರಿಗಳು, ಗುತ್ತಿಗೆದಾರರು ಸುಳ್ಳು ಹೇಳಿರುವುದು ಸ್ಥಳೀಯರಿಗೆ ಅರಿವಾಗಿದೆ.
ದಲಿತರಿಂದ ಭವನವನ್ನು ದೂರ ಇಡುವ ಹುನ್ನಾರ!
ಪಡುಚಾವಡಿಬೆಟ್ಟುವಿನಲ್ಲಿ ನಿರ್ಮಾಗೊಂಡ ಅಂಬೇಡ್ಕರ್ ಭವನಕ್ಕೆ ಸೂಕ್ತ ಸರ್ಕಾರಿ ರಸ್ತೆ ಇಲ್ಲ. ಭವನಕ್ಕೆ ಬರಬೇಕಾದರೆ ಖಾಸಗಿ ರಸ್ತೆಯಲ್ಲಿಯೇ ಬರಬೇಕು. ಈ ಭಾಗದಲ್ಲಿ ಸೌಹಾರ್ದಯುತವಾಗಿ ಬದುಕುವ ದಲಿತರು ಹಾಗೂ ಇತರೆ ಸಮುದಾಯದವರ ಮಧ್ಯೆ ಜಗಳ ತಂದಿಡುವ ಉದ್ದೇಶದಿಂದ ಈ ಭವನ ನಿರ್ಮಿಸಿದ್ದಾರೆ ಎನ್ನುವುದು ಈ ಭಾಗದ ದಲಿತ ಮುಖಂಡರ ಆರೋಪ. ಅಲ್ಲದೇ ಗೋಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ದಲಿತರು ವಾಸಿಸುವ ಸ್ಥಳದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸಾಕಷ್ಟು ಜಾಗಗಳಿವೆ. ಆದರೂ ಈ ಭವನ ದಲಿತರಿಂದ ದೂರ ಇಡುವ ಹುನ್ನಾರದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಂಬೇಡ್ಕರ್ ಭವನ ನಿರ್ಮಾಣಗೊಂಡ ಆರೇಳು ತಿಂಗಳ ಬಳಿಕ ನಮ್ಮ ಗಮನಕ್ಕೆ ಬಂದಿದೆ. ಸುಮಾರು ಆರು ವರ್ಷಗಳಿಂದ ಏನೂ ಕಾರ್ಯಚಟುವಟಿಕೆ ನಡೆಯದೆ ಭವನ ಹಾಗೆಯೇ ಪಾಳು ಬಿದ್ದಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಮಾಜಕಲ್ಯಾಣ ಇಲಾಖೆಯ ಗಮನಕ್ಕೂ ತಂದಿದ್ದೇನೆ. ಇದುವರೆಗೂ ಅವರಿಂದ ಉತ್ತರ ಬಂದಿಲ್ಲ. ಈ ಭವನ ನಿರ್ಮಾಣದ ಹಿಂದಿನ ಉದ್ದೇಶ ತನಿಖೆ ನಡೆಸಬೇಕು ಎಂದು ದಸಂಸ ಮುಖಂಡ ರಾಜು ಬೆಟ್ಟಿನಮನೆ ಆಗ್ರಹಿಸಿದ್ದಾರೆ.
ಕಟ್ಟಡ ನಿರ್ಮಿಸುವಾಗ ಸ್ಥಳೀಯ ದಲಿತ ಮುಖಂಡರ ಅಭಿಪ್ರಾಯ ಪಡೆಯಬೇಕು. ಜಾಗವನ್ನು ಕಾಯ್ದಿರಿಸಿದ ಬಳಿಕ ಕಟ್ಟಡ ನಿರ್ಮಾಣ ಮಾಡುವುದು ನಿಯಮ. ಆದರಿಲ್ಲಿ ಮೊದಲೇ ಕಟ್ಟಡ ನಿರ್ಮಾಣ ಮಾಡಲಾಗಿದೆ. ನಮ್ಮ ಗಮನಕ್ಕೆ ಬಂದ ಬಳಿಕ ಇರುವ ಏಳು ಸೆಂಟ್ಸ್ ಜಾಗವನ್ನು ಕಾಯ್ದಿರಿಸಿ ಆ ಬಳಿಕ ದಾಖಲಾತಿಯಲ್ಲಿ ಸೇರಿಸಿದ್ದೇವೆ. ಹಿಂದಿನ ಅಧಿಕಾರಿಗಳು ಮತ್ತು ಆಡಳಿತ ಕಟ್ಟಡ ನಿರ್ಮಾಣದಲ್ಲಿ ತರಾತುರಿ ಯಾಕೆ ಮಾಡಿದ್ದಾರೆನ್ನುವ ಕುರಿತು ಮಾಹಿತಿ ಇಲ್ಲ ಎಂದು ಕುಂದಾಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ರಾಘವೇಂದ್ರ ವರ್ಣೇಕರ್ ಹೇಳಿದ್ದಾರೆ.