
ಗೃಹಲಕ್ಷ್ಮೀ ಯೋಜನೆಗೆ ಶಾಸಕರ ಗೈರು ಜನವಿರೋಧಿ ನಿಲುವು: ವಿಕಾಸ್ ಹೆಗ್ಡೆ ಕಿಡಿ
- ಶಾಸಕರುಗಳು ಸರ್ಕಾರದ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದಂತೆ ಸರ್ಕಾರದಿಂದ ಸಿಗುವ ವೇತನ, ಭತ್ಯೆ, ಅನುದಾನ ಇತ್ಯಾದಿ ಸೌಲಭ್ಯಗಳನ್ನು ತಿರಸ್ಕರಿಸುತ್ತಾರೆಯೇ?
ಕುಂದಾಪುರ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದ ಬಗ್ಗೆ ಮಾತನಾಡುವ ಜಿಲ್ಲೆಯ ಬಿಜೆಪಿ ಶಾಸಕರುಗಳು ಬುಧವಾರ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಗೃಹಲಕ್ಷ್ಮೀ ಯೋಜನೆಯ ಲೋಕಾರ್ಪಣೆಯನ್ನು ಬಹಿಷ್ಕರಿಸಿದ್ದು ಶಾಸಕರ ಜನವಿರೋಧಿ ನಿಲುವು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ರಾಜ್ಯ ಸರ್ಕಾರದ ಜನಪರ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯು ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಸರ್ಕಾರಿ ಕಾರ್ಯಕ್ರಮವಾಗಿದ್ದು ಇಂತಹ ಕಾರ್ಯಕ್ರಮದಿಂದ ಜಿಲ್ಲೆಯ ಶಾಸಕರುಗಳು ದೂರ ಉಳಿದದ್ದು ಅವರ ಜನವಿರೋಧಿ ಹಾಗೂ ಮಹಿಳಾ ವಿರೋಧಿ ನಿಲುವಾಗಿದೆ. ಚುನಾವಣಾ ಪ್ರಚಾರದ ಸಭೆಯುದ್ಧಕ್ಕೂ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಟೀಕಿಸಿದ ಬಿಜೆಪಿ ಶಾಸಕರುಗಳಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿರುವುದು ಅರಗಿಸಿಕೊಳ್ಳಲು ಸಾಧ್ಯವಾಗದೆ ಇರಬಹುದು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರುಗಳು ಸರ್ಕಾರದ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದಂತೆ ಸರ್ಕಾರದಿಂದ ಸಿಗುವ ವೇತನ, ಭತ್ಯೆ, ಅನುದಾನ ಇತ್ಯಾದಿ ಸೌಲಭ್ಯಗಳನ್ನು ತಿರಸ್ಕರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮ ಹಾಗೂ ಇವರಿಗೆ ಸಿಗುವ ಸೌಲಭ್ಯ ಎಲ್ಲವೂ ಕೂಡ ಜನರ ತೆರಿಗೆ ಹಣದಿಂದಲೇ ಸಿಗುವಂತಹುದು. ಏನೇ ಆದರೂ ಕೂಡ ಸರ್ಕಾರಿ ಕಾರ್ಯಕ್ರಮವನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯಕ್ರಮಗಳಿಂದ ದೂರ ಉಳಿಯುವುದು ಅವರ ಕ್ಷೇತ್ರದ ಜನತೆಗೆ ಮಾಡಿದ ದ್ರೋಹವಾಗುತ್ತದೆ. ಬಿಜೆಪಿ ಶಾಸಕರು ಬರಲಿ ಬಾರದೆ ಇರಲಿ ಗೃಹಲಕ್ಷ್ಮೀ ಯೋಜಯಡಿ ಜಿಲ್ಲೆಯ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮನೆಯ ಯಜಮಾನಿಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ ಅವರ ಖಾತೆಗೆ ಜಮಾ ಆಗುತ್ತದೆ. ಕೇವಲ ಭಾವನಾತ್ಮಕ ವಿಚಾರಗಳ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಯವರು ಯಾವತ್ತೂ ಅಭಿವೃದ್ಧಿ ಹಾಗೂ ಜನಹಿತ ಕಾರ್ಯಕ್ರಮಗಳ ವಿರೋಧಿಗಳು ಎನ್ನುವುದು ಸಾಬೀತಾಗುತ್ತಿದೆ ಎಂದು ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.